ಬಸ್ ಗ್ಯಾರೇಜ್ ನಲ್ಲಿ ಭೀಕರ ಅಗ್ನಿ ದುರಂತ | ಇದ್ದ 35 ಬಸ್ಗಳಲ್ಲಿ 20ಕ್ಕೂ ಅಧಿಕ ಬಸ್ ಗಳಿಗೆ ಹಾನಿ
ಬೆಂಗಳೂರು: ಮಹಾನಗರದ ಬಸ್ ಗ್ಯಾರೇಜ್ ನಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೧೯ ಬಸ್ ಗಳು ಬೆಂಕಿಗಾಹುತಿಯಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದ ಸಮೀಪದಲ್ಲಿರುವ ಎಸ್.ವಿ ಕೋಚ್ ಬಸ್ ಬಾಡಿಬಿಲ್ಡರ್ಸ್ ಮತ್ತು ಗ್ಯಾರೇಜ್ ನಲ್ಲಿ ಸೋಮವಾರ ಬೆಳಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡು ನಿಂತಿದ್ದ ೧೯ಕ್ಕೂ ಹೆಚ್ಚು ಬಸ್ಗಳು ಸುಟ್ಟು ಕರಕಲಾಗಿವೆ. ಗ್ಯಾರೇಜ್ನಲ್ಲಿ ನಿಂತಿದ್ದ ಬಸ್ ಒಂದರ ಭಾಗಕ್ಕೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ವೆಲ್ಡಿಂಗ್ ಯಂತ್ರದಿಂದ ಕಿಡಿ ಹಾರಿದ್ದು ಇದು ಬೆಂಕಿ ಅವಘಡಕ್ಕೆ ಕಾರಣವಾಯಿತು. ಬಳಿಕ ಒಂದರನಂತರ ಒಂದು ಬಸ್ ಗೆ ಬೆಂಕಿ ವ್ಯಾಪಿಸಿದೆ ಎಂದು ನಾವು ಶಂಕಿಸಿದ್ದೇವೆ. ಬೆಂಕಿ ನಂತರ ಗ್ಯಾರೇಜ್ನಲ್ಲಿ ನಿಲ್ಲಿಸಲಾಗಿದ್ದ ಇತರ ಬಸ್ಗಳಿಗೆ ಹರಡಿ ಭಾರೀ ಹಾನಿಯನ್ನುಂಟುಮಾಡಿತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಕಿಯನ್ನು ನಂದಿಸಲು ಹಲವಾರು ಅಗ್ನಿಶಾಮಕ ವಾಹನಗಳನ್ನು ಸೇವೆಗೆ ನಿಯೋಜಿಸಲಾಗಿತ್ತು. ಸುಮಾರು 19 ಬಸ್ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಮತ್ತು ನಾಲ್ಕು ಭಾಗಶಃ ಹಾನಿಗೊಳಗಾಗಿವೆ. ಗ್ಯಾರೇಜ್ನಲ್ಲಿ 35 ಬಸ್ಗಳಿದ್ದವು. ಈ ಪೈಕಿ 20ಕ್ಕೂ ಹೆಚ್ಚು ಬಸ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಗ್ಯಾರೇಜ್ ಅನ್ನು ತೆರೆದ ಜಾಗದಲ್ಲಿ ಇರಿಸಲಾಗಿದ್ದರಿಂದ ಬೆಂಕಿ ಕಾಣಿಸಿಕೊಂಡಾಗ ಅದರಲ್ಲಿದ್ದ ಜನರು ಬೇಗನೆ ಹೊರಬರಲು ಸಾಧ್ಯವಾಯಿತು. ಇದರಿಂದ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಬೆಂಕಿಯಲ್ಲಿ ಯಾರೂ ಗಾಯಗೊಂಡಿಲ್ಲ. ಬೆಂಕಿಯ ನಿಖರವಾದ ಕಾರಣವನ್ನು ತನಿಖೆ ಮಾಡಲು ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.