ಕರಜಗಿ-ವಿಜಯಪುರರಾಷ್ಟ್ರೀಯ ಹೆದ್ದಾರಿ ನಿರ್ಮಾಣ | ಫೆಬ್ರವರಿ ಅಂತ್ಯಕ್ಕೆ ಭೂಮಿಪೂಜೆ
ಇಂಡಿ: ಗಡಿಭಾಗದ ಕರಜಗಿ ಗ್ರಾಮದಿಂದ ಇಂಡಿ ಪಟ್ಟಣದ ಮಾರ್ಗವಾಗಿ ವಿಜಯಪುರಕ್ಕೆ ಸಾಗಲಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಭೂಸ್ವಾಧಿನ ಪ್ರಕ್ರಿಯೆ ನಡದಿದ್ದು, ಫೆಬ್ರವರಿ ಕೊನೆಯ ವಾರದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡುವ ಚಿಂತನೆ ಹೊಂದಿದ್ದೇವೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ಸಧ್ಯ ನಾಗಠಾಣ ಗ್ರಾಮದವರೆಗೆ ಬಂದಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಗುತ್ತಿಗೆದಾರನಿಗೆ ಕಾಮಗಾರಿ ಆದೇಶ ನೀಡಲಾಗುವುದು. ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಸಚಿವರ ಗಮನ ಸೆಳೆದು ಶೀಘ್ರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹಮ್ಮಿಕೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ವಿಜಯಪುರ ಜಿಲ್ಲೆಯ ಅಭಿವೃದ್ದಿಗೆ ನೀಡಿರುವ ಲಕ್ಷಕೋಟಿ ಅನುಧಾನದಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತದಾರರ ಬಳಿ ಹೋಗುತ್ತೇವೆ ಎಂದ ಅವರು, ಹಿಂದೆಂದೂ ಯಾವ ಸರ್ಕಾರವೂ ನೀಡದಷ್ಟು ಅನುದಾನ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದ ಕೇಂದ್ರದ ಬಿಜೆಪಿ ಸರ್ಕಾರ ನೀಡಿದೆ ಎಂದು ಹೇಳಿದರು.
ಅಕ್ಕಲಕೋಟ-ವಿಜಯಪುರ ರಾಷ್ಟ್ರೀಯ ಹೆದ್ದಾರಿ, ಬ್ರಾಡ್ಜಗೇಜ್ ನಿರ್ಮಾಣ, ವಿದ್ಯುತ್ ಚಾಲಿತ ರೈಲು ಓಡಾಟ, ರೈಲ್ವೆ ಓವರ್ ಬ್ರಿಡ್ಜ, ೪೦೦ ಕಿ.ವ್ಯಾ ವಿದ್ಯುತ್ ಶೇಖರಣಾ ಕೇಂದ್ರ, ಇಂಡಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೇಸ್ ರೈಲುಗಳ ನಿಲುಗಡೆ, ಅಮೃತ್-೨ ಯೋಜನೆ ಮೂಲಕ ಚಡಚಣಕ್ಕೆ ನಿರಂತರ ಕುಡಿಯುವ ನೀರು ಪೊರೈಸುವ ಯೋಜನೆ, ಭೂತನಾಳ ದುರ್ಗಾದೇವಿ ದೇವಸ್ಥಾನ ಅಭಿವೃದ್ದಿಗಾಗಿ ಅನುದಾನ, ಹೊಸ ರೈಲು ನಿಲ್ದಾಣ ಕಾಮಗಾರಿ, ಅಲಿಯಾಬಾದದಲ್ಲಿ ಗೂಡ್ಸಶೆಡ್ ನಿರ್ಮಾಣ, ಗೋಲಗುಂಬಜ್ ಎಕ್ಸಪ್ರೆಸ್ ರೈಲು ವಿಜಯಪುರದಿಂದ ಪಂಡರಪೂರದವರೆಗೆ ವಿಸ್ತರಣೆ, ವಿಜಯಪುರ-ಸೋಲಾಪೂರ ಚತುಷ್ಪಥ ರಸ್ತೆ, ದ್ವೀಪಥ ಹೆದ್ದಾರಿ, ಶಿರಾಡೋಣ-ಝಳಕಿ ರಾಷ್ಟ್ರೀಯ ಹೆದ್ದಾರಿ, ಝಳಕಿಯಿಂದ-ಇಂಡಿವರೆಗೆ ರಸ್ತೆ ದುರಸ್ತಿಗೆ ಅನುಧಾನ ಸೇರಿದಂತೆ ಲಕ್ಷ ಕೋಟಿಗೂ ಅಧಿಕ ಅನುದಾನ ವಿಜಯಪುರ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದ ಬಿಜೆಪಿ ಸರ್ಕಾರ ನೀಡಿದೆ ಎಂದು ಹೇಳಿದರು.

