ಇಂಗಳಗಿ ಕೆರೆಗೆ ನೀರು ಪೂರೈಸುವ ಕಾಲುವೆ ಒಡೆದ ಪ್ರದೇಶಕ್ಕೆ
ರೈತರ ಭೇಟಿ | ಪ್ರತಿಭಟನೆ ಎಚ್ಚರಿಕೆ
ದೇವರಹಿಪ್ಪರಗಿ: ಗ್ರಾಮೀಣ ಕೆರೆಗಳಿಗೆ ನೀರು ಪೂರೈಸುವ ಕಾಲುವೆ ಒಡೆದು, ಪಡಗಾನೂರ ಗ್ರಾಮ ವ್ಯಾಪ್ತಿಯಲ್ಲಿನ ಕಲ್ಲು ಕ್ರಶರ್ಗಳ ಮಾಲೀಕರು ಅನಧಿಕೃತವಾಗಿ ನೀರು ಪಡೆಯುತ್ತಿರುವ ಪ್ರದೇಶಕ್ಕೆ ಇಂಗಳಗಿ ಗ್ರಾಮದ ರೈತರು ತೆರಳಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಇಂಗಳಗಿ ಗ್ರಾಮದ ರೈತರು ತಮ್ಮ ಕೆರೆಗೆ ನೀರು ಪೂರೈಸುವ ಕಾಲುವೆಗೆ ಗುರುವಾರ ತೆರಳಿ ವಾಸ್ತವಿಕ ಸ್ಥಿತಿ ನೋಡಿ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗೆ ಮಾಹಿತಿ ನೀಡಿ ವಾಗ್ವಾದ ನಡೆಸಿದರು. ಹಾಗೂ ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತರಾದ ಸಂತೋಷ ಬಿರಾದಾರ, ಮಂಜುನಾಥ ಕೊಕಟನೂರ ಮಾತನಾಡಿ, ಪಡಗಾನೂರ ಗ್ರಾಮದ ಪ್ರಭಾವಿ ನಾಯಕರು ಸೇರಿದಂತೆ ವಿವಿಧ ಕ್ರಶರ್ಗಳು ಅಕ್ರಮವಾಗಿ ನೀರು ಪಡೆಯುತ್ತಿವೆ. ಇದನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ನೋಡಿದ್ದರು ಸಹ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಅಧಿಕಾರಿ ರೈತರೊಂದಿಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಜನ, ಜಾನುವಾರಗಳಿಗೆ ಕುಡಿಯುವ ನೀರು ಅಗತ್ಯವಾದ ಹಿನ್ನಲೆಯಲ್ಲಿ ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ. ಯಾವುದೇ ರೈತರು ಅನಗತ್ಯವಾಗಿ ನೀರು ಪಡೆದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಎಚ್ಚರಿಕೆ ನೀಡಿದ್ದಾರೆ. ಈಗ ನೋಡಿದರೆ ಅವರದೇ ಪಕ್ಷದ ನಾಯಕರು ಹಾಗೂ ಕಲ್ಲು ಕ್ರಶರ್ ಮಾಲೀಕರು ತಮ್ಮ ಕಲ್ಲುಗಣಿಗಳನ್ನು ತುಂಬಿಸಿರುತ್ತಾರೆ. ಇವರ ಮೇಲೆ ಯಾವುದೇ ಕಾನೂನುಕ್ರಮ ಇಲ್ಲವೇ ಹೇಗೆ? ಸಾಮಾನ್ಯರಿಗೊಂದು ನ್ಯಾಯ, ಇವರಿಗೊಂದು ನ್ಯಾಯವೇ ಹೇಗೆ? ಈ ಕುರಿತು ಆಧುನಿಕ ಭಗೀರಥರಾದ ಸಚಿವರೇ ಕ್ರಮವಹಿಸಲು ಮುಂದಾಗಬೇಕು ಎಂದರು.
ಜಿಲ್ಲಾ ಆಡಳಿತ ಕಾಲುವೆ ಮೂಲಕ ಕ್ರಶರ್ಗಳು ನೀರು ಪಡೆಯುವದನ್ನು ತಡೆಯಬೇಕು. ಕ್ರಶನ್ ಮಾಲೀಕರಿಗೆ ಈ ಕುರಿತು ನೋಟಿಸ್ ನೀಡಬೇಕು. ಜನತೆ ಹಾಗೂ ರೈತರ ಹಿತ ಕಾಯದೇ ಬೇಕಾಬಿಟ್ಟಿಯಾಗಿ ಕಾಲುವೆ ಒಡೆದು ನೀರು ಪಡೆಯುವವರ ಮೇಲೆ ಕಾನೂನು ಕ್ರಮ ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರಾದ ಅರುಣ ಹುಗ್ಗಿ, ಸಿದ್ದಪ್ಪ ತಳವಾರ, ಸಂಗು ಪೂಜಾರಿ, ಸಂತೋಷ ಇಂಡಿ ಶಂಕರಗೌಡ ಬಿರಾದಾರ, ಶಿವು ಕೋಣ್ಣೂರ, ಸಂಜೀವ ಗೊಡ್ಯಾಳ, ಮಂಜುನಾಥ ಚೌಧರಿ ಇದ್ದರು.

