ಇಂಡಿ: ಬೀದಿನಾಯಿಗಳು ದಾಳಿ ನಡೆಸಿ ಐದು ಕುರಿಗಳನ್ನು ಸಾಯಿಸಿ, ಮೂರು ಕುರಿಗಳನ್ನು ಗಾಯಗೊಳಿಸಿರುವದರಿಂದ ಕುರಿಗಳನ್ನು ಕಳೆದುಕೊಂಡಿರುವ ಕುರಿಗಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಪಟ್ಟಣದ ಚವಡಿಹಾಳ ರಸ್ತೆಯ ಪಕ್ಕದ ಜಮೀನಿನ ರೈತರು ಒತ್ತಾಯಿಸಿದರು.
ದತ್ತು ಹೇಳವರ ಎಂಬುವವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಕುರಿ ಸಾಕಾಣಿಕೆಯನ್ನೇ ಅವಲಂಬಿಸಿದ್ದಾರೆ. ಇದೀಗ ಬೀದಿ ನಾಯಿಗಳು ಕೃತ್ಯದಿಂದ ಅವರೆಲ್ಲಾ ತಮ್ಮ ಕುರಿಗಳನ್ನು ಕಳೆದುಕೊಂಡು ಆತಂಕಕ್ಕೀಡಾಗಿದ್ದಾರೆ.
ಎಂದಿನಂತೆ ದತ್ತು ಹೇಳವರ ಸಮೀಪದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಆಗ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಸುಮಾರು ೫೦ರಿಂದ ೬೦ ಬೀದಿ ನಾಯಿಗಳ ಹಿಂಡು ಸಿಕ್ಕ ಸಿಕ್ಕ ಕುರಿಗಳನ್ನು ಕಚ್ಚಲು ಆರಂಭಿಸಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ ವೇಳೆಗೆ ನಾಯಿಗಳು ಓಡಿ ಹೋಗಿವೆ. ಆದರೆ ಅಷ್ಟರಲ್ಲಾಗಲೇ ನಾಯಿಗಳು ೫ ಕುರಿಗಳ ಕುತ್ತಿಗೆಗೆ ಕಚ್ಚಿ ರಕ್ತ ಕುಡಿದು ಸಾಯಿಸಿವೆ. ೩ ಕುರಿಗಳು ನಾಯಿಗಳ ದಾಳಿಗೆ ಗಂಭೀರ ಗಾಯಗೊಂಡಿವೆ.
ಕುರಿಗಳಿಂದಲೇ ನಮ್ಮ ಕುಟುಂಬದ ಜೀವನ ಸಾಗುತ್ತಿತ್ತು. ಈ ಘಟನೆಯಿಂದ ನಮ್ಮ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ದಯವಿಟ್ಟು ನಮಗೆ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಕುರಿ ಮಾಲೀಕ ದತ್ತು ಹೇಳವರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಮನವಿ ಮಾಡಿದರು.
ನಾಯಿ ದಾಳಿಯಿಂದಾಗಿ ಕುರಿ ಮಾಲೀಕರಿಗೆ ಸುಮಾರು ೮೦ ಸಾವಿರ ನಷ್ಟ ಸಂಭವಿಸಿದೆ. ಆದರೆ ಕುರಿ ಮೇಲೆ ದಾಳಿ ಮಾಡಿದ ನಾಯಿಗಳು ಕೆಲವೊಮ್ಮೆ ಮನುಷ್ಯನ ಮೇಲೆ ದಾಳಿ ಮಾಡಿವೆ. ಚಿಕ್ಕ ಮಕ್ಕಳು ವೃದ್ದರು ಮೇಲೆ ದಾಳಿ ಮಾಡಿದರೆ ಯಾರ ಜವಾಬ್ದಾರು ಎಂದು ಪುರಸಭೆ ಮುಖ್ಯಾಧಿಕಾರಿ ಮೇಲೆ ಸಾರ್ವಜನಿಕರು ಹರಿಹಾಯ್ದರು.
ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮಾತನಾಡಿ, ಬೀದಿ ನಾಯಿಗಳನ್ನು ಹಿಡಿಯಲು ಕಲರ್ಬುಗಿಯ ತಜ್ಞರನ್ನು ಕರಿಸಿ ನಾಯಿಗಳನ್ನು ಸ್ಥಳಾಂತರ ಮಾಡುತೇವೆ. ಕುರಿ ಮಾಲಿಕರಿಗೆ ಐದು ದಿನಗಳ ಒಳಗಾಗಿ ಸೂಕ್ತ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲು ಗುಡ್ಲ, ಅಶೋಕ ಅಕಲಾದಿ, ಮಹೇಶ ಹೋಗಾರ, ಮಳಗಪ್ಪ ಪೂಜಾರಿ, ಸಿದಗೊಂಡ ಪೂಜಾರಿ, ನಿಂಗಪ್ಪ ಪೂಜಾರಿ, ಶ್ರೀಶೈಲ ಪೂಜಾರಿ, ಸಿದ್ದಪ್ಪ ಬಗಲಿ, ನಾನಸುರ ಜಾಧವ, ಅಪ್ಪು ಮಡಿವಾಳ, ದ್ಯಾವಪ್ಪ ಪೂಜಾರಿ ಸೇರಿದಂತೆ ಅನೇಕ ಕುರಿ ಮಾಲಿಕರು ಇದ್ದರು.


