ತಾಜಪುರ (ಎಚ್)ದಲ್ಲಿ ಟಿಪ್ಪು ಸುಲ್ತಾನ್ ಸರ್ಕಲ್ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಪ್ರತಿಯೊಂದು ಗ್ರಾಮಗಳು ಬಸವಣ್ಣನವರ ಅನುಭವ ಮಂಟಪದ ರೀತಿ ಇರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬುಧವಾರ ರಾತ್ರಿ ತಿಕೋಟಾ ತಾಲೂಕಿನ ತಾಜಪುರ ಎಚ್. ಗ್ರಾಮದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ಉದ್ಘಾಟಿಸಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಬಸವತತ್ವದಡಿ ಗ್ರಾಮಗಳಲ್ಲಿ ಎಲ್ಲ ಜಾತಿ ಮತ್ತು ಧರ್ಮದ ಜನರು ಸುಖ, ಸಂತೋಷದಿಂದ ಬದುಕಬೇಕು. ರಾಜಕೀಯದವರು ಬಂದು ಜಗಳ ಹಚ್ಚುತ್ತಾರೆ. ಆದರೆ, ತಾವು ಪ್ರತಿದಿನ ಒಬ್ಬರ ಮುಖವನ್ನೊಬ್ಬರು ನೋಡಲೇಬೇಕು. ಈ ಹಿನ್ನೆಲೆಯಲ್ಲಿ ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಜೀವನ ಸಾಗಿಸಬೇಕು ಎಂದು ಅವರು ಹೇಳಿದರು.
ತಾಜಪುರ ಎಚ್. ಗ್ರಾಮದಲ್ಲಿ ಬಹಳ ದಿನಗಳ ಬೇಡಿಕೆ ಈಗ ಸುಸಜ್ಜಿತ ಟಿಪ್ಪು ಸುಲ್ತಾನ್ ಸರ್ಕಲ್ ನಿರ್ಮಾಣದೊಂದಿಗೆ ಈಡೇರಿದೆ. ಕನ್ನಡ ರಾಜ್ಯೋತ್ಸವ ದಿನದಂದು ಸರ್ಕಲ್ ಉದ್ಘಾಟಿಸಿದ್ದೇವೆ. ಟಿಪ್ಪು ಸುಲ್ತಾನ ಬಗ್ಗೆ ರಾಜ್ಯದಲ್ಲಿ ಅನೇಕ ಗೊಂದಲಗಳನ್ನು ಸೃಷ್ಠಿಸಲಾಗಿದೆ. ಟಿಪ್ಪು ಸುಲ್ತಾನರು ಮೈಸೂರು ಹುಲಿಯಾಗಿ ಬ್ರಿಟೀಷರ ವಿರುದ್ಧ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ಮಾಡಿದ್ದಾರೆ. ಆದರೆ, ಬಿಜೆಪಿಯ ಮಾಜಿ ಸಿಎಂ ಗಳು ಸೇರಿದಂತೆ ಕೆಲವು ಜನ ನಾಯಕರು ಕಳೆದ ಐದು ವರ್ಷಗಳಲ್ಲಿ ಟಿಪ್ಪು ಸುಲ್ತಾನ ಮುಸ್ಲಿಮರ ಅರಸ. ಆತ ಓರ್ವ ಮತಾಂಧ ಎಂದು ಹೇಳುತ್ತ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಅಪಪ್ರಚಾರ ಮಾಡಿದ್ದಾರೆ. ಆದರೆ, ಬಿಜೆಪಿಯ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಇದೇ ನಾಯಕರು ಟಿಪ್ಪು ಸುಲ್ತಾನರ ಟೋಪಿ ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಬ್ರಿಟೀಷರ ಕಾಲದಲ್ಲಿ ಟಿಪ್ಪು ಸುಲ್ತಾನ ಮೈಸೂರು ಭಾಗದಲ್ಲಿ ಅನೇಕ ಹಿಂದು ದೇವಸ್ಥಾನಗಳಿಗೆ ಜಾಗ ನೀಡಿ ಅನುದಾನ ಕೊಟ್ಟಿದ್ದಾರೆ. ಇದು ಬಿಜೆಪಿಯವರಿಗೂ ಗೊತ್ತಿದೆ. ಆದರೂ ರಾಜಕೀಯಕ್ಕಾಗಿ ಹಿಂದೂ- ಮುಸ್ಲಿಮರ ಮತಗಳ ವಿಭಜನೆಗಾಗಿ ಟಿಪ್ಪುವಿನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಅಭಿವೃದ್ಧಿಗೆ ಶಾಶ್ವತ ಕೆಲಸಗಳು ಬಹುಮುಖ್ಯವಾಗಿವೆ. ನೀರಾವರಿ ಮೂಲಕ ರೈತರನ್ನು ಶ್ರೀಮಂತರನ್ನಾಗಿ ಮಾಡಿದ್ದೇವೆ. ಹೊಲಗಾಲುವೆ ಕೆಲಸ ಪೂರ್ಣಗೊಳಿಸಲಾಗುವುದು. ಹೀಗಾಗಿ ಯಾರೂ ಜಮೀನುಗಳನ್ನು ಮಾರಿಕೊಳ್ಳಬೇಡಿ. ಮುಂಬರುವ ದಿನಗಳಲ್ಲಿ ಪ್ರತಿ ಎಕರೆ ಜಮೀನಿನ ಬೆಲೆ ರೂ. 50 ಲಕ್ಷಕ್ಕೆ ಹೆಚ್ಚಳವಾಗಲಿದೆ. ಪ್ರತಿ ಎಕರೆ ಜಮೀನಿನಲ್ಲಿ ಕೇವಲ ರೂ. 5 ರಿಂದ 10 ಸಾವಿರ ಸಿಗುತ್ತಿದ್ದ ಉತ್ಪನ್ನ ಈಗ ರೂ. 1 ಲಕ್ಷಕ್ಕೇರಿದೆ. ನಿಮ್ಮ ಮಕ್ಕಳು ಮೊಮ್ಮಕ್ಕಳ ಮುಂದಿನ ಸಾವಿರಾರು ವರ್ಷಗಳ ಭವಿಷ್ಯ ಉತ್ತಮವಾಗಿಸುವ ಕೆಲಸ ಮಾಡಿಕೊಟ್ಟಿದ್ದೇನೆ. ಈ ಮೂಲಕ ನಿಮ್ಮ ಉಪಕಾರ ತೀರಿಸುವ ಪ್ರಯತ್ನ ಮಾಡಿದ್ದೇನೆ. ಶಾಶ್ವತ ನೀರಾವರಿ ಯೋಜನೆಗಳಿದ್ದರೆ ಯುವಕರು ಕೃಷಿ ಕಡೆಗೆ ಆಕರ್ಷಿತರಾಗುತ್ತಾರೆ. ಈಗ ನೀರಾವರಿ ಯೋಜನೆಗಳ ಜಾರಿಯಿಂದಾಗಿ ಯುವಕರು ಮತ್ತೆ ಕೃಷಿಗೆ ಮರಳುವಂತಾಗಿದೆ. ನೀರಿಲ್ಲದೆ ಬದುಕುವುದು ಬಹಳ ಕಷ್ಟ. ಆ ಕಷ್ಟದ ದಿನಗಳನ್ನು ದೂರ ಮಾಡಿದ್ದೇವೆ ಎಂದು ಎಂ. ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಆರ್. ಜಿ. ಯರನಾಳ, ಯಾಕೂಬ್ ಜತ್ತಿ, ಮಡ್ಡಿಸಿದ್ದ ಕುಮಟಗಿ, ಜಕ್ಕಪ್ಪ ಯಡವೇ, ಅನೀಲ ಹಿರೇಮಠ, ಶಂಕರಯ್ಯ ಶಾಸ್ತ್ರಿ, ಮಡಿಸಿದ್ದ ಕುಮಟಗಿ, ಶ್ರೀಶೈಲ ಹಾಲಳ್ಳಿ, ಪರಮೇಶ್ ಕಲಬೀಳಗಿ, ಗುರುರಾಜ ಸಾವಳಸಂಗ್, ಗೌಸಪೀರ್ ಮೊಕಾಶಿ, ಶಂಶುದ್ದೀನ್ ಮುಜಾವರ, ರಂಜಾನ್ ತಿಡಗುಂಡಿ, ಆಕೀಬ್ ತಿಡಗುಂದಿ, ಶರೀಪ್ ಸಗರ್, ಅಷ್ಪಾಕ್ ಮೊಕಾಶಿ, ಶೋಹೆಲ್ ಮೊಕಾಶಿ ಮುಂತಾದವರು ಉಪಸ್ಥಿತರಿದ್ದರು.