– ಇಲಾಹಿ ಇ ಜಮಖಂಡಿ
ಚಿಮ್ಮಡ: ಬಣ್ಣ ಆಡುವುದೇ ಹೋಳಿ ಹಬ್ಬದಲ್ಲಿ ಪ್ರಧಾನ. ಅದಕ್ಕೆಂದೇ ಅದು ರಂಗಿನ ಹಬ್ಬವೆಂದು ದೇಶಾದ್ಯಂತ ಮನೆಮಾತಾಗಿದ್ದರೂ ಇಲ್ಲೊಂದು ಗ್ರಾಮದಲ್ಲಿ ಬಣ್ಣದಾಟವಿಲ್ಲದೆಯೇ ಪ್ರತೀವರ್ಷ ಹೋಳಿ ಆಚರಣೆ ನಡೆಯುತ್ತಿರುವುದು ಈ ಭಾಗದಲ್ಲಿ ವಿಶೇಷವೆನಿಸಿದೆ.
ರಬಕವಿ-ಬನಹಟ್ಟಿ ತಾಲೂಕು ಚಿಮ್ಮಡ ಗ್ರಾಮದಲ್ಲಿ ಯಾವುದೇ ಬಣ್ಣ ಎರಚದೆ ಕಳೆದ ಮೂವತೈದು ವರ್ಷಗಳಿಂದ ವಿಶಿಷ್ಟ ರೀತಿಯ ಹೋಳಿ ಆಚರಣೆಗೆ ಮನೆಮಾತಾಗಿದೆ.
ಹೋಳಿಹಬ್ಬ ಬಂತೆಂದರೆ ಹಳೆ ಬಟ್ಟೆ ಧರಿಸಿ ಎಲ್ಲರು ಬಣ್ಣದಾಟಕ್ಕೆ ಅಣಿಯಾಗುತ್ತಾರೆ. ಆದರೆ ಇಲ್ಲಿನ ದರ್ಜಿಗಳಿಗೆ ಹೋಳಿ ಹಬ್ಬದ ಸಮಯದಲ್ಲಿ ಹಗಲು ರಾತ್ರಿ ಕೆಲಸ. ಕಬ್ಬು ಕಡಿಯುವವರ ತಂಡಗಳು, ಆಲೆಮನೆ ತಂಡಗಳು, ಗೌಂಡಿ(ಮೇಸ್ತ್ರಿ)ಗಳ ತಂಡಗಳು, ಇಡೀ ತಂಡಕ್ಕೆ ಒಂದೇ ಬಣ್ಣದ ಬಟ್ಟೆ ಖರೀದಿಸಿ ಹೊಲಿಯಲು ಹಾಕುತ್ತಾರೆ ಹುಣ್ಣಿಮೆಯ ಮಾರನೆ ದಿನ (ಕರೀದಿನ) ಎಲ್ಲರು ಒಮ್ಮೆಗೆ ಹೊಸ ಬಟ್ಟೆ ಧರಿಸಿ ಹೋಳಿ ಹಾಡುಗಳನ್ನು ಹಾಡುತ್ತಾ ಊರು ಸುತ್ತುವುದನ್ನು ನೋಡಿದರೆ ಜನಪದ ಕಲೆ ಇನ್ನು ಜೀವಂತವಿದೆ ಅನ್ನಿಸದಿರದು.
ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ದಿನ ಬಣ್ಣ ಎರಚಾಡದಂತೆ ಗ್ರಾಮ ಪಂಚಾಯತಿಯಿಂದ ಡಂಗುರ, ಧ್ವನಿವರ್ಧಕಗಳ ಮೂಲಕ ಗ್ರಾಮದ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಮನವಿ ಮಾಡಲಾಗುತ್ತದೆ, ಬಣ್ಣ ಆಡುವ ಮನಸಿದ್ದವರು ಪರಸ್ಥಳಕ್ಕೆ ಹೋಗಿ ಆಡುವಂತೆ ತಾಕೀತು ಮಾಡಲಾಗುತ್ತದ್ದು ಕಳೆದ ಮೂವತ್ತು ವರ್ಷಗಳಿಂದ ಈ ಪರಂಪರೆ ನಡೆದುಕೊಂಡು ಬರುತ್ತಿದೆ.
ಹಿನ್ನಲೆ: ಈ ಮೊದಲು ಎಲ್ಲ ಗ್ರಾಮಗಳಂತೆ ಇಲ್ಲಿಯೂ ಬಣ್ಣ ಎರಚುವ ಮೂಲಕವೇ ಹೋಳಿ ಆಚರಿಸಲಾಗುತ್ತಿತ್ತು. ಆದರೆ ಕಳೆದ ಮೂವತ್ತು ವರ್ಷಗಳ ಹಿಂದೆ ಹೋಳಿ ಆಚರಿಸುವ ಸಂಧರ್ಭದಲ್ಲಿ ಕೆಲ ಕಿಡಿಗೇಡಿಗಳು ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಬಣ್ಣ ಕೊಳ್ಳಲು ಹಣ ಕೇಳಲು ಪ್ರಯತ್ನಿಸಿದರು. ಒಂದು ಬಸ್ನಲ್ಲಿದ್ದ ಪ್ರಯಾಣಿಕರು ಹಣ ನೀಡಲು ನಿರಾಕರಿಸಿದ್ದರಿಂದ ಬಸ್ಗೆ ಕಲ್ಲು ತೂರಿ ಇಡೀ ಬಸ್ಸನ್ನೇ ಜಖಂಗೊಳಿಸಿದ್ದರು. ಈ ಸುದ್ದಿ ತಿಳಿದು ಗ್ರಾಮಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಹಲವು ಜನರನ್ನು ಬಂಧಿಸಲು ಯತ್ನಿಸಿದಾಗ ಗ್ರಾಮದ ಮುಖಂಡರು ಅವರನ್ನು ರಕ್ಷಿಸಿದರು. ಆಗಿನಿಂದ ಗ್ರಾಮದಲ್ಲಿ ಹೋಳಿ ಹುಣ್ಣಿಮೆಯ ಕರಿ ದಿನದಂದು ಬಣ್ಣ ಆಡುವುದನ್ನೇ ನಿಷೇದಿಸಿ ಅದನ್ನು ಇಂದಿನವರೆಗೆ ಪಾಲಿಸಿಕೊಂಡು ಬರಲಾಗುತ್ತಿದೆ.
ಹರದೇಶಿ ನಾಗೇಶಿ ಕಾರ್ಯಕ್ರಮ; ಹೋಳಿ ಹಬ್ಬದ ಪ್ರಯುಕ್ತ ಹುಣ್ಣಿಮೆ ದಿನ ಸೋಮವಾರ ಬೆಳಗ್ಗೆ ೬ ಗಂಟೆಗೆ ಗ್ರಾಮ ಚಾವಡಿ ಪಕ್ಕದ ಕಾಮಣ್ಣನ ಕಟ್ಟೆ ಮೇಲೆ ರತಿ ಕಾಮರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತದೆ, ಇಡೀ ದಿನ ಗ್ರಾಮಸ್ಥರು ರತಿ ಕಾಮರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಂಜೆ ನಾನಾ ಜನಪದ ತಂಡಗಳಿಂದ ಗೀಗಿ ಪದಗಳು, ಕಾಮಣ್ಣ ಸೇವಾ ಸಮಿತಿ ನೇತ್ರತ್ವದಲ್ಲಿ ಗ್ರಾಮದ ರೇಣುಕಾ ಗೋವಿಂದಗೋಳ ನೇತ್ರತ್ವದ ಪ್ರಭುಲಿಂಗೇಶ್ವರ ಮಹಿಳಾ ಗಾಯನ ಸಂಘ ಹಾಗೂ ದುರ್ಗಾದೇವಿ ಗಾಯನ ಸಂಘ ಹೊಸೂರ ಇವರಿಂದ ‘ಹರಿದೇಶಿ ನಾಗೇಶಿ ಜನಪದ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ.
ಮಂಗಳವಾರ ಬೆಳಗ್ಗೆ ಗ್ರಾಮದ ಪ್ರಯುಖ ಬೀದಿಗಳಲ್ಲಿ ನಡೆಯುವ ‘ರತಿ ಕಾಮರ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಗ್ರಾಮಸ್ಥರಲ್ಲದೆ ನೆರೆಯ ಗ್ರಾಮ ಪಟ್ಟಣಗಳಿಂದ ಜನರು ಗ್ರಾಮಕ್ಕೆ ಆಗಮಿಸಿ ಈ ಕಾಮದಹನದಲ್ಲಿ ಪಾಲ್ಗೊಳ್ಳುತ್ತಾರೆ. ಇಡೀ ದಿನ ಗ್ರಾಮದಲ್ಲಿ ವಿಹಾರ ಮಾಡಿ ಗ್ರಾಮದ ಪ್ರಭುಲಿಂಗೇಶ್ವರ ದರ್ಶನ ಪಡೆಯುವ ಮೂಲಕ ಬಣ್ಣದಾಟದಿಂದ ಅವರು ಬಚಾವ್ ಆಗುತ್ತಾರೆ. ಒಂದು ಕಾಲದಲ್ಲಿ ಕಿಡಿಗೇಡಿಗಳು ನಡೆಸಿದ ದುಷ್ಕೃತ್ಯ ಈ ಗ್ರಾಮದ ಜನರು ಪರಸ್ಪರ ಬಣ್ಣ ಎರಚಾಡದಂತೆ ಮಾಡಿದ್ದು ಗ್ರಾಮಸ್ಥರಿಗೆ ಒಳ್ಳೆಯದೇ ಆಗಿದ್ದು, ಈ ಪ್ರವೃತಿ ಹೀಗೇ ಮುಂದುವರಿಯಲಿ ಎಂದು ಗ್ರಾಮದ ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

