ವಿಜಯಪುರ: ನಗರದಲ್ಲಿ ಡಿಸೆಂಬರ್ 24 ರಂದು ನಡೆಯಲಿರುವ ವೃಕ್ಷತ್ಥಾನ್ ಹೆರಿಟೇಜ್ ರನ್-2023ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿದೇಶಗಳಿಂದಲೂ ಓಟಗಾರರು ಹೆಸರು ನೋಂದಾಯಿಸಿದ್ದಾರೆ. ಈ ಮೂಲಕ ಈ ಬಾರಿಯ ವೃಕ್ಷೋತ್ಥಾನ್ ಗೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ.
ಶ್ರಮದ ಫಲವಾಗಿ ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಬಗ್ಗೆ ಜಾಗೃತಿ ಹಾಗೂ ಸಂರಕ್ಷಣೆ ಸಂದೇಶವನ್ನು ಹೊಂದಿರುವ ಮತ್ತು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ ಗೌರವ ಸಲ್ಲಿಸುವ ಸದುದ್ದೇಶದಿಂದ ಈ ಓಟ ಆಯೋಜಿಸಲಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಈ ಓಟದ ಆಯೋಜನೆಯ ರೂವಾರಿಯಾಗಿದ್ದು, ಈಗಾಗಲೇ ವಿಜಯಪುರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಮತ್ತು ನಾನಾ ಹೊರ ರಾಜ್ಯಗಳಿಂದಲೂ ಮ್ಯಾರಾಥಾನ್ ಓಟಗಾರರು ಹೆಸರು ನೋಂದಾಯಿಸುತ್ತಿದ್ದಾರೆ.
ಆನಲೈನ್ ಮೂಲಕ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಈಗ ಅಮೇರಿಕದಲ್ಲಿ ನಾನಾ ಉದ್ಯಮಗಳಲ್ಲಿ ಉನ್ನತ ಸ್ಥಾನದಲ್ಲಿರುವ ಇಬ್ಬರು ಅಧಿಕಾರಿಗಳು ಈ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳಲು ಹೆಸರು ನೋಂದಾಯಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ವೆನಾಫಿ ಕಂಪ್ಯೂಟರ್ ಸಲೂಷನ್ಸ್ ಕಂಪನಿಯ ಉಪಾಧ್ಯಕ್ಷ ಉಪಾಧ್ಯಕ್ಷ ಸೇತುಮಾಧವ ಕುಲಕರ್ಣಿ ಅವರು 21 ಕಿ. ಮೀ. ಹೆಸರು ನೋಂದಾಯಿಸಿದ್ದಾರೆ. ಅಲ್ಲದೇ, ಮಿಚಿಗನ್ ನಲ್ಲಿರುವ ಎರ್ಬಾರಸೆನ್ಸ್ ಎಲೆಕ್ಟ್ರಾನಿಕ್ಸ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಎಲೆಕ್ಟ್ರಾನಿಕ್ ಕಂಪನಿಯ ಗಿರೀಶ ಕುಲಕರ್ಣಿ ಅವರು 10 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳಲಿದ್ದಾರೆ. ಬೆಂಗಳೂರಿನ ಸಾಫ್ಟವೇರ್ ಎಂಜಿನಿಯರ್ ಮತ್ತು ಹಾಫ್ ಮ್ಯಾರಾಥಾನ್ ನಲ್ಲಿ ಸಕ್ರೀಯರಾಗಿರುವ ರಘು ಸಾಲೋಟಗಿ ಅವರ ಮೂಲಕ ಮಾಹಿತಿ ತಿಳಿದ ಅಮೇರಿಕದ ಇಬ್ಬರೂ ಓಟಗಾರರು ಹೆಸರು ನೋಂದಾಯಿಸಿದ್ದಾರೆ.
ಈಗಾಗಲೇ ಮಕ್ಕಳು, ಯುವಕರು ಮತ್ತು ಹಿರಿಯರೂ ಕೂಡ ಆನಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೋಳ್ಲಲು ಸಜ್ಜಾಗಿದ್ದಾರೆ.
ಈ ಓಟದಲ್ಲಿ ಪಾಲ್ಗೋಳ್ಳಲು ಇಚ್ಛಿಸುವವರು www.vrukshathon.co.in ಮೂಲಕ ಆನಲೈನ್ ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ ಎಂದು ನೋಂದಣಿ ಸಮಿತಿಯ ರಾಜು ಯಲಗೋಡ ಮತ್ತು ವೀರೇಂದ್ರ ಗುಚ್ಚೆಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



