ಸಾಯಬಣ್ಣ ಮಾದರ ಅವರ ‘ದೇವರ ದ್ಯಾಮವ್ವ’ & ಪರವೀನಬಾನು ಶೇಖ ಅವರ ‘ದ್ಯುತಿ ಸಿಂಚನ’ ಕೃತಿಗಳ ಲೋಕಾರ್ಪಣೆ | ಬೆಳಗಾವಿ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸ್ತುತ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಥಾ ಸಂಕಲನಗಳು ಅಪರೂಪವಾಗುತ್ತಿದ್ದು, ಈ ಸಂದರ್ಭದಲ್ಲಿ ಸಾಹಿತಿ ಸಾಯಬಣ್ಣ ಮಾದರ ಅವರ ‘ದೇವರ ದ್ಯಾಮವ್ವ ಹಾಗೂ ಇತರ ಕಥೆಗಳು’ ಕಥಾ ಸಂಕಲನವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪರೂಪದ ಕೊಡುಗೆಯಾಗಿದೆ ಎಂದು ಬೆಳಗಾವಿ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿಯವರು ಅಭಿಪ್ರಾಯಪಟ್ಟರು.
ನಗರದ ಕನಕದಾಸ ಬಡಾವಣೆಯ ಗಾಂಧಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಸಾಯಬಣ್ಣ ಮಾದರ ಅವರ ‘ದೇವರ ದ್ಯಾಮವ್ವ’ ಕಥಾ ಸಂಕಲನ ಹಾಗೂ ಪರವೀನಬಾನು ಶೇಖ ಅವರ ‘ದ್ಯುತಿ ಸಿಂಚನ’ ಹನಿಗವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕ್ಷಣಿಕ ಸಾಹಿತ್ಯ ಸೃಷ್ಟಿಯ ನಡುವೆ ಕಥೆ ಕಟ್ಟುವುದು ಅತ್ಯಂತ ಕಠಿಣವಾದ ಕೆಲಸವಾಗಿದೆ. ಕಥೆ ರಚನೆಗೆ ಸೃಜನಶೀಲತೆ, ಏಕಾಗ್ರತೆ ಹಾಗೂ ಆಳವಾದ ಜ್ಞಾನ ಅಗತ್ಯ. ಕಥೆ ಕಟ್ಟುವಿಕೆ ಆಳವಾದ ಧ್ಯಾನ ಮತ್ತು ಏಕಾಗ್ರತೆಯನ್ನು ಬಯಸುತ್ತದೆ. ಅವಸರದ ಕಾವ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಇಂತಹ ಕಠಿಣ ಹಾಗೂ ಅದ್ಭುತ ಕಾರ್ಯವನ್ನು ಸಾಯಬಣ್ಣ ಮಾದರ ಅವರು ತಮ್ಮ ‘ದೇವರ ದ್ಯಾಮವ್ವ’ ಕಥಾ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಸಾಹಿತ್ಯವು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನರ ನೋವು, ಸಮಸ್ಯೆಗಳಿಗೆ ಧ್ವನಿಯಾಗಿ, ಪರಿಹಾರದ ಮಾರ್ಗವನ್ನು ತೋರಿಸುವಂತಿರಬೇಕು. ದಮನಿತರ ಧ್ವನಿಯಾಗುವಂತಹ ಸಾಹಿತ್ಯ ರಚನೆಯಾಗಿರುವುದು ಸಂತಸದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನೂ ಒಳಗೊಳ್ಳುವ ಮೂಲಕ ಸಾಹಿತ್ಯಿಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ. ಇಂತಹ ಕೃತಿಗಳು ಪರಿಷತ್ತಿನ ವೇದಿಕೆಯಲ್ಲಿ ಬಿಡುಗಡೆಯಾಗಿರುವುದರಿಂದ ಕೃತಿಗೂ ಗೌರವ ದೊರೆತಂತಾಗಿದೆ ಎಂದು ಬಾಗಲಕೋಟ ವಿವಿ, ಜಮಖಂಡಿ ಕುಲಸಚಿವ ಸೋಮಲಿಂಗ ಗೆಣ್ಣೂರ ಹೇಳಿದರು.
ಕೃತಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಓದುವ ಹಾಗೂ ಗ್ರಂಥ ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕವಿಗಳು, ಲೇಖಕರು ಹಾಗೂ ಉಪನ್ಯಾಸಕರಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಕಸಾಪ ತಿಕೋಟಾ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಲೇಖಕ ಸಾಯಬಣ್ಣ ಮಾದರ ಹಾಗೂ ಕವಯತ್ರಿ ಪರವೀನಬಾನು ಶೇಖ ಮಾತನಾಡಿದರು.
‘ದ್ಯುತಿ ಸಿಂಚನ’ ಹನಿಗವನ ಸಂಕಲನದ ಕುರಿತು ಕಸಾಪ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಕೃತಿ ಪರಿಚಯ ಮಾಡಿದರು.
‘ದೇವರ ದ್ಯಾಮವ್ವ’ ಕಥಾ ಸಂಕಲನದ ಕುರಿತು ಸಾಹಿತಿ ಮಮತಾ ಮುಳಸಾವಳಗಿ ವಿಮರ್ಶೆ ಮಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ವಿಜಯಲಕ್ಷ್ಮೀ ಹಳಕಟ್ಟಿ, ಜಿ.ಎಸ್. ಬಳ್ಳೂರ, ಎಂ.ಬಿ. ಕಟ್ಟಿಮನಿ, ಬಸನಗೌಡ ಬಿರಾದಾರ, ಲತಾ ವಾಲಿಕಾರ, ಗಂಗಮ್ಮ ರಡ್ಡಿ, ಮಲ್ಲಿಕಾರ್ಜುನ ಕೆಳಗಡೆ, ರುದ್ರಮ್ಮ ಗಿಡ್ಡಪ್ಪಗೋಳ, ಡಾ. ಎಂ.ಎ. ಗದ್ಯಾಳ, ಭಗವಂತ ಜಿಗಜಿಣಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ ಹಿರೇಕೊಪ್ಪ, ಪರಶುರಾಮ ಚಲುವಾದಿ, ಶಿವಾಜಿ ಮೋರೆ, ಶ್ರೀಕಾಂತ ನಾಡಗೌಡ, ರವಿ ಕಿತ್ತೂರ, ಮಂಜುಳಾ ಕಾಳಗಿ, ಸದಾನಂದ ಬಡಿಗೇರ, ಸಿದ್ದು ಶೇಟಗಾರ, ಅಜೀಜಾ ಶೇಖ, ನಿಖಿತಾ ಕಳಗಿನಮನಿ, ಕಾಳಪ್ಪ ಪತ್ತಾರ, ಸಚಿಂದ್ರ ಲಂಬು, ಮಿಲನ ಹೊಸಕೋಟೆ, ಕಿರಣ ಕುರಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಶಿಕಲಾ ನಾಯ್ಕೋಡಿ ಗೀತಗಾಯನ ನಡೆಸಿಕೊಟ್ಟರು. ಮೌನೇಶ್ವರ ಬಡಿಗೇರ ಸ್ವಾಗತಿಸಿ ಗೌರವಿಸಿದರು. ಪ್ರಾಧ್ಯಾಪಕ ರಾಜಶೇಖರ ಕಂಬಾರ ನಿರೂಪಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎಂ. ಹಳ್ಳೂರ ವಂದಿಸಿದರು.

