’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)
– ಜಯಶ್ರೀ ಜೆ. ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨

ತಪ್ಪು ಮಾಡುವುದು ಸಹಜ ತಿದ್ದಿ ನಡೆಯೋನೇ ಮನುಜ ಎಂದು ಬಲ್ಲವರು ಹೇಳುತ್ತಾರೆ.ಅಂದರೆ ತಪ್ಪು ಮಾಡುವದು ಮಾನವನ ಸಹಜ ಗುಣ. ಎಂಥ ಮಹಾನ್ ಸಾಧಕನೇ ಆಗಲಿ, ಏನಾದರೂ ಒಂದು ತಪ್ಪು ಮಾಡಿಯೇ ಮಾಡುತ್ತಾನೆ. ಮಾನವ ಪರಿಪೂರ್ಣನಲ್ಲ. ದೇವರು ಮಾತ್ರ ಪರಿಪೂರ್ಣ ತಪ್ಪುಗಳನ್ನು ನೋಡದೆ ಕೇವಲ ಗುಣಗಳನ್ನು ಮಾತ್ರ ಗಮನಿಸುವದೇ ಕ್ಷಮೆ ’ಒಮ್ಮೆ ತಪ್ಪು ಮಾಡಿದವರಿಗೆ ಸರಿಪಡಿಸಿಕೊಳ್ಳಲು ಅವಕಾಶ ಕೊಡುವುದು ಕ್ಷಮೆ. ಘೋರ ಅಪರಾಧ ಮಾಡಿದವನನ್ನು ಸರಿದಾರಿಗೆ ತರಲು ಕ್ಷಮೆಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ನಮಗೆ ಕಾಣುವುದೇ ಇಲ್ಲ. ನಮ್ಮ ತಪ್ಪುಗಳು ಅರಿವಿಗೆ ಬಂದರೂ ಅವುಗಳನ್ನು ಇತರರ ಮೇಲೆ ಹೊರಿಸಿ ಕೈತೊಳೆದುಕೊಳ್ಳಲು ನೋಡುತ್ತೇವೆ. ನಮ್ಮ ತಪ್ಪುಗಳ ಕುರಿತು ನಾವು ಕ್ಷಮಾಶೀಲರಾಗಿರುತ್ತೇವೆ.ನಮ್ಮ ಎಡೆಯಲ್ಲಿನ ಎಮ್ಮೆ ಕಾಣಿಸುವದಿಲ್ಲ ಮತ್ತೊಬ್ಬರ ಎಡೆಯಲ್ಲಿನ ನೊಣ ಕಾಣಿಸುತ್ತೆ ಅಂತ ಅದಕ್ಕೆ ಹಿರಿಯರು ಗಾದೆ ಮಾಡಿದ್ದು.
ಕ್ಷಮಾ ಗುಣದ ಕೊರತೆಯಿಂದ ಅನೇಕರು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಡಿಗಡಿಗೂ ಮತ್ತೊಬ್ಬರ ತಪ್ಪುಗಳನ್ನು ಸೂಕ್ಷ್ಮದರ್ಶಕದಲ್ಲಿಟ್ಟು ಹೀಯಾಳಿಸುತ್ತ, ಟೀಕಿಸುತ್ತ ಕಾಲ ಕಳೆಯುತ್ತಾರೆ. ಅವರಿಗೆ ತಮ್ಮ ತಪ್ಪಿನ ಅರಿವು ಆಗುವದೇ ಇಲ್ಲ. ಯಾರಾದರೂ ಅವರ ತಪ್ಪಿನ ಬಗ್ಗೆ ತಿಳಿಸಿದರೆ ಅವರನ್ನು ಹೀನಾಯಮಾನವಾಗಿ ಜರಿಯುತ್ತಾರೆ. ಮತ್ತು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾರಲ್ಲದೆ. ಕ್ಷಮಿಸುವದು ದೌರ್ಬಲ್ಯದ ಸಂಕೇತವೆಮದು ತಪ್ಪಾಗಿ ತಿಳಿದಿರುತ್ತಾರೆ.
ನಾವು ದಿನ ನಿತ್ಯ ಕಾಲುಗಳಿಂದ ಭೂತಾಯಿಯನ್ನು ತುಳಿದು ನಡೆಯುತ್ತಿದ್ದರೂ, ಅವಳ ಗರ್ಭದಲ್ಲಿರುವ ಅಮೂಲ್ಯ ಲೋಹಗಳ ಆಸೆಗೆ ಗಣಿಗಾರಿಕೆ ನಡೆಸುತ್ತಿದ್ದರೂ ಅವಳು ನಮ್ಮನ್ನು ಕ್ಷಮಿಸುವುದು ಮಾತ್ರವಲ್ಲ, ನಮಗಾಗಿ ರುಚಿ ರುಚಿಯಾದ ಹಣ್ಣು, ಶಕ್ತಿವರ್ಧಕ ಕಾಳು ತರಕಾರಿಗಳನ್ನು, ಬಗೆ ಬಗೆಯ ಮನಮೋಹಕ ಹೂವುಗಳನ್ನು ನೀಡುತ್ತಾಳೆ. ಭೂದೇವಿಗೆ ಕ್ಷಮಾ ಎಂಬ ಹೆಸರು ಅತ್ಯಂತ ಸೂಕ್ತ ಎನ್ನುವದು ಇದೇ ಕಾರಣಕ್ಕೆ. ಕ್ಷಮೆಗೆ ಹೆಸರಾದವಳು ಕ್ಷಮೆಯಾ ಧರಿತ್ರಿ..
ಕ್ಷಮೆ ಸದ್ಗುಣವಂತನ ಶ್ರೇಷ್ಠ ಗುಣವೆಂದು ಹಿರಿಯರು ಹೇಳಿದ್ದಾರೆ. ತುಂಬಾ ಹಟಕ್ಕೆ ಬಿದ್ದು ಮತ್ತೊಬ್ಬರ ಮನಸ್ಸನ್ನು ನೋಯಿಸುವುದಕ್ಕಿಂತ ಪ್ರೀತಿಯಿಂದ ಕ್ಷಮಿಸಿದರೆ ಬದುಕಿನಲ್ಲಿ ಶತ್ರುಗಳೇ ಇರಲಾರರು. ಚಾಣಕ್ಯ ಹೇಳಿದಂತೆ ಶತ್ರುವಿನಲ್ಲೂ ಉತ್ತಮ ಗುಣಗಳಿದ್ದರೆ ಅದನ್ನು ಪ್ರಶಂಸಿಸಬೇಕು. ಶತ್ರುಗಳನ್ನು ಕ್ಷಮಿಸಿ ಆಲಂಗಿಸಿದಾಗ ಬದುಕು ನಂದನವನವಾಗುತ್ತದೆ.
– ಜಯಶ್ರೀ ಜೆ. ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨

