- ಸಿದ್ಧಾಪುರ ಶಿವಕುಮಾರ್
ಈ ಪೋಟೋದ ಮಧ್ಯದಲ್ಲಿ ಇರುವುದು ನಾನೇ.
ಆಸರೆಯಾಗಿದ್ದ ಅಪ್ಪ ತೀರಿ ಹೋಗಿದ್ದ ಕಾರಣ ಕೇಶಮಂಡನ ಮಾಡಿಸಿಕೊಂಡ ಸಮಯವದು. ದಿಢೀರನೆ ನಾನು ದಿಕ್ಕು ತಿಳಿಯದೆ ಕಂಗಾಲಾಗಿದ್ದೆ. ಅನಿವಾರ್ಯವಾಗಿ ಬದುಕಿನ ಭಾರ ನನ್ನ ಎಳೆ ಹೆಗಲೇರಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ವಿದ್ಯಾಭ್ಯಾಸ ಮೊಟುಕುಗೊಳಿಸಿ ಬೋರ್ಡ್ ಬರೆಯುವುದನ್ನು ಕಲಿಯಲು ಮುಂದಾಗಿದ್ದೆ. ಚಿತ್ರಕಲೆ ನನಗೆ ಅತೀವ ಆಸಕ್ತಿ ಮೂಡಿಸಿತ್ತು. ಕಲಿಕೆ ಆದ್ದರಿಂದ ಹಣ ಹೆಚ್ಚಾಗಿ ಸಿಗುತ್ತಿರಲಿಲ್ಲ. ಅದೆಷ್ಟೋ ಹಸಿದ ಹೊಟ್ಟೆ ಭಾದಿಸಿದ ಸಂದರ್ಭಗಳುಂಟು. ಒಟ್ಟಾರೆ ಸ್ವಾಭಿಮಾನದ ಸ್ವಭಾವದವನಾಗಿ ಇಂತಹ ಸಂಕಷ್ಟಗಳಿಂದ ಹೊರಬೇಕಿತ್ತು. ಹೀಗಾಗಿ ಬೋರ್ಡ್ ಒರೆಸುವುದು, ಉಜ್ಜುವುದು, ತೊಳೆಯುವುದು, ಬಣ್ಣ ಬಳಿಯುವುದು. ಬರೆದಿಟ್ಟ ಬ್ರಷ್ ಗಳನ್ನು ಸ್ವಚ್ಚಗೊಳಿಸುವುದು. ಎತ್ತರ ಗೋಡೆಗಳ ಮೇಲೆ ಬೋರ್ಡ್ ಬರೆಯಲು ತೂಕದ ಸರ್ವೆ ಪೋಲ್ಸ್ ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೆಗಲ ಮೇಲೆ ಹೊತೈದು ಬೋರ್ಡ್ ಬರೆಯಲು ಅನುಕೂಲವಾಗುವಂತೆ ಕಟ್ಟಿಕೊಂಡು ಬಣ್ಣ ಬಳಿಯಬೇಕಾಗಿತ್ತು. ಅನೇಕ ಸಂದರ್ಭಗಳಲ್ಲಿ ಉರಿ ಉರಿ ಬಿಸಿಲಿನಲ್ಲಿ ಈ ಕೆಲಸ ಮಾಡಬೇಕಾಗಿತ್ತು. ದೈಹಿಕ ಶ್ರಮ ಹೆಚ್ಚಾದರೂ ಬೋರ್ಡ್ ಬರೆಯುದನ್ನು ಕಲಿಯಲೇ ಬೇಕೆಂಬ ಹಟದ ಹೆಬ್ಬಯಕೆಯಿಂದ ಜೀವನೋಪಾಯಕ್ಕಾಗಿ ಉತ್ಸಾಹದಿಂದಲೇ ಬೇಗನೇ ಸ್ವತಂತ್ರವಾಗಿ ಬೋರ್ಡ್ ಬರೆಯುವ ಮಟ್ಟದಲ್ಲಿ ಕಲಿತಿದ್ದೇ. ಮುಂದುವರಿದು ಸಾವಿರಾರು ಬೋರ್ಡ್ ಬ್ಯಾನರ್ ಬರೆದೆ. ಸಿನಿಮಾ ಪ್ರಚಾರಕ್ಕಾಗಿ ಚಿತ್ರದುರ್ಗ, ದಾವಣಗೆರೆ, ಹರಿಹರ, ಬಳ್ಳಾರಿ, ಹೊಸಪೇಟೆ ಮೈಸೂರು, ಬೆಂಗಳೂರು, ನಗರದಾದ್ಯಂತ ಗೋಡೆಗಳ ಮೇಲೆ ಜಾಹಿರಾತು ಬೋರ್ಡ್ ಬರೆಯುವ ಕಾಂಟ್ರಾಕ್ಟ್ ಮಾಡಿದೆ. ಈ ನಡುವೆ ನಿಷ್ಠೆ ಶ್ರಮ ಪ್ರಾಮಾಣಿಕತೆಗೆ ತಕ್ಕಂತೆ ಹಣ ಕೊಡದೆ ಸತಾಯಿಸುವವರು ನಯವಾಗಿ ವಂಚಿಸುವರು ಬಂದು ಪಾಠ ಕಲಿಸಿ ಹೋದರು! ಇದರೊಂದಿಗೆ ಆರೋಗ್ಯ ಇಲಾಖೆಯ ಜನ ಜಾಗೃತಿಯ ಬೋರ್ಡ್ ಬರೆಯುವ ಕಾಂಟ್ರಾಕ್ಟ್ ಮಾಡಿಕೊಂಡು ತಂಡದೊಂದಿಗೆ ಹಳ್ಳಿ ಹಳ್ಳಿಗೂ ಹೋಗಿ ಬರೆದೆ. ಹಾಗೆ ಶಿಕ್ಷಣ ಇಲಾಖೆಯ ಬಿಸಿಯೂಟ ಯೋಜನೆಯ ಬೋರ್ಡ್ ಗಳನ್ನು ಬರೆಯುವ ಕಾಂಟ್ರಾಕ್ಟ್ ಯಿಂದಾಗಿ ಜಿಲ್ಲೆಯಾದ್ಯಂತ ಕೆಲಸ ಮಾಡಿದೆ. ಅನೇಕ ಸ್ಥಳಿಯ ತಾಲ್ಲೂಕಿನ ಶಾಲೆಯ ಜೊತೆಗೆ ದಾವಣಗೆರೆ, ಬೆಂಗಳೂರು, ಬೇಲೂರು,ಸಾಗರ, ಭದ್ರಾವತಿ ಶಾಲೆಗಳಲ್ಲಿ ಬೋರ್ಡ್ ಮತ್ತು ಚಿತ್ರಕಲೆ ಕೆಲಸ ಮಾಡಿದೆ. ನಾನು ವಿದ್ಯ ಕಲಿತ ನನ್ನೂರಿನ ಶಾಲೆಗಾಗಿ 45 ದಿನಗಳ ಕಾಲದಲ್ಲಿ ಶ್ರಮಿಸಿ ಅನೇಕ ರಾಷ್ಟ ನಾಯಕರ ಭಾವ ಚಿತ್ರ, ನೂರಾರು ನುಡಿ ಮುತ್ತುಗಳನ್ನು ಬರೆಯಲಾಗಿತ್ತು. ಇದರಿಂದಾಗಿ ಇಡೀ ಶಾಲೆ ಆಕರ್ಷಕವಾಗಿ ಜನರ ಮೆಚ್ಚುಗೆ ಪಡಿದಿದ್ದಲ್ಲದೆ “ತಾಲ್ಲೂಕು ಮಟ್ಟದ ಉತ್ತಮ ಶಾಲೆ” ಎಂಬ ಪ್ರಶಸ್ತಿಗೂ ಪಾತ್ರವಾಯಿತು. ಇದರಿಂದಾಗಿ ಖುಷಿಗೊಂಡ ಶಾಲಾ ಸಿಬ್ಬಂದಿ ಮತ್ತು ಆಗಿನ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾಗಿದ್ದ ಎಸ್.ಟಿ.ಪಾತಲಿಂಗಪ್ಪ ಮತ್ತು ಸದಸ್ಯರು ಹಾಗು ತಾ.ಪ. ಅಧ್ಯಕ್ಷರಾಗಿದ್ದ ಗದ್ಧಿಗೆ ತಿಪ್ಪೇಸ್ವಾಮಿ ಕಾರ್ಯಕ್ರಮ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸಿ ಖುಷಿಗೊಂಡು ಖುಷಿ ಪಡಿಸಿದ್ದರು. ಇಷ್ಟೆಲ್ಲ ಬರೆದು ಹೇಳಿದ್ದು ಬದುಕು ತನಗೆ ತಾನೇ ಹೇಗೆಲ್ಲ ಅನುಭವಗಳನ್ನು ಧಾರೆಯರೆಯ ಬಲ್ಲದು ಎಂದೇ ವಿನಃ ಮತ್ಯಾವ ಬೀಗುವ ಭ್ರಮೆಗಳಿಲ್ಲ.
ಬದುಕೊಂದು ಅನುಭವಗಳ ಗಣಿ.
ಅದಕ್ಕೆಂದೂ ನಾನು ಋಣಿ.

- – ಸಿದ್ಧಾಪುರ ಶಿವಕುಮಾರ್

