ಹಸಿರು ವಿಜಯಪುರ ಜಿಲ್ಲೆಯನ್ನಾಗಿ ಪರಿವರ್ತಿಸಲು ಕೋಟಿವೃಕ್ಷ ಅಭಿಯಾನ | ೩-೪ ತಿಂಗಳಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ
ವಿಜಯಪುರ: ಸಿದ್ದೇಶ್ವರ ಶ್ರೀಗಳ ನೆನೆಪಿನಲ್ಲಿ ಯುವಪೀಳಿಗೆಗೆ ಅವರ ಸಂದೇಶ ಮುಂದುವರೆಸಲು, ಹಸಿರು ವಿಜಯಪುರ ಜಿಲ್ಲೆಯನ್ನಾಗಿ ಪರಿವರ್ತಿಸಲು ಕೋಟಿವೃಕ್ಷ ಅಭಿಯಾನದ ಜೊತೆಗೆ ಗತವೈಭವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಾಗುವ ನಿಟ್ಟಿನಲ್ಲಿ ಡಿ.೨೪ರಂದು ‘ವೃಕ್ಷೋಥಾನ್ ಹೆರಿಟೆಜ್ ರನ್’ ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಮ್ಮ ನೆಲದಲ್ಲಿ ಹುಟ್ಟಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜಗತ್ತಿಗೆ ಬೆಳಕಾದವರು, ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳವರು. ಅವರು ಬಯಲಲ್ಲಿ ಬಯಲಾಗಿ, ಬರುವ ಜನವರಿ ದಿ.೨ ಕ್ಕೆ ಒಂದು ವರ್ಷ ತುಂಬುತ್ತದೆ. ಪೂಜ್ಯರು ಕೃಷಿ, ಗ್ರಾಮೀಣ ಬದುಕು, ವಿದ್ಯಾರ್ಥಿಗಳು, ಶಿಕ್ಷಣ, ವಿಜ್ಞಾನ, ಕ್ರೀಡೆ, ಪರಿಸರ, ಪ್ರಕೃತಿಯಲ್ಲಿ ಅತೀವ ಆಸಕ್ತಿ ಹೊಂದಿ, ಈ ರೀತಿಯ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದ ಶ್ರೀಗಳ ನೆನಪಿನಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ವೃಕ್ಷೋತ್ಥಾನ ಹೆರಿಟೇಜ್ ರನ್ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಐದು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ, ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಐದು ಗ್ಯಾರಂಟಿಗಳ ಅನುಷ್ಠಾನದ ಮೂಲಕ ಅಭೂತಪೂರ್ವ ಸಾಧನೆ ಮಾಡಿ, ಇತಿಹಾಸವನ್ನೇ ಸೃಷ್ಟಿಸಿದೆ. ವಿದೇಶಿ ನೇರ ಹೂಡಿಕೆಯಲ್ಲಿ ಇಡೀ ದೇಶದಲ್ಲಿ ಪ್ರಥಮ ಸ್ಥಾನದಲ್ಲಿ ವಿಜೃಂಭಿಸುತ್ತಿದೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಈ ಸರಕಾರದಲ್ಲಿ ನನಗೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿ ಖಾತೆಯ ಹೊಣೆಯನ್ನೂ ವಹಿಸಲಾಗಿದ್ದು, ರಾಜ್ಯವನ್ನು ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಮಹತ್ವಾಕಾಂಕ್ಷೆ ಹೊಂದಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ನಾನು ಕೈಗಾರಿಕಾ ಸಚಿವನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ, ವಿಜಯಪುರಕ್ಕೆ ಮಂಜೂರಾಗಿದ್ದ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯಗಳು ಇರುವಂತೆ ನೋಡಿಕೊಳ್ಳಲು ಹಲವು ಉಪಕ್ರಮಗಳನ್ನು ಆರಂಭಿಸಿದ್ದೇನೆ. ಮುಖ್ಯವಾಗಿ ಇಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯವನ್ನು ಸೇರ್ಪಡೆ ಮಾಡಿದ್ದು, ಇದರಿಂದಾಗಿ ಬೋಯಿಂಗ್ ತರಹದ ವಿಮಾನಗಳು ಕೂಡ ಇಲ್ಲಿಗೆ ಬಂದಿಳಿಯಲಿವೆ. ಇವೆಲ್ಲದಕ್ಕೂ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಮಂಜೂರು ಮಾಡಿದ್ದು, ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ ಮುಂದಿನ ೩-೪ ತಿಂಗಳಲ್ಲಿ ವಿಜಯಪುರ ವಿಮಾನ ನಿಲ್ದಾಣವು ಉದ್ಘಾಟನೆಯಾಗಿ, ಇಲ್ಲಿಂದ ವೈಮಾನಿಕ ಸೇವೆಗಳು ಆರಂಭವಾಗಲಿವೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಭಾಗದಿಂದ ಪಕ್ಕದ ಮಹಾರಾಷ್ಟ್ರ, ಗೋವಾ, ತೆಲಂಗಾಣ, ದೆಹಲಿ, ಗುಜರಾತ್ ಮುಂತಾದ ರಾಜ್ಯಗಳೊಂದಿಗೆ ಔದ್ಯಮಿಕ, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಒಡನಾಟಗಳು ತೀವ್ರ ಗತಿಯಲ್ಲಿ ನಡೆಯಲಿವೆ. ಮುಖ್ಯವಾಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿನ ದ್ರಾಕ್ಷಿ ಬೆಳೆಯ ವ್ಯಾಪಾರ ಮತ್ತು ರಫ್ತು ಚಟುವಟಿಕೆಗಳಿಗೆ ಹೆಬ್ಬಾಗಿಲು ತೆರೆದುಕೊಳ್ಳಲಿದೆ ಎಂದು ಹೇಳಿದರು.
ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಬಿ.ಪಿ.ಎಲ್. ಪಡಿತರ ಚೀಟಿಗಳ ಪ್ರತೀ ಸದಸ್ಯರಿಗೆ ರೂ. ೧೭೦ ರಂತೆ ಜಿಲ್ಲೆಯ ಒಟ್ಟು ೧೩,೯೦,೧೨೦ ಸದಸ್ಯರಿಗೆ ೨೩ ಕೋಟಿ ೬೩ ಲಕ್ಷ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮೂಲಕ ವರ್ಗಾವಣೆ ಮಾಡಲಾಗಿದೆ. ‘ಶಕ್ತಿ’ ಗ್ಯಾರಂಟಿ ಯೋಜನೆಯಡಿ ಜಿಲ್ಲೆಯ ೮ ಘಟಕಗಳಿಂದ ಪ್ರತಿನಿತ್ಯ ೪,೦೮೬ ಸರತಿಗಳು ಕಾರ್ಯಾಚರಣೆ ಮಾಡುತ್ತಿದ್ದು, ಯೋಜನೆಯ ಪ್ರಾರಂಭದಿಂದ ದಿನಾಂಕ ೨೫-೧೦-೨೦೨೩ ರವರೆಗೆ ಒಟ್ಟು ೨ ಕೋಟಿ ೨೪ ಲಕ್ಷ ೩೬ ಸಾವಿರ ಮಹಿಳಾ ಪ್ರಯಾಣಿಕರು ಸದರಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು, ಒಟ್ಟು ೬೪೧೦ ಲಕ್ಷ ಮೊತ್ತದ ಆದಾಯ ಸಂಗ್ರಹಿಸಲಾಗಿದೆ. ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೪,೦೭,೫೮೮ ಫಲಾನುಭವಿಗಳು ಡಿ.ಬಿ.ಟಿ.ಯಿಂದ ಪುಶ್ ಆಗಿದ್ದು, ೪೭,೩೭೦ ಫಲಾನುಭವಿಗಳ ಅರ್ಜಿಗಳು ಡಿ.ಬಿ.ಟಿ. ಗೆ ಬರಲು ಬಾಕಿ ಇರುತ್ತವೆ. ಮೊದಲನೇ ಕಂತಿನ ಮೂಲಕ ೩,೫೫,೬೨೪ ಫಲಾನುಭವಿಗಳಿಗೆ ೭೧ ಕೋಟಿ ೧೨ ಲಕ್ಷ ೪೮ ಸಾವಿರ ಹಾಗೂ ಎರಡನೇ ಕಂತಿನಲ್ಲಿ ೪,೦೬,೩೫೦ ಫಲಾನುಭವಿಗಳಿಗೆ ೮೧ ಕೋಟಿ ೨೭ ಲಕ್ಷ ಮೊತ್ತದ ಖರ್ಚನ್ನು ಭರಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯ ೨೦೧ ಮೆಟ್ರೀಕ್ ಪೂರ್ವ ವಸತಿ ನಿಲಯಗಳಲ್ಲಿ ವಿವಿಧ ಪ್ರಾಯೋಜಕರ ಸಹಯೋಗದೊಂದಿಗೆ ಗಣಕಯಂತ್ರ, ಇಂಟರ್ನೆಟ್, ಪ್ರೊಜೆಕ್ಟರ್, ಸ್ಮಾರ್ಟ ಟಿ.ವಿ., ವೆಬ್ ಕ್ಯಾಮೆರಾ, ಮೈಕ್ರೋಫೋನ್ ಹಾಗೂ ಸ್ಪೀಕರ್ಗಳನ್ನು ಬಳಸಿ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ ಕ್ಲಾಸ್ ನಿಯಂತ್ರಣ ಕೇಂದ್ರದ ಮೂಲಕ ಪ್ರತಿನಿತ್ಯ ಸಂಜೆ ೬ ರಿಂದ ೮ ಗಂಟೆಯ ವರೆಗೆ ವಸತಿ ನಿಲಯಾರ್ಥಿಗಳಿಗೆ ವಿಶೇಷ ಬೋಧನಾ ವರ್ಗಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚುವರಿ ಕಲಿಕಾ ಸನ್ನಿವೇಶವನ್ನು ನಿರ್ಮಿಸಿ ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಬರ ಪರಿಸ್ಥಿತಿ ತಲೆದೊರಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಟಾಸ್ಕಫೋರ್ಸ ರಚಿಸಲಾಗಿದ್ದು, ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ಅಭಾವದ ಪ್ರಮಾಣವನ್ನು ಆಧರಿಸಿ, ಅಗತ್ಯವಿದ್ದಲ್ಲಿ ಖಾಸಗಿ ಬೋರ್ವೆಲ್ಗಳನ್ನೂ ಸಹ ಗುತ್ತಿಗೆ-ವ-ಒಪ್ಪಂದದ ಆಧಾರದ ಮೇರೆಗೆ ಪಡೆದುಕೊಂಡು, ಗ್ರಾಮೀಣ ಮತ್ತು ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸುವ ಸಾಧ್ಯಾ-ಸಾಧ್ಯತೆಗಳ ಕುರಿತು ವರದಿ ನೀಡಲು ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ಫೋರ್ಸ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.

