ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅಸಮಾಧಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇವಲ ಫೋಟೋ ಶೂಟ್ ಸೀಮಿತವಾದಂತೆ ಜಿಲ್ಲಾ ಉಸ್ತುವಾರಿ ಸಚಿವರು ಬರ ವೀಕ್ಷಣೆ ಮಾಡಿದ್ದಾರೆ, ಸಭೆಗಳನ್ನು ಸಹ ಪರಿಣಾಮಕಾರಿಯಾಗಿ ನಡೆಸಿಲ್ಲ, ಒಂದರ್ಥದಲ್ಲಿ ಸರ್ಕಾರ ಬರಗಾಲ ಪರಿಸ್ಥಿತಿಯನ್ನು ಬೇಕಾಬಿಟ್ಟಿಯಾಗಿ ನಿಭಾಯಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ
ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಇಂದು ರಾಜ್ಯ ಸರ್ಕಾರ ಬೇಜವಾಬ್ದಾರಿ ಹಾಗೂ ನಿಷ್ಕಾಳಜಿತನದಿಂದ ಸರಿಯಾದ ಮಾಹಿತಿ ಸಂಗ್ರಹಿಸದೇ ಬೇಕಾಬಿಟ್ಟಿಯಾಗಿ
ಹಾಗೂ ಬರಗಾಲದ ಮಾನದಂಡಗಳನ್ನು ಸಹ ಸರಿಯಾಗಿ ಪರಿಗಣಿಸದೇ ಇಂದು ಕೇವಲ ೧೦೧ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ ಎಂದರು.
೧೯೦ ತಾಲೂಕುಗಳಲ್ಲಿ ಮಳೆ ಕೊರತೆಯಾಗಿರುವುದನ್ನು ಸ್ವತಃ ಕಂದಾಯ ಸಚಿವರೇ ಒಪ್ಪಿದ್ದಾರೆ, ಆದರೆ ಬರಗಾಲ ಘೋಷಣೆ ಮಾತ್ರ ೧೦೧ ತಾಲೂಕುಗಳಿಗೆ ಮಾಡಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ೯೧ ತಾಲೂಕುಗಳು ಭೀಕರ ಪರಿಸ್ಥಿತಿ ಎದುರಿಸಿದರೂ ಕೇವಲ ೨೭ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಿರುವುದು
ಎಷ್ಟು ಸರಿ, ಬರಗಾಲ ಪ್ರದೇಶ ಎಲ್ಲಿದೆ ಎನ್ನುವುದು ಸರ್ಕಾರಕ್ಕೆ ಗೊತ್ತೇ ಇಲ್ಲವೇ?
ಎಂದರು.
ಮಂತ್ರಿಗಳು ಪ್ರತಿನಿಧಿಸುವ ಜಿಲ್ಲೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ, ಅವರು ಬಂದ ಸಂದರ್ಭದಲ್ಲಿ ಕೊರಳಿ ಪಟ್ಟಿ ಹಿಡಿದು ಕೇಳುತ್ತಾರೆ ಎಂಬ ಭಯದಿಂದ ತಮ್ಮ ಪ್ರದೇಶ ಬರ ಘೋಷಣೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರ ಬರ ವೀಕ್ಷಣೆ ಕೇವಲ ಫೋಟೋ ಶೂಟ್ ಗೆ ಸೀಮಿತವಾಗಿದೆ, ದೇವರಹಿಪ್ಪರಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿಗೆ ಭೇಟಿ ನೀಡಿಲ್ಲ, ಒಂದೇ ಒಂದು ಸಭೆ ನಡೆಸಿಲ್ಲ ಎಂದರು.
ಅತ್ತ ಅಧಿಕಾರಿಗಳು ಭೇಟಿ ನೀಡಿಲ್ಲ, ಈ ಎಲ್ಲ ಅಂಶಗಳಿಂದ ಬರಗಾಲ ಪರಿಸ್ಥಿತಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಣೆ ಮಾಡುತ್ತಿದೆ ಎಂದು ದೂರಿದರು.
ಹಳೆ ಮೈಸೂರು ಭಾಗದ ಎಲ್ಲ ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮೀಸಲಾಗಿದೆ, ಆದರೆ ಉತ್ತರ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಒಂದೇ ಒಂದು ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ ಎಂದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಾವಯವ ಬೀಜ ಪ್ರಮಾಣನ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ್ ರೆಡ್ಡಿ, ಶಿಲ್ಪಾ ಕುದರಗೊಂಡ, ಮಾಧ್ಯಮ ಪ್ರಮುಖ ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕೆಲಸ
ಕೇವಲ ಮಾತೆತ್ತಿದರೆ ಸಾಕು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ನಿಯಮಾವಳಿ ಬದಲಾವಣೆ ಮಾಡಿ ಎಂದು ಕಾಂಗ್ರೆಸ್ ನಾಯಕರು ದೂರುತ್ತಾರೆ, ಈ ಹಿಂದೆ ಲೋಕಸಭೆ ಚುನಾವಣೆ ಮುಂಚೆ ರಾಜ್ಯ ಸರ್ಕಾರ ರೈತರಿಗೆ ೪೦೪೭ ಕೋಟಿ ರೂ. ಪರಿಹಾರ ನೀಡಿದ್ದು, ಅದರಲ್ಲಿ ಕೇಂದ್ರ ಸರ್ಕಾರ ನೀಡಿದ್ದು
೩೪೫೪ ಕೋಟಿ ರೂ., ಹಾಗಾದರೆ ರಾಜ್ಯ ಸರ್ಕಾರ ನೀಡಿದ್ದು ಕೇವಲ ೫೦೦ ಕೋಟಿ ರೂ. ಮಾತ್ರ ಎಂದು ನಡಹಳ್ಳಿ ದೂರಿದರು.
ಪ್ರತಿ ಎಕರೆಗೆ ೫೦ ಸಾವಿರ ರೂ. ಪರಿಹಾರ ಘೋಷಿಸಿ
ಪ್ರಥಮ ಹಂತವಾಗಿ ಪ್ರತಿ ಎಕರೆಗೆ ೨೫ ಸಾವಿರ ರೂ. ಹಾಗೂ ಎರಡನೇಯ ಹಂತದಲ್ಲಿ ೨೫ ಸಾವಿರ ರೂ. ಕೂಡಲೇ ಬಿಡುಗಡೆ ಮಾಡಬೇಕು ಎಂದು ನಡಹಳ್ಳಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ, ಸಾಲದ ಸುಳಿಯಲ್ಲಿ ಸಿಲುಕಿ ರೈತ ಒದ್ದಾಡುತ್ತಿದ್ದಾನೆ.
ಕೇಂದ್ರದಿಂದ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ನಾವು ಸಂಪೂರ್ಣ ಸಹಕಾರ ನೀಡಲು ಸಿದ್ದ, ಮುಖ್ಯಮಂತ್ರಿಗಳು ಯಾವಾಗ ಕರೆಯುತ್ತಾರೆ ಆಗ ನಾವು ಅವರ ಜೊತೆ ನಿಯೋಗದೊಂದಿಗೆ ಹೋಗಲು ನಾವು ಸಿದ್ದ ಎಂದರು.

