ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಮುಖಂಡ ಮಂಜುನಾಥ ಸುಣಗಾರ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಯುಪಿಐ (UPI) ಡಿಜಿಟಲ್ ಪಾವತಿ ವಹಿವಾಟುಗಳ ಮೇಲೆ ತೆರಿಗೆ ಮತ್ತು ವಹಿವಾಟು ಶುಲ್ಕ ವಿಧಿಸಲು ಹೊರಟಿರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮಂಜುನಾಥ ಸುಣಗಾರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಹಠಾತ್ ನಿರ್ಧಾರದಿಂದಾಗಿ ಬೀದಿ ಬದಿ ವ್ಯಾಪಾರಿಗಳು, ಮೀನುಗಾರರು ಹಾಗೂ ಅಸಂಘಟಿತ ವಲಯದ ಶ್ರಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕ್ರಮ ಬೀದಿ ಬದಿ ವ್ಯಾಪಾರಿಗಳು ಮತ್ತು ಮೀನುಗಾರರಿಗೆ ಕುತ್ತು ತರಲಿದೆ. ತರಕಾರಿ ಮಾರಾಟಗಾರರು, ಸಣ್ಣ ಅಂಗಡಿದಾರರು, ಬೀದಿ ಬದಿ ಶ್ರಮಿಕರು ಮತ್ತು ಮೀನುಗಾರರು ದಿನನಿತ್ಯದ ನಗದು ರಹಿತ ಸಣ್ಣ ವಹಿವಾಟುಗಳಿಗೆ UPI ಪಾವತಿಯನ್ನೇ ನೆಚ್ಚಿಕೊಂಡಿದ್ದಾರೆ. ಈಗ ಇಂತಹ ಸಣ್ಣ ವಹಿವಾಟುಗಳ ಮೇಲೆಯೂ ತೆರಿಗೆ ಮತ್ತು ಸೇವಾ ಶುಲ್ಕದ ಹೊರೆ ಹೊರಿಸಿದರೆ ಅವರ ಹೊಟ್ಟೆಮೇಲೆ ಹೊಡೆದಂತಾಗುತ್ತದೆ ಎಂದಿದ್ದಾರೆ.
ದಿನಗೂಲಿ ನೌಕರರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸಣ್ಣ ಪ್ರಮಾಣದ ಆದಾಯದ ಮೇಲೆಯೂ ತೆರಿಗೆಯ ಕಣ್ಣು ಬಿದ್ದಿರುವುದು ಖಂಡನೀಯ. ಡಿಜಿಟಲ್ ಕ್ರಾಂತಿಯ ಹೆಸರಿನಲ್ಲಿ ಶ್ರಮಿಕರ ಶ್ರಮದ ಹಣವನ್ನು ಕಸಿಯಲು ಸರ್ಕಾರ ಹೊರಟಿದೆ ಎಂದಿದ್ದಾರೆ.
ದೇಶವನ್ನು “ಡಿಜಿಟಲ್ ಇಂಡಿಯಾ” ಮಾಡುತ್ತೇವೆ ಎಂದು ಹೇಳಿ, ಸಾರ್ವಜನಿಕರನ್ನು ನಗದು ರಹಿತ ಪಾವತಿಗೆ ಅಭ್ಯಾಸ ಮಾಡಿಸಿ, ಈಗ ಏಕಾಏಕಿ ತೆರಿಗೆ ಹಾಗೂ GST ವಿಧಿಸುತ್ತಿರುವುದು ಸಾರ್ವಜನಿಕರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಎಸಗುತ್ತಿರುವ ಮೋಸ. ಸರ್ಕಾರ ತಕ್ಷಣವೇ ಈ ತೆರಿಗೆ ಮತ್ತು ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು. ಸಣ್ಣ ವ್ಯಾಪಾರಿಗಳು, ಮೀನುಗಾರರು ಮತ್ತು ಅಸಂಘಟಿತ ವಲಯದ ಶ್ರಮಿಕರ ಹಿತವನ್ನು ಕಾಯದಿದ್ದರೆ ದೇಶಾದ್ಯಂತ ಬೀದಿಗಿಳಿದು ತೀವ್ರ ಹೋರಾಟ ನಡೆಸಲಾಗುವುದು,” ಎಂದು ಮಂಜುನಾಥ ಸುಣಗಾರ ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

