ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮತ
ವಿಜಯಪುರ: ಜ್ಯೋತಿ ತಾನು ಯಾವಾಗಲೂ ಪರರಿಗೆ ಬೆಳಕು ನೀಡುತ್ತದೆ. ಅದರಂತೆ ಇಡೀ ಜಗತ್ತಿನಾದ್ಯಂತ ತನ್ನ ಭಕ್ತ ಸಂಕುಲಕ್ಕೆ ಜ್ಞಾನದ ಜ್ಯೋತಿಯನ್ನು ನೀಡಿದಂತವರು ಶ್ರೀ ಸಿದ್ಧೇಶ್ವರ ಅಪ್ಪನವರು ಎಂದು ಶಾಸಕ ಬಿ. ವೈ. ವಿಜಯೇಂದ್ರ ಹೇಳಿದರು.
ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಶಿಕ್ಷಣ ಹಾಗೂ ವಿಜ್ಞಾನ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೮ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೃಷ್ಠಿಯಲ್ಲಿ ಭೂಮಿ ಬಹಳ ವಿಶಿಷ್ಟವಾದಂತದ್ದು. ಈ ಭೂಮಿಯ ಮೇಲೆ ಅನೇಕ ಜೀವ ಸಂಕುಲಗಳು ಹುಟ್ಟಿ ಜನ್ಮ ತಾಳುತ್ತವೆ. ಮಾನವ ಜನ್ಮ ದೊಡ್ಡದು ಎಂದು ದಾಸರ ಪದಗಳಲ್ಲಿ ನಾವು ಕಾಣುತ್ತೇವೆ. ಇಂತಹ ಭೂಮಿಯ ಮೇಲೆ ಕೆಲವೇ ಕೆಲವು ಶ್ರೇಷ್ಠ ಶಕ್ತಿಗಳು, ಹುಟ್ಟುತ್ತಾರೆ ಅದರಂತೆ ಈ ನಾಡಿನ ಮತ್ತು ಜಗತ್ತಿನ ಕೋಟ್ಯಾಂತರ ಜನಕ್ಕೆ ಜ್ಞಾನದ ಬೆಳಕು ನೀಡಿದಂತಹ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಅಪ್ಪನವರೂ ಸಹ ಒಬ್ಬರು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಮಾತನಾಡಿ, ಶ್ರೀ ಸಿದ್ಧೇಶ್ವರ ಅಪ್ಪನವರ ಪ್ರವಚನವನ್ನು ಕೇಳದೆ ಇರುವ ವ್ಯಕ್ತಿಗಳು ಯಾರು ಇಲ್ಲ ಅವರು ಭೌತಿಕವಾಗಿ ನಮ್ಮ ಜೊತೆಯಿಲ್ಲ ಆದರೆ ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ ಎಂದರು.
ಮಾಜಿ ಕೈಗಾರಿಕೆ ಸಚಿವ ಮುರಗೇಶ ನಿರಾಣಿ ಮಾತನಾಡಿದರು.
ದೆಹಲಿ ಅಖಿಲ ಭಾರತೀಯ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಂಕರಾನಂದ ಅನುಭಾವದ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಅಧಕ್ಷ ಪದ್ಮಶ್ರೀ ಎ. ಎಸ್. ಕಿರಣ ಕುಮಾರ ತಮ್ಮ ಅನುಭಾವದ ನುಡಿಗಳನ್ನಾಡಿ, ನಮ್ಮ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಸಾಕಷ್ಟು ಉಪಯೋಗಗಳಾಗುತ್ತಿವೆ ಎಂದರು.
ಸಿಂದಗಿ ಸಾರಂಗ ಮಠದ ಷ. ಬ್ರ ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನುಡಿಗಳನ್ನಾಡಿದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಎ. ಎಸ್. ಕಿರಣ ಕುಮಾರ “ಗುರುವೇ ದೇವರು” ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ವಿದ್ಯಾನಂದ ಸ್ವಾಮೀಜಿ ಪ್ರಾರ್ಥನೆ ಹಾಡಿದರು. ವಿಜಯಪುರದ ಎಕ್ಷಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಬಸವರಾಜ ಕವಲಗಿ ಸ್ವಾಗತಿಸಿ, ಪರಿಚಯಿಸಿದರು, ಹರ್ಷಾನಂದ ಸ್ವಾಮೀಜಿ ನಿರೂಪಿಸಿದರು.

