ಚುನಾವಣಾ ಪ್ರಚಾರಕ್ಕಾಗಿ ವಿಕಸಿತ ಭಾರತ ಎಲ್.ಇ.ಡಿ ವಾಹನಗಳಿಗೆ ಶಾಸಕ ಟೆಂಗಿನಕಾಯಿ ಚಾಲನೆ
ವಿಜಯಪುರ: ಸಾಮಾನ್ಯ ಕಾರ್ಯಕರ್ತನಿಗೂ ಪಕ್ಷ ಟಿಕೆಟ್ ಕೊಟ್ಟಾಗ ಎಲ್ಲಾ ಕಾರ್ಯಕರ್ತರು ಗೆಲ್ಲಿಸಲು ಬೆನ್ನಿಗೆ ನಿಲ್ಲುತ್ತಾರೆ ಎನ್ನುವದಕ್ಕೆ ನಾನೇ ಸಾಕ್ಷಿ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಲೋಕಸಭಾ ಚುನಾವಣಾ ನಿಮಿತ್ಯ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸಂಜೆ ಜರುಗಿದ ಚುನಾವಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಬೆಳಗಾವಿ, ರಾಯಚೂರು, ಬಳ್ಳಾರಿ, ಧಾರವಾಡ ಸೇರಿದಂತೆ ಬೇರೆ ವಿಭಾಗಗಳಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಮಾಡಿದಾಗಲೂ ವಿಜಯಪುರ ಜಿಲ್ಲೆಯ ಕಾರ್ಯಕರ್ತರು ಅತ್ಯಂತ ಪ್ರೀತಿ ವಿಶ್ವಾಸ ತೋರಿಸಿದ್ದಾರೆಂದು ತಿಳಿಸಿದರು.
ಚುನಾವಣೆ ಎದುರಿಸುವಾಗ ಅನೇಕ ಸುಲಭ ಹಾಗೂ ಕಠಿಣ ಕೆಲಸಗಳು ವಿಜಯಪುರ ಜಿಲ್ಲೆಯಿಂದಲೂ ಬಂದಿದ್ದವು. ಅದೆಲ್ಲವನ್ನು ಕಾರ್ಯಗತ ಮಾಡಿಕೊಂಡು ಹುಬ್ಬಳ್ಳಿ-ಧಾರವಾಡದಲ್ಲಿ ನನ್ನಂತ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೊಡುತ್ತಾರೆಂಬುದು ಯಕ್ಷಪ್ರಶ್ನೆಯಾಗಿತ್ತು. ಆದರೆ ಪಕ್ಷ ಕಠಿಣ ನಿರ್ಧಾರವನ್ನು ತೆಗೆದುಕೊಂಡು ಅತ್ಯಂತ ತುರುಸಿನ ಚುನಾವಣೆಯಾಗಿತ್ತು. ಅಂತಹ ಸಂದರ್ಭದಲ್ಲಿ ಇಬ್ಬರು ಮೂವರನ್ನು ಹೊರತುಪಡಿಸಿದರೆ ಬೇರೆ ಕಾರ್ಯಕರ್ತರು ಹೊರಗೆ ಹೋಗದಂತೆ ನೋಡಿಕೊಂಡಿದ್ದೆವು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಲೋಕಸಭಾ ಚುನಾವಣೆಯನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಯಶಸ್ವಿ ಚುನಾವಣೆ ಆಗಬೇಕು. ಜಿಲ್ಲಾದ್ಯಂತ ಪ್ರವಾಸ ಮಾಡಿ ಎಲ್ಲ ಕಾರ್ಯಕರ್ತರನ್ನು ಸುಸಜ್ಜಿತವಾಗಿ ಸಜ್ಜುಗೊಳಿಸಿ ಚುನಾವಣೆಯನ್ನು ಎದುರಿಸಬೇಕು ಎಂದು ಹೇಳಿದರು.
ಮಹೇಶ ಟೆಂಗಿನಕಾಯಿ ಅವರಿಗೆ ವಿಜಯಪುರ ಜಿಲ್ಲೆಗೆ ಅತ್ಯಂತ ಅವಿನಾಭವ ಸಂಬಂಧ ಹೊಂದಿದ್ದಾರೆ. ಅವರು ಕಳೆದ ವರ್ಷ ವಿಧಾನಸಭೆ ಚುನಾವಣೆ ಎದುರಿಸುತ್ತಿರುವಾಗ ಜಿಲ್ಲೆಯ ಪದಾಧಿಕಾರಿಗಳು ಕಾರ್ಯಕರ್ತರು ಟೆಂಗಿನಕಾಯಿ ಅವರು ಹೆಚ್ಚಿನ ಮತಗಳಿಂದ ಆಯ್ಕೆಯಾಗಬೇಕೆಂಬ ನಿರೀಕ್ಷೆ ಇತ್ತು. ಅದನ್ನು ಮೀರಿ ೩೮ ಸಾವಿರ ಮತಗಳಿಂದ ಆಯ್ಕೆಯಾದವರು ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮುಖಂಡರಾದ ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ಪ್ರಕಾಶ ಅಕ್ಕಲಕೋಟ,ಸಾಬು ಮಾಶ್ಯಾಳ, ಸ್ವಪ್ನಾ ಕಣಮುಚನಾಳ, ಚಂದ್ರಶೇಖರ ಕವಟಗಿ, ಈರಣ್ಣಾ ರಾವೂರ ಸೇರಿದಂತೆ ಮುಖಂಡರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ವಿಕಸಿತ ಭಾರತ ಎಲ್.ಇ.ಡಿ ವಾಹನಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.

