ಉದಯರಶ್ಮಿ ದಿನಪತ್ರಿಕೆ
ಚಡಚಣ: ಸರ್ಕಾರದ ಸಹಾಯಧನ ಹಾಗೂ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೈತರು ಒಂದು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆಸುವ ಮೂಲಕ ವರ್ಷಕ್ಕೆ ಕನಿಷ್ಠ ₹5 ಲಕ್ಷದವರೆಗೆ ಲಾಭ ಪಡೆಯಬಹುದು ಎಂದು ವಿಜ್ಞಾನಿ ಡಾ. ಪರಮೇಶ್ವರ ನಾಯಕ್ ಹೇಳಿದರು.
ಭತಗುಣಕಿ ಗ್ರಾಮದ ಮುದ್ದೇಗೌಡ ಭೀಮನಗೌಡ ಪಾಟೀಲ ಅವರ ತೋಟದಲ್ಲಿ ಗುರುವಾರ ಆಯೋಜಿಸಿದ್ದ ರೇಷ್ಮೆ ತಾಂತ್ರಿಕ ಕಾರ್ಯಾಗಾರ ಹಾಗೂ ವಸ್ತು ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಲಾಭದಾಯಕವಾಗಿದ್ದು, ಕಡಿಮೆ ವೆಚ್ಚದಲ್ಲಿ ಹಾಗೂ ರಾಸಾಯನಿಕ ರಸಗೊಬ್ಬರಗಳ ಬಳಕೆಯಿಲ್ಲದೆ ಸಾವಯವ ಪದ್ಧತಿಯಲ್ಲಿ ಕೈಗೊಳ್ಳಬಹುದಾಗಿದೆ. ರೇಷ್ಮೆ ಬೆಳೆಗೆ ಸರ್ಕಾರದಿಂದ ವಿವಿಧ ರೀತಿಯ ಸಹಾಯಧನ ಹಾಗೂ ಪ್ರೋತ್ಸಾಹ ದೊರೆಯುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೇಷ್ಮೆ ಕೃಷಿಯತ್ತ ಮುಖ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ವಿಜಯಪುರದ ರೇಷ್ಮೆ ಉಪನಿರ್ದೇಶಕ ಸಿದ್ದರಾಜು ಎಸ್. ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಿಜಯಪುರದ ರೇಷ್ಮೆ ಸಹಾಯಕ ನಿರ್ದೇಶಕ ಬಿ.ವೈ. ಬಿರಾದಾರ, ರೇಷ್ಮೆ ವಿಸ್ತರಣಾಧಿಕಾರಿ ಗಂಗಾಧರ ಬಿ. ಜೇವೂರ, ಸಿಂದಗಿ ರೇಷ್ಮೆ ವಿಸ್ತರಣಾಧಿಕಾರಿ ಎಸ್.ಐ. ಗೋಲಗೊಂಡ, ಇಂಡಿ ರೇಷ್ಮೆ ವಿಸ್ತರಣಾಧಿಕಾರಿ ವ್ಹಿ.ಡಿ. ಬಜೆಂತ್ರಿ, ಹಿರಿಯ ತಾಂತ್ರಿಕ ಸಹಾಯಕಿ ವಾಸಂತಿ ಜೆ., ಕ್ಷೇಮಾಭಿವೃದ್ಧಿ ನೌಕರ ಎಸ್.ಎಲ್. ದಶವಂತ ಹಾಗೂ ಅಧಿಕಾರಿಗಳಾದ ಬಸವರಾಜ ಮೋಫಗಾರ ಸೇರಿದಂತೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾವಯವ ಕೃಷಿಕರಾದ ಪಾಂಡು ಪ್ಯಾಟಿ, ಮುದ್ದೇಗೌಡ ಭೀಮನಗೌಡ ಪಾಟೀಲ ಸೇರಿದಂತೆ ಚಡಚಣ ಹಾಗೂ ಇಂಡಿ ತಾಲೂಕಿನ ನೂರಾರು ರೇಷ್ಮೆ ಬೆಳೆಗಾರರು ಕಾರ್ಯಾಗಾರದಲ್ಲಿ ಭಾಗವಹಿಸಿ ರೇಷ್ಮೆ ಕೃಷಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿ ಹಾಗೂ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

