ಸಿದ್ದೇಶ್ವರ ಶ್ರೀಗಳ ಇಂಗ್ಲೀಷ ಪ್ರವಚನಗಳ ಸಂಗ್ರಹದ ಕೃತಿ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಕೃತಿಯ ಲೇಖಕ ಡಾ. ಎಂ.ಎಸ್.ಚಾಂದಕವಟೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಇಂಗ್ಲಿಷ್ನಲ್ಲಿ ಮಾಡಿರುವ ಪ್ರವಚನಗಳ ಸಂಗ್ರಹವಾದ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಪುಸ್ತಕವನ್ನು ಕೃತಿಯ ಲೇಖಕರಾದ ಎಂ.ಎಸ್.ಚಾಂದಕವಟೆ ಅವರು ಕೈಗಾರಿಕೆ, ಮೂಲ ಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಚಿವರಿಗೆ ಶನಿವಾರ ನಗರದಲ್ಲಿರುವ ಗೃಹ ಕಚೇರಿಯಲ್ಲಿ ನೀಡಿದರು.
ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಆಫ್ ಸಾಯಿನ್ಸ್ ಆ್ಯಂಡ್ ಹ್ಯೂಮನ್ ವ್ಯಾಲ್ಯುಸ್ ಸಂಸ್ಥೆ ಈ ಪುಸ್ತಕವನ್ನು ಪ್ರಕಟಿಸಿದ್ದು, ಆಗಷ್ಟ17ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆಯಾಗಿತ್ತು. ಶ್ರೀ ಸಿದ್ದೇಶ್ವರ ಶ್ರೀಗಳ ಪ್ರವಚನಗಳ ಕನ್ನಡ ಪುಸ್ತಕಗಳು ಮತ್ತು ಭಾಷಾಂತರ ಕೃತಿಗಳು ಸಾಕಷ್ಟಿವೆ. ಆದರೆ ಶ್ರಿಗಳು ಇಂಗ್ಲಿಷ್ನಲ್ಲಿ ಮಾಡಿರುವ ಪ್ರವಚನಗಳ ಸಂಗ್ರಹ ಬಂದಿರುವುದು ಇದೇ ಮೊದಲು ಎಂದು ಹಿರಿಯ ಲೇಖಕ ಚಾಂದಕವಟೆ ಅವರು ಸಚಿವರಿಗೆ ಇದೇ ವೇಳೆ ವಿವರಿಸಿದರು.
ಶ್ರೀ ಸಿದ್ದೇಶ್ವರ ಶ್ರೀಗಳು ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಇದ್ದಾಗ ರವಿವಾರಕ್ಕೊಮ್ಮೆ ಇಂಗ್ಲಿಷ್ ನಲ್ಲಿ ಪ್ರವಚನ ಮಾಡುತ್ತಿದ್ದರು. ತಾವು ಅದನ್ನು ಸಂಗ್ರಹಿಸಿರುವುದಾಗಿ ಹೇಳಿದ ಅವರು, ಶ್ರೀಗಳಿಗೆ ಇಂಗ್ಲಿಷ್ ಭಾಷೆ ಮೇಲೂ ಪ್ರಭುತ್ವ ಇತ್ತು. ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಶ್ರೀಗಳ ವಿಚಾರಗಳನ್ನು ಪ್ರಚಾರ ಮಾಡಲು ಇಂಥ ಕೃತಿಗಳ ಅಗತ್ಯವಿರುವುದಾಗಿ ಮನಗಂಡು ಅಭಿಮಾನದಿಂದ ಈ ಕೆಲಸ ಮಾಡಿರುವುದಾಗಿ ಹೇಳಿದರು.
ಇದಲ್ಲದೆ ಆಯ್ದ ಪ್ರವಚನಗಳ ‘ಸಾಧಕರ ಜೀವನ ಪ್ರಸಂಗಗಳು’ ಹಾಗೂ ಬುದ್ಧನ ಕುರಿತು ಶ್ರೀಗಳು ಹೇಳಿರುವ ವಿಷಯದ ‘ಬುದ್ಧನ ನೆನಹುಗಳು’ ಪುಸ್ತಕಗಳನ್ನು ಕೂಡ ಚಾಂದಕವಟೆ ಅವರು ಸಚಿವರಿಗೆ ನೀಡಿದರು.
ಸಂತಸದಿಂದ ಕೃತಿ ಸ್ವೀಕರಿಸಿದ ಸಚಿವರು ಲೇಖಕರಿಗೆ ಅಭಿನಂದನೆ ಸಲ್ಲಿಸಿದರು.
ಲೇಖಕರು ಇನ್ನೊಂದು ಇಂಗ್ಲಿಷ್ ಕೃತಿ ರಚಿಸುತ್ತಿದ್ದು, ಅದು ಕೂಡ ಪೂರ್ಣಗೊಂಡ ಬಳಿಕ ಪ್ರಕಟಣೆಯಾಗಲಿದೆ.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಧೋ. ಕಟಕದೊಂಡ, ಖಾದಿ ಮತ್ತು ಗ್ರಾಮೋದ್ಯೊಗ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಮುಂತಾದವರು ಉಪಸ್ಥಿತರಿದ್ದರು.

