“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ

ಘಟನೆ ಒಂದು… ಕೆಲವು ವರ್ಷಗಳ ಹಿಂದೆ ಪೇಪರಿನಲ್ಲಿ ಓದಿದ ಸಂಗತಿ. ನೂತನ ವಿವಾಹಿತ ದಂಪತಿಗಳು ಪ್ರಥಮ ರಾತ್ರಿಯ ಕೋಣೆಯಲ್ಲಿಯೇ ಮರುದಿನ ಮುಂಜಾನೆ ಶವವಾಗಿ ದೊರೆತದ್ದು.
ಘಟನೆ ಎರಡು… ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ವಿಪರೀತ ಮಳೆಯಾದಾಗ ಕಾರಿನ ಟೈರಿನವರೆಗೆ ನೀರು ತುಂಬಿದ ಸಮಯದಲ್ಲಿ ಅದರಲ್ಲಿದ್ದ ಜೋಡಿಗಳ ಸಾವು.
ಘಟನೆ ಮೂರು.. ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸ್ನಾನದ ಕೋಣೆಯಲ್ಲಿ ಸಾವನ್ನಪ್ಪಿರುವುದು.
ಮೇಲಿನ ಎಲ್ಲ ಘಟನೆಗಳಿಗೆ ಕಾರಣವಾಗಿರುವುದು ಕಾರ್ಬನ್ ಮೋನಾಕ್ಸೈಡ್ ಎಂಬ ವಿಷಾನಿಲ.
ಮೊದಲೆರಡು ಘಟನೆಗಳಲ್ಲಿಯೂ ಕಾರ್ಬನ್ ಮೋನಾಕ್ಸೈಡ್ ವಿಲೇವಾರಿಗೆ ಸೂಕ್ತ ಅವಕಾಶವಿಲ್ಲದೆ ಹೋದದ್ದು. ಸಂಪೂರ್ಣ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದುದು ಮೊದಲ ಆಕಸ್ಮಿಕ ಘಟನೆಯ ಕಾರಣವಾದರೆ, ಎರಡನೆಯ ಘಟನೆಯಲ್ಲಿ ಕಾರಿನ ಎಸಿ ವೆಂಟ್ನಲ್ಲಿ ನೀರು ತುಂಬಿದ್ದು ವಿಷಾನಿಲ ಹೊರಗೆ ಹೋಗಲು ಅವಕಾಶವಾಗದೆ ಹೋದದ್ದು.
ಪ್ರತಿದಿನ ವಾಟ್ಸಪ್ ನಲ್ಲಿ ತಪ್ಪದೇ ಮೆಸೇಜ್ ಕಳುಹಿಸುವ ಸ್ನೇಹಿತೆಯಿಂದ ನಾಲ್ಕಾರು ದಿನಗಳಾದರೂ ಒಂದೇ ಒಂದು ಮೆಸೇಜ್ ಇಲ್ಲದಿರುವುದನ್ನು ನೋಡಿ ಆಕೆಗೆ ಫೋನ್ ಮಾಡಿದೆ. ಆಗ ಫೋನ್ನಲ್ಲಿ ಆಕೆ ತಿಳಿಸಿದ್ದು ಇಷ್ಟು.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸ್ನಾನಕ್ಕೆ ಹೋದ ಮಗ ಎರಡು ಇಪ್ಪತ್ತೈದು ಆದರೂ ಹೊರಗೆ ಬಾರದಿದ್ದಾಗ… ಆತನನ್ನು ಕರೆಯಲು ಹೋದ ತಾಯಿ ಅದೆಷ್ಟೇ ಬಾಗಿಲು ಬಡಿದರೂ ಮಗನಿಂದ ಪ್ರತಿಕ್ರಿಯೆ ಬರಲಿಲ್ಲ. ಅನುಮಾನದಿಂದ ಮನೆಯ ಹಿಂಭಾಗಕ್ಕೆ ಹೋಗಿ ಬಚ್ಚಲು ಮನೆಯ ವೆಂಟಿಲೇಟರ್ನಲ್ಲಿ ಇಣುಕಿ ನೋಡಿದಾಗ ಅವರ ಮಗ ಚಿಕ್ಕಮಕ್ಕಳು ಮಲಗಿದಂತೆ ಮೊಣಕಾಲ ಮೇಲೆ ಬೋರಲು ಮಲಗಿದ್ದನ್ನು ನೋಡಿದರು. ಅದೆಷ್ಟೇ ಕರೆದರೂ ಓಗೊಡದ ಮಗನನ್ನು ತಾಯಿ ಜೋರಾಗಿ ಕೂಗಿ ಕರೆದಾಗ ಅಕ್ಕ ಪಕ್ಕದ ಮನೆಗಳ ಜನರೆಲ್ಲ ಸೇರಿದರು.
ಅದರಲ್ಲಿ ಓರ್ವ ವ್ಯಕ್ತಿ ಕೊಲೊಂದರಿಂದ ಬಚ್ಚಲು ಮನೆಯ ಬಾಗಿಲ ಚಿಲಕವನ್ನು ಸರಿಸಿದರು. ಕೂಡಲೇ ಬಚ್ಚಲು ಮನೆಗೆ ಧಾವಿಸಿದ ತಾಯಿ ಮತ್ತು ಪಕ್ಕದ ಮನೆಯ ಸ್ನೇಹಿತರು ಆತನನ್ನು ಹೊರಗೆ ಕರೆತಂದು
ಬಟ್ಟೆ ಹಾಕಿ ಆತನನ್ನು ಹೆಗಲ ಮೇಲೆ ಹೊತ್ತು ಶೀಘ್ರವೇ ಆಸ್ಪತ್ರೆಗೆ ಧಾವಿಸಿದರು. ಆತನ ಬಿಗಡಾಯಿಸಿದ ಪರಿಸ್ಥಿತಿಯನ್ನು ಕಂಡು ಆಸ್ಪತ್ರೆಯಲ್ಲಿ ಆತನನ್ನು ದಾಖಲು ಮಾಡಿಕೊಳ್ಳದೆ ಹೋದಾಗ ಮತ್ತೊಂದು ಆಸ್ಪತ್ರೆಯಲ್ಲಿಯೂ ಅವರಿಗೆ ದಾಖಲಾತಿ ದೊರೆಯಲಿಲ್ಲ. ಆತನಿಗೆ ಕೊಂಚಮಟ್ಟಿನ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ಕಳುಹಿಸಿಕೊಟ್ಟರು. ಅಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಹರಿವನ್ನು ಆತನ ದೇಹಕ್ಕೆ ಚಿಕಿತ್ಸೆಯ ಮೂಲಕ ನೀಡಲಾಯಿತಾದರೂ ವೈದ್ಯರು ಕೇವಲ 20 ಶೇಕಡಾ ಬದುಕುವ ಭರವಸೆಯನ್ನು ನೀಡಿದರು. ಮುಂದಿನ ಮೂರು ಗಂಟೆಯ ಕಾಲ ಅಗ್ನಿಪರೀಕ್ಷೆಯನ್ನು ಎದುರಿಸಿದ ಪಾಲಕರಿಗೆ ವೈದ್ಯರು ಸಂಜೆಯ ಹೊತ್ತಿಗೆ ಕೈ ಕಾಲುಗಳಲ್ಲಿ ಕೊಂಚ ಚಲನೆ ಕಂಡು ಬಂದ ಕಾರಣ ಶೀಘ್ರವೇ ದೇಹದ ಇನ್ನುಳಿದ ಯಾವ ಯಾವ ಭಾಗಗಳಲ್ಲಿ ಕಾರ್ಬನ ಮೋನಾಕ್ಸೈಡ್ ಇರುವುದನ್ನು ಪತ್ತೆ ಹಚ್ಚಲು ಸ್ಕ್ಯಾನ್ ಮಾಡುವುದಾಗಿ ಹೇಳಿದರು. ಮುಂದಿನ ಏಳೆಂಟು ಗಂಟೆಗಳಲ್ಲಿ ಅವರ ಮಗ ಕೊಂಚ ಮಂಪರು ಸ್ಥಿತಿಯಲ್ಲಿ ತಾಯಿಯನ್ನು ಗುರುತಿಸಿದ. ಮರುದಿನ ನಸು ಮುಂಜಾನೆ 5 ರ ಸಮಯಕ್ಕೆ ಸಂಪೂರ್ಣವಾಗಿ ಎಚ್ಚರಗೊಂಡ ಆತ ಮುಂದಿನ ಒಂದೆರಡು ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಯಿತು. ಈ ಸಮಯದಲ್ಲಿ ಆತನ ದೇಹದ ವಿವಿಧ ಅಂಗಗಳ ಮೇಲೆ ಕಾರ್ಬನ್ ಮೋನಾಕ್ಸೈಡ್ ಬೀರಿರುವ ಪರಿಣಾಮಗಳ ಬಗ್ಗೆಯೂ ವೈದ್ಯರು ವಿಶ್ಲೇಷಿಸಿದರು.
ಸ್ನೇಹಿತರೆ, ಮತ್ತೊಮ್ಮೆ ನೆನಪಿಸಿಕೊಳ್ಳೋಣ ಪುಟ್ಟ ಕಿಡಿ ಏನು ಮಾಡೀತು ಎಂಬ ನಮ್ಮ ನಿರ್ಲಕ್ಷ್ಯ ಧೋರಣೆಯಿಂದ ನಾವು ತೆಗೆದುಕೊಳ್ಳುವ ಒಂದು ನಿರ್ಧಾರ ಮನೆಯನ್ನೇ ಸುಟ್ಟು ಬಿಡಬಹುದು. ತೆರೆದ ಕಿಟಕಿ ಬಾಗಿಲುಗಳಿಲ್ಲದ ಬಚ್ಚಲು ಮನೆಯಲ್ಲಿ, ಎಕ್ಜಾಸ್ಟ್ ಫ್ಯಾನುಗಳಿಲ್ಲದ ಅಡುಗೆ ಕೋಣೆಗಳು ಯಾವತ್ತಿಗೂ ಅಪಾಯಕರವೇ ಎಂಬುದನ್ನು ಮರೆಯಬಾರದು.
ಯಾವುದಾದರೂ ವಸ್ತುಗಳು ಉರಿಯುವಾಗ ಆದಹನ ಕ್ರಿಯೆಯಿಂದ ಬಿಡುಗಡೆಯಾಗುವ ಅನಿಲವೇ ಕಾರ್ಬನ್ ಮೋನಾಕ್ಸೈಡ್. ಸರಿಯಾದ ಕಿಟಕಿ ಬಾಗಿಲುಗಳಿಲ್ಲದ ವ್ಯವಸ್ಥೆಯಲ್ಲಿ ಗ್ಯಾಸ್ ಗೀಸರ್ ಗಳ ಬಳಕೆ ಮತ್ತು ಎಸಿಗಳ ಬಳಕೆ ಮಾಡುವಾಗ ಬಿಡುಗಡೆಯಾಗುವ ಈ ಅನಿಲವು ಮಾರಣಾಂತಿಕವಾಗಬಹುದು ಎಂದು ಹಲವಾರು ಬಾರಿ ಸಾಬೀತಾಗಿದೆ. ಆದರೂ ಕೂಡ ಜನರು ಇದನ್ನು ನಿರ್ಲಕ್ಷಿಸುತ್ತಿದ್ದಾರೆ.
ಗಾಳಿ ಇಲ್ಲದ ಮುಚ್ಚಿದ ಕೋಣೆಯ ಒಳಗೆ ಉರಿಯುತ್ತಿರುವ ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಗೀಸರ್ಗಳು ಇದ್ದಾಗ ಕಾರ್ಬನ್ ಮೊನಾಕ್ಸೈಡ್ ಬಿಡುಗಡೆಯಾಗುವ ಅನಿಲವೂ ಕೇವಲ 20 ನಿಮಿಷಗಳಲ್ಲಿ ತನ್ನ ಕರಾಮತ್ತನ್ನು ತೋರಿಸುತ್ತದೆ. ಆ ಸ್ಥಳದಲ್ಲಿ ಇರುವ ವ್ಯಕ್ತಿಗೆ ಮೊದಮೊದಲು ಅತಿಯಾದ ತಲೆನೋವು, ಮೈಗ್ರೇನ್ ಪ್ರಾರಂಭವಾದರೆ ಮುಂದಿನ ಕೆಲವೇ ನಿಮಿಷಗಳಲ್ಲಿ ತಲೆ ತಿರುಗುವುದು ಮತ್ತು ಎಚ್ಚರ ತಪ್ಪುತ್ತದೆ.
ಇನ್ನೂ ಕೆಲವು ಬಾರಿ ಹೊಟ್ಟೆಯಲ್ಲಿ ಸಂಕಟ, ವಾಂತಿ, ಎದೆ ನೋವು, ಗೊಂದಲಕರ ಮನಸ್ಥಿತಿ ಕೆಲವೊಮ್ಮೆ ಫ್ಲೂ ಜ್ವರದ ಸಕಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಉಸಿರಾಟದ ಮೂಲಕ ದೇಹದ ರಕ್ತವನ್ನು ಸೇರುವ ಕಾರ್ಬನ ಮೋನಾಕ್ಸೈಡ್ ರಕ್ತದಲ್ಲಿರುವ ಕೆಂಪು ರಕ್ತ ಕಣಗಳನ್ನು ಕಾರ್ಬನ್ ಮೋನಾಕ್ಸೈಡ್ ನ ಕಣಗಳನ್ನಾಗಿ ಪರಿವರ್ತಿಸುತ್ತದೆ. ಇದರಿಂದ ಸಂಪೂರ್ಣವಾಗಿ ಅಂಗಾಂಶಗಳು ಹಾಳಾಗಿ ಹಠಾತ್ ಸಾವಿಗೆ ಕಾರಣವಾಗುತ್ತದೆ. ಈ ಕಾರ್ಬನ್ ಮೋನಾಕ್ಸೈಡ್ ಗೆ ಯಾವುದೇ ರೀತಿಯ ಬಣ್ಣ, ವಾಸನೆ ಮತ್ತು ರುಚಿ ಇಲ್ಲ.
ಕಾರುಗಳು ಟ್ರಕ್ಕುಗಳು ಮತ್ತು ಇನ್ನಿತರ ವಾಹನಗಳು ಕೂಡ ಕಾರ್ಬನ್ ಮೋನಾಕ್ಸೈಡನ್ನು ಹೊರ ಹಾಕುತ್ತವೆ. ಆದರೆ ಇವುಗಳು ಹೆಚ್ಚಾಗಿ ವಾತಾವರಣದಲ್ಲಿ ಕಾರ್ಬನ ಮೋನಾಕ್ಸೈಡ್ ಅನ್ನು ಬಿಡುಗಡೆ ಮಾಡುವುದರಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಆದರೆ ಮನೆಗಳಲ್ಲಿ ಮುಚ್ಚಿದ ಕಿಟಕಿ ಬಾಗಿಲುಗಳಲ್ಲಿ ಅಂತರರಾಷ್ಟ್ರೀಯವಾಗಿ ಪ್ರಮಾಣಿಕೃತಗೊಳ್ಳದ ಸ್ಟೌಗಳನ್ನು, ಗೀಜರ್ಗಳನ್ನು ಹೊಂದಿದ್ದರೆ ಅವುಗಳು ವಿಶ್ವಾಸನೀಯವಲ್ಲ ಅದಕ್ಕೂ ಮುಖ್ಯವಾಗಿ ಕಾರ್ಬನ್ ಮೋನಾಕ್ಸೈಡ್ ನ ಹೊರ ಹರಿವಿಗೆ ಮುಚ್ಚಿದ ಕಿಟಕಿ ಬಾಗಿಲುಗಳು ತಡೆಯಾಗಿ ನಿಲ್ಲುವುದರಿಂದ ಅನಾಹುತಗಳು ಸಂಭವಿಸುತ್ತವೆ.
ಗ್ಯಾಸ್ ಗೀಸರ್ ಗಳು ಮಾಡುವ ಅನಾಹುತಗಳು ಅಷ್ಟಿಷ್ಟಲ್ಲ ಆದರೂ ಕೂಡ ನಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ. ಅಪಾಯದ ಅರಿವಿದ್ದು ಕೂಡ ನಿರ್ಲಕ್ಷಿಸುವುದು ಸಲ್ಲದು ಅಲ್ಲವೇ. ನಮ್ಮವರ ಪ್ರಾಣ ರಕ್ಷಣೆ ನಮ್ಮದೇ ಹೊಣೆ ಎಂಬುದನ್ನು ಮರೆಯದೆ ಭವಿಷ್ಯದಲ್ಲಿ ಇಂತಹ ಅವಘಡಗಳು ನಡೆಯದಿರಲಿ ಎಂದು ಆಶಿಸುತ್ತಾ..

– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ

