ವ್ಯಂಗೋತ್ಸವ
*– ಶ್ರೀನಿವಾಸ ಜಾಲವಾದಿ,* ಸಾಹಿತಿ ಸುರಪುರ
‘ಮದ್ಯಮುಕ್ತ ರಾಜ್ಯ ಮಾಡ್ತಾರಂತಪಾ’ ಅಂದ ಶೌರಿ
‘ಏನ್ ಮಾಡ್ತಾರಲೇ, ಮೊನ್ನಿ ಹೊಸ ವರ್ಸದ ಹಿಂದಿನ ರಾತ್ರಿ ಇನ್ನೂರು ಕೋಟಿ ಕುಡ್ದಾವ್ರು’ ನಕ್ಕ ಜಬರಿ
‘ಮತ್ತ ಅವತ್ತ ಕೋವಿಡ್ ತಳಿ ಎಲ್ಲಿ ಹೋಗಿತ್ತ?’ ಕೇಳಿದಳು ರಾಣಿ
‘ಅದು ಮದ್ಯಮುಕ್ತ ಇಲ್ಲಿ ಅಲ್ಲಪಾ, ಅದು ಛತ್ತಿಸಗಢದಾಗ ಜನೇವರಿ 22 ಕ್ಕ ಮಾಡಕತ್ತಾರ’ ಅಂದ ಶೌರಿ
‘ಯಾಕ?’
‘ಏ ಅದು ರಾಮನ ತಾಯಿ ಊರು ಐತಿ, ಅವತ್ತ ಅಯೋಧ್ಯದಾಗ ರಾಮಲಲ್ಲಾನ ಕುಂದ್ರಸ್ತಾರ, ಅದಕ್ಕs ಅಂದ ಮದ್ಯ ಬಂದ್’ ಅಂದ ಶೌರಿ
‘ ಮತ್ತs ಗೋದ್ರಾ ಮರಕಳಿಸ್ತೈತಿ ಅಂತ ಹರಿ ಹೇಳೇತಿ’ ಅಂದಳು ರಾಣಿ
‘ಆ ಪ್ರಸಾದ ಮತ್ತ ಅಂದೇತಿ, ನಿತ್ಯಾನಂದಗ ಭಾಳ ಭಕ್ತರ ಇದ್ದಂಗ ಸಿದ್ರಾಮಯ್ಯಗೂ ಭಕ್ತರ ಭಾಳ ಅದಾರಂತ’ ಅಂದ ಜಬರಿ
‘ ಮತ್ತ ನಮ್ಮ ಇಜಾಪುರದ ಹುಲಿ ಗಪ್ಪ ಆಗೇತಲಾ?’ ಕೇಳಿದ ಶೌರಿ
‘ಅಸಂತೋಸ ಜರಾ ತಡಿ ಗಡಬಡ ಮಾಡಬ್ಯಾಡ ಅಂದಿರಬೇಕು’ ನಕ್ಕಳು ರಾಣಿ
‘ ಮತ್ತs ಜ್ಯೂನಿಯರ್ ಕುಸ್ತಿಪಟುಗಳು ಸಾಕ್ಷಿ ಪೂನಿಯಾ ಪೋಗಾಟ ವಿರುದ್ಧ ತಿರಿಗಿ ಬಿದ್ದಾರಂತಲಾ?’ ಕೇಳಿದ ಜಬರಿ
‘ಇದರಾಗೂ ಸಂಜಯ ಬಾಸ್ ಕೈವಾಡ ಐತೇನು ಮತ್ತ?’ ಎಂದ ಶೌರಿ
‘ಏನs ಹೇಳಾಕ ಬರಂಗಿಲ್ಲ ನೋಡು, ಎಲ್ಲಾರೂ ಏನೇನೋ ಮಾಡಕತ್ತಾರ’ ರಾಣಿ ಅಂದಳು
‘ಏ ಕುಡದ ನಿಶಾದಾಗ ಅಂಗನವಾಡಿ ಸಹಾಯಕಿ ಮೂಗು ಕತ್ತರಸ್ಯಾನ ಬೆಳಗಾವ್ಯಾಗ ಒಬ್ಬವ’ ಅಂದ ಜಬರಿ
‘ಈ ಬೆಳಗಾವಿ ಬರೇ ಇದ್ಕೆ ಪ್ರಸಿದ್ದ ಆಗೇತಿ ನೋಡು’ ಶೌರಿ ಅಂದ
‘ಈಗ ಅಯೋಧ್ಯಾ ಕಾಂಡ ಶುರು ಆಯ್ತೆಂತ ಹೇಳಿ ಇಲ್ಲೂ ಶೂರ್ಪನಖಿ ಕೇಸ್ ಮರುಕಳಿಸೇದs ಹ್ಯಾಂಗ?’ ಅಂದಳು ರಾಣಿ
‘ಇದನ್ನ ನಮ್ಮ ಹರಿಯುವ ಪ್ರಸಾದಂಗೆ ಕೇಳ್ಬೇಕ ನೋಡು’ ನಕ್ಕ ಜಬರಿ
‘ಲೋಕಸೇವಾ ಕಾರ್ಯದರ್ಶಿಗಿ ಅಲ್ಲಿ ಅಧ್ಯಕ್ಷರು ಮತ್ತ ಕೆಲ ಸದಸ್ಯರು ಕೂಡಿ ಬ್ಲಾಕಮೇಲ್ ಮಾಡ್ಯಾರಂತ’ ಅಂತ ಅಂದಳು ರಾಣಿ
‘ಅದನ್ನೂ ‘ಮದ್ಯಮುಕ್ತ’ದ ಗತ್ಲೆ ‘ಲಾಬಿಮುಕ್ತ’ ಮಾಡ್ಬೇಕು ನೋಡು’ ಅಂದ ಜಬರಿ
‘ಅದು ಹುಲ್ಲುಗಾವಲು ಅಂತ ಹೋಗಿರ್ತಾವು ಮೇಯಾಕ, ಮತ್ತ ಅಲ್ಲಿ ಹುಲ್ಲೇ ಇಲ್ಲ ಅಂದ್ರs ಯಾರು ಹೊಕ್ಕಾರು?’ ಕೇಳಿದ ಶೌರಿ
‘ಎಲ್ಲಾರೂ ಸೇರಿ ದೇಶ ಉದ್ಧಾರ ಮಾಡಬೇಕು ಅಂತ ಆಸೆ ಐತಿ ಹಿರ್ಯಾರ್ದು’ ಅಂದ ಜಬರಿ
‘ ಮತ್ತ ಈಗ ಬ್ಲಾಕಮೇಲ್ ಮಾಡೂದು ಮತ್ತ ಯಾಕಂತ ತಿಳದಿ?’ ರಾಣಿ ಕೇಳಿದಳು
‘ಯಾಕ?’
‘ದೇಶ ಉದ್ದಾರ ಮಾಡಿ ಸಿದ್ದಶಿವ ವಿಜಯಪ್ರಸಾದ ತಿನ್ಲಿಕ್ಕೆ’ ಅಂತ ನಕ್ಕಳು ರಾಣಿ
‘ಮತ್ತs ಡಿಜೆ ಹಳ್ಳಿ ಕೆಜೆ ಹಳ್ಳಿ ಹಲ್ಲೆಕೋರರು ಅಮಾಯಕರು ಅದಾರ, ಅವರನ್ನು ಬಿಡುಗಡೆ ಮಾಡ್ಲಿಕ್ಕಿ ಪ್ರಯತ್ನ ಮಾಡ್ತಿನಿ ಅಂದತಿ ಬಂಡೆ’ ಅಂದ ಜಬರಿ
‘ಹಂ ಮತ್ತs ಅವ್ರೆಲ್ಲಾ ಪಾಪ ಏನು ತಿಳಿಯದ ಮುಗ್ಧರು ಅದಾರ, ಅವರನ್ನು ಹೊರಗ ತಂದ್ರs ಮತ್ತ ಅಪಾಯಕಾರಿಗಳನ್ನೆಲ್ಲ ಅವರ ಮುಖಾಂತರ ಜಡಿಲಿಕ್ಕಿ ಬರತೈತಿ ಅಂತ ಪ್ಲಾನ್ ಇವರದು’ ಅಂದ ಶೌರಿ ವ್ಯಂಗ ನಗೆ ನಕ್ಕ
‘ಈ ದೇಶದಾಗ ಮುಗ್ಧರೆಲ್ಲಾ ಡೆಂಜರ್ಗಳು ಆಗ್ಯಾರ, ಮತ್ತ ಕ್ರಿಮಿನಲ್ಗಳೆಲ್ಲಾ ಪಾಪ ಏನೂ ಅರಿಯದ ಮುಗ್ಧರು ಆಗ್ಯಾರ’ ಅಂದಳು ರಾಣಿ
‘ಈ ತುಷ್ಟಿಕರಣ ಮಾಡೂದ್ರಾಗೇ ಇವರ ಜನ್ಮ ಉದ್ಧಾರ ಆಗಿ ಹೋಯ್ತು’ ಅಂದ ಗುಂಡ್ಯಾ
‘ಸೋಮಣ್ಣ ಗರಂ ಆಗೇತಲಾ?’ ಎಂದ ಜಬರಿ
‘ಯಾಕ?’
‘ಮರಿ ಸಿಟ್ಟೂರಿಗಿ ವಾರ್ನಿಂಗ್ ಕೊಟ್ಟತಲೇ, ನನ್ನ ಸೋಲಿಸಿದವ್ರ ಜೋಡಿ ಅಡ್ಡ್ಯಾಡಬ್ಯಾಡ, ಇಲ್ಲಾಂದ್ರs ನೋಡ ಮತ್ತs ಅಂತ’ ಅಂದ ಶೌರಿ
‘ಅದ್ಕೆ ಅದು ದೊಡ್ಡಗೌಡ್ರನ್ನ ಭೆಟ್ಟಿ ಆಗಿ ತಮ್ಕೂರಿಗಿ ಸ್ಕೆಚ್ ಹಾಕಿ ಕುಂತೈತಿ’ ಎಂದಳು ರಾಣಿ
‘ಗೌಡರು, ಟಗರ ಮತ್ತ ಬಂಡೆಗಳಿಂದ್ಲೆ ‘ಕೈ’ ಫಿನಿಶ್ ಆಕೈತಿ ‘ ಅಂತ ಫರ್ಮಾನು ಹೊಂಡಸ್ಯಾರು ‘ ಅಂತ ರಾಶಿ ಅಂದಳು
‘ಅದಕ್ಕs ಗರಂ ಆದ ಟಗರು,’ ಅವ್ರ ಶಾಪನೇ ನಮಗ ವರ’ ಅಂದತಿ’ ಎಂದ ಶೌರಿ
‘ಮತ್ತ ಕಮಲಕ್ಕನ ಮನ್ಯಾಗ ಬಾಡಗಿ ಹಿಡದತಿ ತೆನಿಗೌಡ ಅಂತ ಟಗರ ನಕ್ಕತಿ’ ಎಂದ ಗುಂಡ್ಯಾ
‘ನಮ್ಮ ರಾಮ ಇಲ್ಲೇ ಹುಂಡ್ಯಾಗ ಅದಾನ ಅಂತ ಆಂಜನೇಯ ಬೋಲ್ಯಾ’ ಎಂದ ಬಾಶಾ
‘ಅದ ಏನರೇ ಆಗ್ಲಿ ಮೂರು ಡಿಸಿಎಂ ಬೇಕೇ ಬೇಕು ಅಂತ ಡಿನ್ನರ್ ಮಾಡ್ಯಾರು ಸಾವುಕಾರು’ ಎಂದ ಶೌರಿ
‘ಅದಕ್ಕ ಪ್ರಿಯಾಂಕ ಮೂರ ಯಾಕ ಆರ ಮಾಡ್ಕೋರಿ ಅಂತ ಟಾಂಟ್ ಹೋಡದಾರ’ ಎಂದ ಕಾಕಾ
‘ವರ್ಸ ಆರಾರ ಮಾಡಿದ್ರs ಎಲ್ಲಾರ ಪಾಳಿ ಹತೈತಿ’ ಎಂದು ನಕ್ಕಳು ರಾಣಿ
‘ಏ ಲೋಕಾ ಆದ ಮ್ಯಾಗ ‘ಕೈ’ ಸರಕಾರ ಎಲ್ಲಿ ಇರತೈತಿ?’ ಅಂತ ಪ್ರಶ್ನೆ ಮಾಡ್ಯಾರು ಯಡ್ಡಿ ಆ್ಯಂಡ್ ಗ್ಯಾಂಗ್’ ಅಂದ ಶೌರಿ
‘ಈ ‘ಶಕ್ತಿ’ ಜಾರಿಗಿ ತಂದದ್ದಕ್ಕ ಗಂಡಸೂರಿಗಿ ಬಸ್ ಇರಲಾರದಂಗ ಆಗೇತಿ ದೇಖೋ ಭಾಯಿ’ ಅಂದ ಬಾಶಾ
‘ಅದಕ್ಕ ಈ ಸೀಟ 50 50 ಮಾಡಬೇಕು ನೋಡು’ ಅಂದ ಗುಂಡ್ಯಾ
‘ಏ ಅವೆಲ್ಲಾ ನಡೆಂಗಿಲ್ಲ ಆ ಕಂಡಕ್ಟರ್ಗೆ ಸೀಟ ಇರ್ಲಾರ್ದಂಗ ಆಗೇತಿ’ ಅಂತ ಅಂದ ಶೌರಿ
‘ಎಲ್ಲಾ ಫ್ರೀ ಸೀಟು ಇರುದ್ರಿಂದ ಕಂಡಕ್ಟರ ಬೇಕೇ ಆಗಿಲ್ಲ’ ಅಂದ ಗುಂಡ್ಯಾ
‘ಇನ್ನ ಇಮಾನ ಫ್ರೀ ಮಾಡವ್ರು ಅದಾರಂತ’ ಅಂದ ಜಬರಿ
‘ಇಮಾನ ಫ್ರೀ ಮಾಡಿದ್ರs ….. ಎಲ್ಲಾರೂ ಮ್ಯಾಗೇ’ ಅಂದಳು ರಾಣಿ
ಆಕೆ ಮಾತ ಕೇಳಿ ದಂಗಾದ್ರು ಜಬರಿ ಶೌರಿ

– ಶ್ರೀನಿವಾಸ ಜಾಲವಾದಿ, ಸಾಹಿತಿ ಸುರಪುರ

