ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನವೆಂದ ಶಾಸಕರು
ಮೋರಟಗಿ: ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದರು.
ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿ ಗಬಸಾವಳಗಿ ಗ್ರಾಮದ ಬಸ್ ನಿಲ್ದಾಣ ಬಳಿ ಅವಳಿ ಗ್ರಾಮಸ್ಥರು ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅವರು ಮಾತನಾಡಿದರು.
ನಾನು ಬೆಂಗಳೂರಿನಲ್ಲಿ ಇದ್ದಾಗಲೇ ತಾವು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದು ಇಲ್ಲಿಗೆ ಆಗಮಿಸಿದ್ದೇನೆ. ನಾನು ಯಾವತ್ತೂ ಹೋರಾಟಗಾರರೊಂದಿಗೆ ಇದ್ದೇನೆ. ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಕಾರ್ಯವನ್ನು ಕೂಡಲೇ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಎರಡು ಗ್ರಾಮಗಳ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಆದ್ಯತೆ ಮೇರೆಗೆ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಬೇಡಿಕೆ ಈಡೇರದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಹೇಳುತ್ತಿದ್ದು, ಅಂಥ ನಿರ್ಧಾರಕ್ಕೆ ಮುಂದಾಗಬಾರದು. ಮತದಾನ ಅಮೂಲ್ಯ ಮತ್ತು ಪ್ರತಿಯೊಬ್ಬರ ಹಕ್ಕಾಗಿದ್ದು, ಅರ್ಹರೆಲ್ಲ ಮತದಾನ ಮಾಡಬೇಕು ಎಂದು ಶಾಸಕರು ವಿನಂತಿಸಿದರು.
ಸತ್ಯಾಗ್ರಹ ನಿರತರು ಮಾತನಾಡಿ, ಆಲಮೇಲ ತಾಲೂಕಿಗೆ ಸೇರಿಸಿದ ಎರಡೂ ಗ್ರಾಮಗಳನ್ನು ಸಿಂದಗಿಗೆ ಸೇರಿಸಬೇಕು ಎಂದು ಕೋರಿ ಈಗಾಗಲೇ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಕೂಡ ನಡೆಸಲಾಗಿದೆ. ನಂತರ ೧೪ ದಿನ ಅನಿರ್ದಿಷ್ಟಾವಧಿ ಧರಣಿ ಕೂಡ ನಡೆಸಲಾಗಿದೆ. ಆಗಲೂ ಅಧಿಕಾರಿಗಳು ಕ್ಯಾರೆ ಎನ್ನದಿದ್ದಾಗ ಪತ್ರಿಕಾಗೋಷ್ಠಿ ನಡೆಸಿ ಮಾ.೨೩ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸದ್ಯ ಶಾಸಕರ ಭರವಸೆ ಮೇರೆಗೆ ಉಪವಾಸ ಕೈಬಿಡಲಾಗುವುದು ಎಂದರು.
ಶಾಸಕರು ಎಳೆನೀರು ಕುಡಿಸಿದ ನಂತರ ಉಪವಾಸ ಅಂತ್ಯಗೊಳಿಸಲಾಯಿತು.
ಮಾಜಿ ಜಿ ಪಂ ಸದಸ್ಯ ಮಹಾಂತಗೌಡ ಪಾಟೀಲ್, ಚಂದ್ರಶೇಖರ ದೇವರೆಡ್ಡಿ, ಪ್ರಬುಗೌಡ ಬಿರಾದರ ಅದ್ಯಕ್ಷರು ಹೊರಾಟ ಸಮಿತಿ, ಸಾಹೇಬಗೌಡ ಬಿರಾದಾರ, ಬಂಗಾರೆಪ್ಪಗೌಡ ಬಿರಾದಾರ, ಬಾಬಾಗೌಡ ಬಿರಾದರ, ಶಾಂತಗೌಡ ಬಿರಾದಾರ, ಗಂಗಪ್ಪಗೌಡ ಬಿರಾದಾರ, ಶಿವಶರಣ ಹೇಳವರ, ಮಲ್ಲಯ್ಯ ಹಿರೆಮಠ, ಬಸನಗೌಡ ಬಿರಾದಾರ, ಬಾಬುರೆಡ್ಡಿ ಬಿರಾದಾರ ಇದ್ದರು.

