“ಯುವಕರು ಮತ್ತು ದೇಶಪ್ರೇಮ” ಗೋಷ್ಠಿ ಉದ್ಘಾಟಿಸಿದ ಸಂಸದ ತೇಜಸ್ವಿ ಸೂರ್ಯ ಅಭಿಮತ
ವಿಜಯಪುರ: ನಾನು ಶ್ರೀ ಸಿದ್ಧೇಶ್ವರ ಅಪ್ಪನವರನ್ನು ಭೇಟಿಯಾಗಿದ್ದು ಕೆಲವೇ ನಿಮಿಷಗಳು ಮಾತ್ರ. ಆದರೆ ಅವರ ಸಂದೇಶಗಳು ನನ್ನ ಜೀವನದ ಮೇಲೆ ಬೀರಿದ ಪ್ರಭಾವ ಅಪಾರ. ಈ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದು ನನ್ನ ಭಾಗ್ಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಯುವಕರು ಮತ್ತು ದೇಶಪ್ರೇಮ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೭ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸಿದ್ಧೇಶ್ವರ ಅಪ್ಪನವರು ತಮ್ಮ ಬದುಕೇ ಒಂದು ಸಂದೇಶವೆಂಬಂತೆ ಬದುಕಿದವರು. ಬಿಜ್ಜರಗಿ ಎಂಬ ಒಂದು ಸಣ್ಣ ಗ್ರಾಮದಲ್ಲಿ ಹುಟ್ಟಿ ಸದಾ ಜನರಿಗಾಗಿ ಬದುಕಿ ಇಂದು ದೇವರಾಗಿದ್ದಾರೆ. ಒಬ್ಬ ಮನುಷ್ಯ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ದೇವರಾಗಬಹುದೆಂಬುದು ತೋರಿಸಿಕೊಟ್ಟವರು ಮತ್ತು ಸನ್ಯಾಸಿ ಎನ್ನುವವರು ಹೇಗಿರಬೇಕು ಎಂದು ತೋರಿಸಿಕೊಟ್ಟವರು. ಅಜಾರಮರ ಅಮರತ್ವಕ್ಕೆ ಸಾಕ್ಷಿಯಾದಂತವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಎಂದು ಹೇಳಿದರು.
ಹಂಚಿನಾಳ ಭಕ್ತಿ ಯೋಗಾಶ್ರಮದ ಮಹೇಶಾನಂದ ಮಹಾಸ್ವಾಮಿಗಳು ಆಶೀರ್ವಚನ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಗದಗ ಜಗದ್ಗುರು ಶಿವಾನಂದ ಮಠದ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಅವರ ಮಗ ಸತ್ಯಜೀತ ಪಾಟೀಲ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ವಿರೇಶ ವಾಲಿ ಪ್ರಾರ್ಥನಾ ಗೀತೆ ಹಾಡಿದರು. ಶಿವಶಂಕರ ಮಹಾಸ್ವಾಮಿಗಳು ವಂದೇ ಮಾತರಂ ಗೀತೆಯನ್ನು ಹಾಡಿದರು. ಚಾಣಕ್ಯ ಕೆರಿಯರ್ ಅಕಾಡೆಮಿಯ ಎನ್. ಎಮ್ ಬಿರಾದಾರ ಸ್ವಾಗತಿಸಿ ಪರಿಚಯಿಸಿದರು, ಪರಮಾನಂದ ಮಹಾಸ್ವಾಮಿಗಳು ನಿರೂಪಿಸಿದರು.

