ಕಜಾಪ ಆಲಮೇಲ ತಾಲೂಕು ಘಟಕದ ಉದ್ಘಾಟನೆ | ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಆಗ್ರಹ
ಆಲಮೇಲ: ಜಾನಪದ ಸಂಸ್ಕೃತಿಯು ಗಟ್ಟಿಯಾದ ತಳಹದಿಯಲ್ಲಿ ಹುಟ್ಟಿ ವಿಶಾಲವಾದ ಮನೋಭೂಮಿಕೆಯಲ್ಲಿ ಹರಡಿಕೊಂಡಿದೆ. ಸಾರ್ವತ್ರಿಕ ಮೌಲ್ಯಗಳಾದ ಪ್ರೀತಿ, ಕರುಣೆ, ಸಹನೆ, ಸಮಾನತೆ, ಭಾವೈಕ್ಯತೆ, ಸಹಬಾಳ್ವೆ ಮತ್ತು ಆರೋಗ್ಯಕರ ವಿಷಯಾದಿಗಳು ಜಾನಪದ ಸಂಸ್ಕೃತಿಯ ಆಶಯವಾಗಿವೆ. ಜಾನಪದ ಇಂದು ರೂಪ ಬದಲಾಯಿಸಿದರೂ ತತ್ವ -ಚಿಂತನೆಗಳು ಬದಲಾಗಿಲ್ಲ. ಅದಕ್ಕಾಗಿ ಜಾನಪದಕ್ಕೆ ಎಂದಿಗೂ ಅಳಿವಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಅಭಿಪ್ರಾಯಪಟ್ಟರು.
ತಾಲೂಕಿನ ಕಡಣಿ ಗ್ರಾಮದ ಶಂಕರಲಿಂಗೇಶ್ವರ ದೇವಾಲಯದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಮಂಟಪದ ಗೀಗೀಪದಕಾರ ಕಡಣಿ ಕಲ್ಲಪ್ಪ ವೇದಿಕೆಯಲ್ಲಿ, ಕನ್ನಡ ಜಾನಪದ ಪರಿಷತ್ ಆಲಮೇಲ ತಾಲೂಕು ಘಟಕದ ಉದ್ಘಾಟನೆ ಮಾಡಿ ಮಾತನಾಡುತ್ತಾ ಹಲಸಂಗಿ ಗೆಳೆಯರ ಬಳಗದ ಜಾನಪದ ಸೇವೆ ನಾಡಿಗೆ ಅನನ್ಯವಾದುದು. ಸರಕಾರ ಹಲಸಂಗಿ ಗೆಳೆಯರ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಮಾತನಾಡಿ, ಹಳ್ಳಿಗಳು ಜಾನಪದ ಸಂರಕ್ಷಿಸುವ ಮೂಲ ನೆಲೆಗಳಾಗಿವೆ.ಜಾನಪದ ಕಲಾವಿದರು ನಮ್ಮ ಸಂಸ್ಕೃತಿಯ ರೂವಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕಲಾವಿದರಿಗೆ ಸಾಕಷ್ಟು ಅನಕೂಲ ಮಾಡುತ್ತಿದೆ. ಸರಕಾರದ ನಿಯಮಾನುಸಾರ ಕಲಾಪ್ರದರ್ಶನ ಮಾಡಿ ಸೌಲಭ್ಯ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕ ಜಾ ಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಂಡಲೀಕ ಮುರಾಳ ನೂತನ ಪದಾಧಿಕಾರಿಗಳಿಗೆ ಪದಪತ್ರ ನೀಡಿ ಜಿಲ್ಲೆಯಲ್ಲಿ ಪರಿಷತ್ತಿನ ಕಾರ್ಯ ಚಟುವಟಿಕೆ ಕುರಿತು ಮಾತನಾಡಿದರು.
ತಾಲೂಕು ಘಟಕದ ನೂತನ ಅಧ್ಯಕ್ಷ ಗಿರೀಶ ಕಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು . ಗ್ರಾಪಂ ಅಧ್ಯಕ್ಷ ಬಸವಲಿಂಗಪ್ಪ ಕತ್ತಿ ಮತ್ತು ಗ್ರಾ ಪಂ ಸದಸ್ಯ ಸಂತೋಷ ಕ್ಷತ್ರಿ ಮಾತನಾಡಿದರು.
ವೇದಿಕೆಯಲ್ಲಿ ರಾಚಯ್ಯ ಮಠ, ಗ್ರಾ ಪಂ ಸದಸ್ಯ ಬಸವರಾಜ ತಾವರಗೇರಿ, ಪಿಕೆಪಿಎಸ್ ಉಪಾಧ್ಯಕ್ಷ ಈರಯ್ಯ ಗಂಗನಳ್ಳಿ, ಎಸ್ ಡಿ ಎಂ ಸಿ ಅಧ್ಯಕ್ಷ ಆನಂದಗೌಡ ಪಾಟೀಲ, ಗಂಗಾಧರ ಶ್ರೀಗಿರಿ, ಶಿವನಗೌಡ ಪಾಟೀಲ, ಡಾ.ಮಲ್ಲು ಪ್ಯಾಟಿ, ಈರಣ್ಣ ಸುತಾರ ಅತಿಥಿಗಳಾಗಿದ್ದರು.
ತಾಲೂಕಿನ ವಿವಿಧ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಜನೆ, ಡೊಳ್ಳಿನಪದ, ಕೋಲಾಟ, ಷಹನಾಯಿ, ಸಂಪ್ರದಾಯಪದ ಕಲಾಪ್ರದರ್ಶನ ನಡೆಯಿತು.
ಸಾಯಿಬಣ್ಣ ತಾವರಗೇರಿ ನಿರೂಪಿಸಿದರು. ಪುಂಡಲೀಕ ಸುರಗಿಹಳ್ಳಿ ಸ್ವಾಗತಿಸಿದರು.

