ಹುಣಶ್ಯಾಳದಲ್ಲಿ ವಿಬಿಜಿರಾಮ್-ಜೀ ಯೋಜನೆಯಡಿಯ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಂಸದ ರಮೇಶ ಜಿಗಜಿಣಗಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೂಲಿಕಾರರ ಹಿತರಕ್ಷಣೆಯ ದೃಷ್ಟಿಯಿಂದ ಅವರು ದುಡಿದ ಹಣ ನೇರವಾಗಿ ತಲುಪಲಿ ಎಂದು ಪಾರದರ್ಶಕ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರು ರೂಪಿಸಿದ್ದಾರೆ, ಎಷ್ಟೇ ವಿರೋಧ ವ್ಯಕ್ತವಾದರೂ ಬಡವರ ಹಿತಕ್ಕೆ ಪ್ರಾಮುಖ್ಯತೆ ನೀಡಿ ವಿಬಿಜಿರಾಮ್-ಜೀ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಗ್ರಾಮದಲ್ಲಿ ವಿಬಿಜಿರಾಮ್-ಜೀ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಜಿಗಜಿಣಗಿ, ಈ ಮುಂದೆ ನೀವು ದುಡಿದ ಹಣ ನೇರವಾಗಿ ದೊರಕುತ್ತಿರಲಿಲ್ಲ, ಹೀಗಾಗಿಯೇ ಪ್ರಧಾನಿ ಮೋದಿ ಅವರು ಈ ಹಿಂದಿನ ಯೋಜನೆಯನ್ನು ಮಾರ್ಪಾಡು ಮಾಡಿ ನೇರವಾಗಿ ನಿಮಗೆ ಹಣ ದೊರಕಿಸುವಂತೆ ಮಾಡುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದಾರೆ, ಕಾರ್ಮಿಕರಿಗೆ ನೇರವಾಗಿ ಹಣ ವರ್ಗಾವಣೆ ಬೇಡ ಎಂದು ಅನೇಕ ಶಕ್ತಿಗಳು ವಿರೋಧ ವ್ಯಕ್ತಪಡಿಸಿದವು, ಆದರೆ ಕೂಲಿಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಇರುವ ನಮ್ಮ ಪ್ರಧಾನಿ ಮೋದಿ ಅವರು ಎಲ್ಲ ವಿರೋಧವನ್ನು ಲೆಕ್ಕಿಸದೇ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಜು ಐಹೊಳೆ, ಮಾಜಿ ಜಿಪಂ ಸದಸ್ಯ ನವೀನ್ ಅರಿಕೇರಿ, ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ್, ಮಹಾನಗರ ಪಾಲಿಕೆಯ ಸದಸ್ಯ ಮಲ್ಲನಗೌಡ ಪಾಟೀಲ್, ವಿಜಯ ಜೋಶಿ, ಉದಯ ಕನ್ನಳ್ಳಿ, ರವಿ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಪಿಡಿಓಗಳಾದ ಎಸ್ ಆರ್ ಕಟ್ಟಿ, ನಾಮದೇವ್ ಸಿಂಧಿ, ವಿಜಯಲಕ್ಷ್ಮಿ ಹಿಟ್ನಳ್ಳಿ ಸೇರಿದಂತೆ ಹಲವರಿದ್ದರು.

