ತಾಲ್ಲೂಕು ಮಟ್ಟದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೌನ್ ಬನೇಗಾ ವಿದ್ಯಾಧಿಪತಿ ಕಾರ್ಯಕ್ರಮ ಉದ್ಘಾಟನೆ
ಇಂಡಿ: ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಒಳ್ಳೆಯ ಶಿಕ್ಷಣ ಪಡೆದುಕೊಳ್ಳಿ, ಪ್ರಪಂಚದ ಜೊತೆಗೆ ಸ್ಪರ್ಧೆಯಿದೆ. ಆದರೆ ಇದರ ಜೊತೆಗೆ ಸಂಸ್ಕಾರವಂತರಾಗಿ ನಿಮ್ಮ ಪಾಲಕರಿಗೆ ಗೌರವಿಸಿ, ಆಗ ಮಾತ್ರ ನಿಮ್ಮ ಜೀವನ ಪಾವನವಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಬುಧವಾರ ಇಂಡಿ ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಮತ್ತು ಶಿಕ್ಷಕರ ಸಂಘಟನೆಗಳ ಸಹ ಯೋಗದಲ್ಲಿ ತಾಲ್ಲೂಕು ಮಟ್ಟದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕೌನ್ ಬನೇಗಾ ವಿದ್ಯಾಧಿಪತಿ ಕಾರ್ಯಕ್ರಮವನ್ನು ಪ್ರಶ್ನೆಗೆ ಉತ್ತರ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ ಅಗತ್ಯವಾಗಿದೆ. ಮೊದಲು ಪಾಟೀಲ ಪುಟ್ಟಪ್ಪನವರು ಹೊರತರುತ್ತಿರುವ “ಪ್ರಪಂಚ”ಎನ್ನುವ ಪುಟ್ಟ ವಾರ ಪತ್ರಿಕೆ ಎಲ್ಲರಿಗೂ ಪ್ರಪಂಚದ ಜ್ಞಾನ ನೀಡುತ್ತಿತ್ತು ಎಂದು ಪಾಟೀಲ ಪುಟ್ಟಪ್ಪನವರನ್ನು ನೆನಪಿಸಿಕೊಂಡರು.
ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ.ಆಲಗೂರ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪ್ರಯೋಗವನ್ನು ಮಾಡಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.
ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿದರು.
ವಿಜಯಪುರ ಜಿಲ್ಲಾ ಪ್ರೌಢ ಶಾಲೆಗಳ ಅಧ್ಯಕ್ಷ ಶಿವರಾಜ ಬಿರಾದಾರ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ಎಸ್.ಹರಳಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡಗಡ್ಡಿ, ಎ.ಎಸ್.ಲಾಳಸೇರಿ, ಪ್ರಭು ಚಾಂದಕವಠೆ, ಸಂತೋಷ ಪಾಟೀಲ, ಎ.ಓ,ಹೂಗಾರ ಇದ್ದರು.
ಸಮನ್ವಯಾಧಿಕಾರಿ ಎಸ್.ಆರ್.ನಡಗಡ್ಡಿ ಸ್ವಾಗತಿಸಿದರು. ಬಸವರಾಜ ಗೊರನಾಳ ನಿರೂಪಿಸಿದರು.

