ಪ್ರತಿಭಾ ಕಾರಂಜಿ & ಕಲೋತ್ಸವ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಸ್ಪಷ್ಠನೆ
ವಿಜಯಪುರ: ಕಳೆದ 11 ಅಧಿವೇಶನದಲ್ಲಿ ಕೊನೆಗೆ ಒಂದು ದಿನ ಕಾಟಾಚಾರಕ್ಕೆ ಎಂಬಂತೆ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲಾಗುತ್ತಿತ್ತು. ಈ ಬಾರಿ ಮೊದಲ ದಿನವೇ ನಾನು ಗಟ್ಟಿ ಧ್ವನಿ ಎತ್ತಿದ್ದರಿಂದ ಮೊದಲ ವಾರದಲ್ಲೇ ಸಮಗ್ರವಾಗಿ ಚರ್ಚಿಸಲು ಅವಕಾಶ ದೊರಕಿತು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಸಿದ್ಧೇಶ್ವರ ಸಂಸ್ಥೆಯ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನಗರ ವಲಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿವೇಶನದಲ್ಲಿ ಮೂರು ದಿನಗಳ ಕಾಲ ಕೈಗಾರಿಕೆ, ವಿಮಾನ ನಿಲ್ದಾಣ, ಕೋಲ್ಡ್ ಸ್ಟೋರೇಜ್, ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಹಾಗೂ ರಾಜಕೀಯವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯದ ಕುರಿತಂತೆ ಗಮನಸೆಳೆದು, ಅಭಿವೃದ್ಧಿ ಒತ್ತು ನೀಡಲು ಸರ್ಕಾರಕ್ಕೆ ಆಗ್ರಹಿಸಲಾಯಿತು. ನಮ್ಮ ಬೇಡಿಕೆಗಳ ಒತ್ತಾಯಕ್ಕೆ ಸಕರಾತ್ಮಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದಿಸಿ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಆದ್ಯತೆ ನೀಡುವುದಲ್ಲದೆ, ವಿಜಯಪುರ ನಗರ ಮತಕ್ಷೇತ್ರ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ವಿಜಯಪುರ ನಗರ ಮತಕ್ಷೇತ್ರ ಸಾಕಷ್ಟು ಅಭಿವೃದ್ಧಿಗೊಂಡಿದೆ. ನಗರದಲ್ಲಿಯೇ ಬರುವ ನಾಗಠಾಣ ಮತಕ್ಷೇತ್ರದ ನಾಲ್ಕು ವಾರ್ಡಗಳು ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಶಾಸಕರಾದ ವಿಠ್ಠಲ ಕಟಕಧೋಂಡ ಮತ್ತು ನಾನು ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಪೂರ್ಣವಾಗಿ ವಿಜಯಪುರ ನಗರವನ್ನು ಅಭಿವೃದ್ಧಿಪಡಿಸಲು ಶ್ರಮಿಸುವುದಾಗಿ ಹೇಳಿದರು.
ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನೀಡುವ ಸಿದ್ದೇಶ್ವರ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮುಂದಿದೆ. ಬಡ ಮಕ್ಕಳಿಗಾಗಿ ನೀಲಕಂಠೇಶ್ವರ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಶೈಕ್ಷಣೀಕ ವರ್ಷ ಜೂನ್ ತಿಂಗಳಿಂದ ನಮ್ಮ ಸಂಸ್ಥೆಯಿಂದಲೇ ಈ ಶಾಲೆ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟ, ಬ್ಯಾಗ್, ಪುಸ್ತಕಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಶಾಸಕರಾದ ವಿಠ್ಠಲ ಕಡಕಧೋಂಡ, ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿದರು.
ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷರಾದ ಸಂಗನಬಸಪ್ಪ ಸಜ್ಜನ, ಎ.ಎಫ್.ಅರಳಿಮಟ್ಟಿ, ಎ.ಎಸ್.ಹಕ್ಕಿ, ವೀರಭದ್ರಪ್ಪ, ಬಸವರಾಜ ಗಿರಿನಿವಾಸ , ಸದಾಶಿವ ದಳವಾಯಿ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.

