ಚಿಂಚೋಳಿ ಅಂಗನವಾಡಿಯಲ್ಲಿ ಅಧಿಕಾರಿಗಳ ‘ಕಮಿಷನ್’ ಲೀಲೆ! | ಗ್ರಾಮಸ್ಥರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ
ಅಫ್ಜಲಪುರ: “ಸೋರುತ್ತಿಹದು ಮನೆಯ ಮಾಳಿಗೆ ಅಜ್ಞಾನದಿಂದ..” ಶಿಶುನಾಳ ಶರೀಫರ ಈ ಮಾತು ಅಫ್ಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಅಂಗನವಾಡಿ ಕೇಂದ್ರಗಳ ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ತಲೆಯ ಮೇಲಿನ ಸೂರು ಕುಸಿದು ಬೀಳುವ ಅಪಾಯದಲ್ಲಿದ್ದರೂ, ಅದನ್ನು ದುರಸ್ತಿ ಮಾಡದ ಅಧಿಕಾರಿಗಳು ಮಾತ್ರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾಂಪೌಂಡ್ ಗೋಡೆ ನಿರ್ಮಿಸಲು ಹೊರಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಉದುರುತ್ತಿದೆ ಸಿಮೆಂಟ್ ಪ್ಲಾಸ್ಟರ್, ಜೀವಭಯದಲ್ಲಿ ಮಕ್ಕಳು
ಚಿಂಚೋಳಿ ಗ್ರಾಮದ ಒಂದು ಅಂಗನವಾಡಿ ಕಟ್ಟಡದ ಛಾವಣಿಯ ಪ್ಲಾಸ್ಟರ್ ಕಿತ್ತು ಸಿಮೆಂಟ್ ಚೂರುಗಳು ನೆಲಕ್ಕೆ ಉದುರುತ್ತಿವೆ. ಪಕ್ಕದಲ್ಲೇ ಇರುವ ಮತ್ತೊಂದು ಹಳೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಶಿಥಿಲ ಕಟ್ಟಡ ಅಪಾಯಕಾರಿಯಾದ ಕಾರಣ ಅಂಗನವಾಡಿಯನ್ನು ಅನಿವಾರ್ಯವಾಗಿ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ.
ಅಧಿಕಾರಿಗಳ ವಿಚಿತ್ರ ಆದ್ಯತೆ: ಕಟ್ಟಡವಿಲ್ಲದ ಜಾಗಕ್ಕೆ ಕಾಂಪೌಂಡ್!
ಮಕ್ಕಳು ಕೂರಲು ಯೋಗ್ಯವಾದ ಸೂರು ಇಲ್ಲದಿರುವಾಗ, ಶಿಥಿಲಗೊಂಡಿರುವ ಹಾಗೂ ಬಳಕೆಯಲ್ಲಿಲ್ಲದ ಕಟ್ಟಡಗಳ ಸುತ್ತ ಕಾಂಪೌಂಡ್ ಗೋಡೆ ನಿರ್ಮಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಮಕ್ಕಳ ಜೀವ ರಕ್ಷಣೆಗಾಗಿ ಕಟ್ಟಡ ದುರಸ್ತಿ ಮಾಡುವುದನ್ನು ಬಿಟ್ಟು ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.
ಅನುದಾನ ಗುಳುಂ ಮಾಡಲು ಸ್ಥಳ ಬದಲಾವಣೆ ತಂತ್ರ?
ಬೇರೆ ಅಂಗನವಾಡಿ ಕೇಂದ್ರಕ್ಕೆ ಮಂಜೂರಾಗಿದ್ದ ಕಾಂಪೌಂಡ್ ಕಾಮಗಾರಿಯನ್ನು ನಿಯಮಬಾಹಿರವಾಗಿ ಇಲ್ಲಿಗೆ ಸ್ಥಳಾಂತರಿಸಿ, ಬಿಲ್ ಪಾಸ್ ಮಾಡಿಕೊಳ್ಳಲು ಅಧಿಕಾರಿಗಳು ಹಾಗೂ ಎಂಜಿನಿಯರ್ಗಳು ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೇವಲ ಹಣ ಲೂಟಿ ಮಾಡುವ ಉದ್ದೇಶದಿಂದ ಈ ‘ತಂತ್ರ’ ರೂಪಿಸಲಾಗಿದೆ ಎಂದು ಸ್ಥಳೀಯರು ನೇರವಾಗಿ ಆರೋಪಿಸುತ್ತಿದ್ದಾರೆ.
ಗ್ರಾಮಸ್ಥರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಕಾಮಗಾರಿಯ ತನಿಖೆ ನಡೆಸಿ, ಮಕ್ಕಳ ಹಿತದೃಷ್ಟಿಯಿಂದ ಹೊಸ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

