ವಿಜಯಪುರದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ | ಖ್ಯಾತ ಲೇಖಕ ಹಾಗೂ ಇತಿಹಾಸ ತಜ್ಞ ಡಾ. ಕೃಷ್ಣ ಕೊಲ್ಲಾರ ಕುಲಕರ್ಣಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಷ್ಟಗಳನ್ನು ಎದುರಿಸಿ ಸ್ವಯಂ ಸಾಧನೆಯ ಹಾದಿ ತುಳಿಯಬೇಕು ಎಂದು ಖ್ಯಾತ ಲೇಖಕ ಹಾಗೂ ಇತಿಹಾಸ ತಜ್ಞ ಡಾ. ಕೃಷ್ಣ ಕೊಲ್ಲಾರ ಕುಲಕರ್ಣಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ವತಿಯಿಂದ ನಗರದ ಬಿ.ಎಲ್.ಡಿ.ಇ ಆವರಣದಲ್ಲಿರುವ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಸೆ.೫ರ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದಿಂದ ಇಲ್ಲಿಯವರೆಗೆ ತಾವು ಸಾಗಿ ಬಂದ ಸಾಧನಾ ಪಯಣವನ್ನು ಮೆಲುಕು ಹಾಕಿದ ಅವರು, ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಾವೇ ಧೈರ್ಯದಿಂದ ಮೆಟ್ಟಿ ನಿಲ್ಲಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ತಾವು ನಿರ್ವಹಿಸಿದ ವೈವಿಧ್ಯಮಯ ಜವಾಬ್ದಾರಿಗಳು ತಮ್ಮ ಸಾಧನೆಯ ಮೆಟ್ಟಿಲುಗಳಾದ ಬಗೆಯನ್ನು ಇದೇ ವೇಳೆ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹಂಚಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಂಗಳೂರಿನ ಜನಪ್ರಿಯ ಮನೆಯಂಗಳದಲ್ಲಿ ಮಾತುಕತೆ ಮಾದರಿಯನ್ನು ಪ್ರತಿ ಜಿಲ್ಲೆಗೂ ವಿಸ್ತರಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಿಂದ ವಿಭಾಗ ಮಟ್ಟದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಸಂಶೋಧನಾ ಕೇಂದ್ರದ ಸದಸ್ಯ ಕಾರ್ಯದರ್ಶಿ ಎಮ್.ಎಸ್. ಮಧಬಾವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಬಿ. ನಾಯಕ್, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ಬಿ.ಆರ್. ಬನಸೋಡೆ, ದಾಕ್ಷಾಯಣಿ ಬಿರಾದಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಣಿ ಹುಡೇದ, ಡಾ. ಸಂಗಮೇಶ ಮೇತ್ರಿ, ಎನ್. ಆರ್. ಕುಲಕರ್ಣಿ, ಎಸ್.ಕೆ.ಕೊಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಸಾಧಕರೊಂದಿಗೆ ವಿಭಿನ್ನ ವಿಷಯಗಳ ಕುರಿತು ಸಂವಾದ ನಡೆಸಿದರು.
ಡಾ. ಕೃಷ್ಣ ಕೊಲ್ಲಾರ ಕುಲಕರ್ಣಿ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಮೋಹನ ಕಟ್ಟಿಮನಿ ನಿರೂಪಿಸಿ, ವಂದಿಸಿದರು.

