ಅಧಿಕಾರಿಗಳ ಅಸಮರ್ಪಕ ನಿರ್ವಹಣೆಗೆ ಬೇಸತ್ತ ಶಾಸಕ ಯಶವಂತರಾಯಗೌಡ ಎಚ್ಚರಿಕೆ!
ವಿಜಯಪುರ: ಇಂಡಿ ಮತಕ್ಷೇತ್ರದ ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಇಂಡಿ ಆಡಳಿತಾರೂಢ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಡಿ ಇಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಭೌತಿಕವಾಗಿ ಕಾಮಗಾರಿಗಳು ಮುಗಿದಿವೆ. ಆದರೆ, ಈ ಯೋಜನೆಗಳು ಪೂರ್ಣಗೊಂಡು 22 ವರ್ಷಗಳು ಕಳೆದರೂ ಈವರೆಗೂ ಕಾಲುವೆಯ ಟೇಲ್ ಎಂಡ್(ಕೊನೆಯ ತುದಿ) ವರೆಗೂ ನೀರು ಹರಿಯುತ್ತಿಲ್ಲ. ಈಗ ಭೀಕರ ಬರ ಎದುರಾಗಿರುವ ಹಿನ್ನಲೆಯಲ್ಲಿ ರೈತರು, ಜನ, ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳ ವೈಫಲ್ಯದಿಂದಾಗಿ ನೀರು ಬರುತ್ತಿಲ್ಲ. ಕೂಡಲೇ ನೀರು ಹರಿಸದಿದ್ದರೆ ಅಧಿಕಾರದಲ್ಲಿದ್ದರೂ ಪ್ರಯೋಜನವಿಲ್ಲ. ಹೀಗಾಗಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಜನಪ್ರತಿನಿಧಿಗಳು ಜನರಿಗೆ ಉತ್ತರದಾಯಿ ಆಗಿರಬೇಕು. ಜನರ ಆಶಯಗಳನ್ನು ಈಡೇರಿಸಲು ಆಗದಿದ್ದರೆ ರಾಜಕೀಯ ನಿವೃತ್ತಿಯಾಗಬೇಕು ಅಥವಾ ರಾಜಿನಾಮೆ ನೀಡಬೇಕು. ಇಂಡಿ ಮತಕ್ಷೇತ್ರದ ಕಟ್ಟ ಕಡೆಯ ರೈತರಿಗೆ ನೀರು ಸಿಗುತ್ತಿಲ್ಲ. ಜನರಿಗೆ ನೀರು ಬರದಿದ್ದರೆ ಯಾವ ಪುರುಷಾರ್ಥಕ್ಕೆ ರಾಜಕಾರಣ ಮಾಡಬೇಕು. ಜನರ ಸಮಸ್ಯೆಯನ್ನು ನೇರವಾಗಿ ಎದೆಗಾರಿಕೆಯಿಂದ ಹೇಳುತ್ತೇನೆ. ಇಂಡಿ ತಾಲೂಕು ಸಂಪೂರ್ಣ ಸಮಸ್ಯೆಗೆ ಒಳಗಾಗಿದೆ. ಕುಡಿಯುವ ನೀರು, ಬೆಳೆಗಳಿಗೆ ನೀರಾವರಿಗೆ ನೀರು ಸಿಗದಂತಾಗಿದೆ. ನಾನಾ ಏತ ನೀರಾವರಿ ಯೋಜನೆಗಳಡಿ ಕಾಲುವೆಗಳಾದರೂ ನೀರು ಬರುತ್ತಿಲ್ಲ. ಅತ್ತ ಭೀಮಾನದಿಯಲ್ಲೂ ನೀರೂ ಸಿಗುತ್ತಿಲ್ಲ. ಉಜನಿ ಡ್ಯಾಂನಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಪೈಪ್ ಲೈನ್ ಮಾಡುತ್ತಿದ್ದಾರೆ. ಅದಾದ ಬಳಿಕ ಉಜನಿ ಡ್ಯಾಂನಿಂದ ಭೀಮಾ ನದಿಗೆ ನೀರೇ ಬರುವುದಿಲ್ಲ. ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದು ಶಾಸಕರು ತಿಳಿಸಿದರು.
ಇಂಡಿ ನೂತನ ಜಿಲ್ಲೆಯಾಗದಿದ್ದರೆ ರಾಜಕೀಯ ನಿವೃತ್ತಿ
ಇಂಡಿಯನ್ನು ನೂತನ ಜಿಲ್ಲಾ ಕೇಂದ್ರ ಮಾಡುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಇದು ಬಹಳ ದಶಕಗಳ ಕೂಗು. ನಮ್ಮ ಪಕ್ಷದ ನಾಯಕರನ್ನು ಕೇಳಿಯೇ ಈ ವಿಚಾರದಲ್ಲಿ ಮಾತು ಕೊಟ್ಟಿದ್ದೇನೆ. ಇಂಡಿ ಜಿಲ್ಲಾ ಕೇಂದ್ರ ಮಾಡಲು 2028ರವರೆಗೂ ಅವಕಾಶವಿದೆ. ಅಲ್ಲಿಯವರೆಗೂ ಕಾಯುತ್ತೇನೆ. ನಮ್ಮ ಸರಕಾರ ಇಂಡಿ ಜಿಲ್ಲಾ ಕೇಂದ್ರ ಮಾಡುವ ಭರವಸೆ ಇದೆ. ಒಂದು ವೇಳೆ 2028 ರೊಳಗೆ ಇಂಡಿ ಜಿಲ್ಲಾ ಕೇಂದ್ರ ಮಾಡದಿದ್ದರೆ 2028ಕ್ಕೆ ರಾಜಕಾರಣದಲ್ಲಿ ಇರಲ್ಲ. ನಮ್ಮನ್ನು ರಾಜಕಾರಣದಲ್ಲಿ ಇಟ್ಟುಕೊಳ್ಳಬೇಕೆಂದರೆ ಇಂಡಿ ಜಿಲ್ಲಾ ಕೇಂದ್ರ ಮಾಡುತ್ತಾರೆ. ಬೇಡ ಎಂದರೆ ಬಿಟ್ಟಿರುತ್ತಾರೆ. ಮೈಕ್ರೋ ಮ್ಯಾನೇಜ್ಮೆಂಟ್ ಆ್ಯಂಡ್ ಎಡ್ಮಿನಿಸ್ಟ್ರೇಷನ್ ಗಾಗಿ ಇಂಡಿ ಜಿಲ್ಲಾ ಕೇಂದ್ರವಾಗಬೇಕು ಎಂದು ಅವರು ಪುನರುಚ್ಚರಿಸಿದರು.
ರಾಜಸ್ಥಾನ ಕರ್ನಾಟಕಕ್ಕಿಂತಲೂ ಕಡಿಮೆ ಶಾಸಕರನ್ನು ಹೊಂದಿದೆ. ಅಭಿವೃದ್ಧಿಯಲ್ಲೂ ಹಿಂದುಳಿದಿದೆ. ಅಲ್ಲಿ ಕೇವಲ 200 ಜನ ಶಾಸಕರಿದ್ದರೂ 52ಕ್ಕೂ ಹೆಚ್ಚು ಜಿಲ್ಲೆಗಳನ್ನು ಮಾಡಲಾಗಿದೆ. ಅದೇ ರೀತಿ ನಮ್ಮಲ್ಲಿಯೂ ಆಡಳಿತದ ದೃಷ್ಠಿಯಿಂದ ಇಂಡಿ ನೂತನ ಜಿಲ್ಲೆಯಾಗಬೇಕು. ಇಂಡಿ, ಚಡಚಣ, ದೇವರ ಹಿಪ್ಪರಗಿ, ಆಲಮೇಲ ಮತ್ತು ಸಿಂದಗಿ ತಾಲೂಕುಗಳನ್ನು ಸೇರಿಸಿ ನೂತನ ಜಿಲ್ಲೆ ಮಾಡಬೇಕು. ಜಿಲ್ಲಾ ವಿಭಜನೆಯಲ್ಲಿ ಆ ಭಾಗದ ಜನರ ಅಭಿಪ್ರಾಯ ಮುಖ್ಯವಾಗುತ್ತದೆ. ಈಗಾಗಲೇ ಈ ಕುರಿತು ಸಿಎಂ ಗಮನ ಸೆಳೆದಿದ್ದು, ರಾಜ್ಯ ಸರಕಾರದಿಂದ ವಿಜಯಪುರ ಜಿಲ್ಲಾಡಳಿತಕ್ಕೆ ಜನಾಭಿಪ್ರಾಯ ಸಂಗ್ರಹಿಸಲು ಸೂಚನೆ ಬಂದಿದೆ. ಹೀಗಾಗಿ ಇಂಡಿ ನೂತನ ಜಿಲ್ಲೆಯಾಗಬೇಕು. ಅದಾಗದಿದ್ದರೆ ಇಂಡಿ ಮತ್ತು ಸಿಂದಗಿ ತಾಲೂಕುಗಳಿಗೆ ವಿಶೇಷ ಸ್ಥಾನಮಾನ ನೀಡಿ ಕಲ್ಯಾಣ(ಹೈದರಾಬಾದ) ಕರ್ನಾಟಕ ಭಾಗಕ್ಕೆ ನೀಡಿರುವಂತೆ ಆರ್ಟಿಕಲ್ 371(ಜೆ) ಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೆಲವು ಸಚಿವರವನ್ನು ಹೊರತು ಪಡಿಸಿದರೆ ಉಳಿದವರು ತಂತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಅವರಿಗೆ ಕಲ್ಪನೆಯೇ ಇಲ್ಲ. ತಮ್ಮ ಮತಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಗಮನ ಹರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಳಿದ ಶಾಸಕರು ಎಲ್ಲಿಗೆ ಹೋಗಬೇಕು? ಈ ತಾರತಮ್ಯದ ಹಿನ್ನೆಲೆಯಲ್ಲಿಯೇ ಈ ಹಿಂದೆ ಉಮೇಶ ಕತ್ತಿ ಪ್ರತ್ಯೇಕ ರಾಜ್ಯದ ಕೂಗು ಎತ್ತಿದ್ದರು. ನಮಗೆ ಪ್ರತ್ಯೇಕ ರಾಜ್ಯ ಬೇಕಿಲ್ಲ. ಆದರೆ, ಆ ಭಾವನೆ ಬರುತ್ತಿದೆ ಎಂದು ಯಶವಂತರಾಯಗೌಡ ವಿ. ಪಾಟೀಲ ಮಾರ್ಮಿಕವಾಗಿ ಹೇಳಿದರು.