ಚಡಚಣ: ಕನ್ನಡ ಸಾಹಿತ್ಯ ಲೋಕದ ‘ಹಾಸ್ಯಬ್ರಹ್ಮ’ ಎಂದು ಚಿರಪರಿಚಿತರಾದ ಡಾ. ಎಂ. ಎಸ್. ಸುಂಕಾಪುರ ಅವರ ಸಾಹಿತ್ಯ ಶೃಂಗಾರ ರಸದ ಜೊತೆಗೆ ಹಾಸ್ಯ ರಸ ಸೇರಿಸಿ ನವರಸ ಜೀವಂತಿಕೆ ಹಾಗೂ ಜೀವನಾನುಭವದ ಸಾಹಿತ್ಯವಾಗಿದೆ. ನಗುವೇ ಜೀವನದ ಜೀವಾಳ. ನಗೆ ಇಲ್ಲದ ಮನೆ ದೇವರಿಲ್ಲದ ಗುಡಿಯಂತೆ ಎಂದರಿತ ಪ್ರತಿಯೊಬ್ಬರೂ ಹಾಸ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಕಲಹಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಡಾ.ಎಂ.ಎಸ್.ಮಾಗಣಗೇರಿ ಅಭಿಪ್ರಾಯಪಟ್ಟರು.
ಡಾ.ಎಂ.ಎಸ್.ಸುಂಕಾಪುರ ಅವರ ೧೦೩ನೇ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಂಕಾಪುರರು ನಗೆ-ಹೊಗೆ, ಗಪ್-ಚಿಪ್, ತಲೆಹರಟೆಗಳು, ನಗೆಗಾರ ನಯಸೇನ, ಜೀವನದಲ್ಲಿ ಹಾಸ್ಯ ಮೊದಲಾದ ಹಾಸ್ಯ ಕೃತಿಗಳನ್ನು ರಚಿಸುವುದರ ಜೊತೆಗೆ ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಸಂಶೋಧನಾ ಮಹಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ಎಂ.ಎ.ಜನವಾಡ, ಸುಂಕಾಪುರ ಅವರ ಮನೆತನವೆ ಜನಪದಗಳ ತವರಾಗಿತ್ತು. ಹೀಗಾಗಿ ಇವರಿಗೆ ಜನಪದ ಕಲೆಗಳ ಬಗ್ಗೆ ವಿಶೇಷವಾದ ಆಕರ್ಷಣೆ ಮೂಡಿತು. ಸುಗ್ಗಿ ಕುಣಿತ, ಸೋಬಾನ ಪದ, ಜಾನಪದ ಕಥೆ ಹೇಳುವ ಕಲೆ ಇವರಿಗೆ ಕರಗತವಾಗಿತ್ತು ಎಂದರು.
ಐಕ್ಯೂಎಸಿ ಮುಖ್ಯಸ್ಥ ಡಾ.ಎಸ್.ಎಸ್.ದೇಸಾಯಿ ಮಾತನಾಡಿ, ಸುಂಕಾಪುರ ಅವರಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯ ಗೀಳು ಹತ್ತಿತ್ತು. ಹರಟೆ, ನಾಟಕಗಳ ರಚನೆಯ ಹವ್ಯಾಸ ಮೂಡಿತ್ತು. ಅವರು ನಾಟಕಕಾರರು ಮಾತ್ರವಲ್ಲದೆ ಶ್ರೇಷ್ಠನಟರೂ ಆಗಿದ್ದರು ಎಂಬುವುದನ್ನು ನೆನಪಿಸಿಕೊಂಡರು.
ಅಧ್ಯಕ್ಷತೆ ವಹಿಸಿದ ಪ್ರಭಾರಿ ಪ್ರಾಚಾರ್ಯ ಎಂ.ಕೆ.ಬಿರಾದಾರ ಮಾತನಾಡಿ, ಸುಂಕಾಪುರ ಅವರು ಪ್ರಭುಲಿಂಗಲೀಲೆ, ಶಬರ ಶಂಕರ ವಿಲಾಸ, ಸೋಮನಾಥ ಚರಿತೆ, ರಾಜಶೇಖರ ವಿಳಾಸ ಮುಂತಾದ ಹನ್ನೊಂದು ಕೃತಿಗಳನ್ನು ಸಂಪಾದಿಸಿದರು. ಚೌಪದನಗಳು, ಹೋಳಿ ಹಾಡು ಮೊದಲಾದ ಜಾನಪದ ಕೃತಿಗಳನ್ನು, ಶ್ರೀಕೃಷ್ಣ ಪಾರಿಜಾತ, ಅಲ್ಲಮಪ್ರಭು ಸಣ್ಣಾಟ ಮೊದಲಾದ ಯಕ್ಷಗಾನ ಬಯಲಾಟ ಕೃತಿಗಳನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಆರ್.ಎಸ್.ಮಾವಿನಮರ ಹಾಗೂ ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರೀತಿ ಬಿರಾದಾರ ಪ್ರಾರ್ಥಿಸಿದರು. ಪ್ರೊ. ಎಸ್. ಎಫ್. ಬಿರಾದಾರ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

