ಲೇಖನ
– ಡಾ. ಶಶಿಕಾಂತ ಪಟ್ಟಣ.
ರಾಮದುರ್ಗ – ಪುಣೆ
ಉದಯರಶ್ಮಿ ದಿನಪತ್ರಿಕೆ
ಕೊಂಡೆ ಮಂಚಣ್ಣ ಬಿಜ್ಜಳನ ಆಸ್ಥಾನದ ಮಂತ್ರಿಯಾಗಿದ್ದು, ಬಸವಣ್ಣನವರಿಗೆ ಅತ್ಯಂತ ಆಪ್ತಚರನಾದ ಮಂಚಣ್ಣನವರನ್ನು ಕೆಲ ವೈದಿಕ ಮನಸ್ಸು ಇತಿಹಾಸದಲ್ಲಿ ಅವನಿಂದಲೇ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು ಎನ್ನುವ ಹುಸಿ ಕಥೆಯನ್ನು ಸೃಷ್ಟಿ ಮಾಡಿದರು.
ಈತ ಗುಪ್ತ ಭಕ್ತಿಯನ್ನು ಮಾಡುತ್ತಿದ್ದ ವೈಷ್ಣವ ಬ್ರಾಹ್ಮಣ ಇದನ್ನು ಸಹಿಸದ ಶೈವ ಬ್ರಾಹ್ಮಣರು ಈತನ ಮೇಲೆ ಖೊಟ್ಟಿ ಆರೋಪವನ್ನು ಹೊರಿಸಿ ಬಸವ ದ್ರೋಹಿ ಎನ್ನುವಂತೆ ಬಿಂಬಿಸಿದರು .
ಕೊಂಡೆ ಮಂಚಣ್ಣ 12ನೇ ಶತಮಾನದ ಕಲ್ಯಾಣದ ಶರಣರಲ್ಲಿ ಒಬ್ಬರು. ಇವರು ಬಸವಣ್ಣನವರ ಕಾಲದವರು. ಕೊಂಡೆ ಮಂಚಣ್ಣರ ಇವರು ಶರಣರ ಆಂದೋಲನದಲ್ಲಿ ಮತ್ತು ಕಲ್ಯಾಣದ ಕ್ರಾಂತಿಯ ಸಮಯದಲ್ಲಿ ಉಲ್ಲೇಖಗೊಳ್ಳುವ ವ್ಯಕ್ತಿ.
ಇವರ ಧರ್ಮಪತ್ನಿ ಲಕ್ಷ್ಮಮ್ಮ. ಲಕ್ಷ್ಮಮ್ಮ ಅವರು ಮೊದಲು ಹರಿಭಕ್ತಿಯಲ್ಲಿದ್ದು, ನಂತರ ಶಿವಭಕ್ತಿಯನ್ನು ಸ್ವೀಕರಿಸಿದ ಶರಣೆ. ಇವರ ವಚನಗಳ ಅಂಕಿತನಾಮ ‘ಅಗಜೇಶ್ವರಲಿಂಗ’.ಐತಿಹಾಸಿಕ ಹಾಗೂ ಸಾಹಿತ್ಯಿಕ ಉಲ್ಲೇಖ: ಬಸವ ಯುಗದ ಕೆಲ ಪರಂಪರೆ ಹಾಗೂ ಕಥೆಗಳಲ್ಲಿ ಕೊಂಡೆ ಮಂಚಣ್ಣನವರ ಹೆಸರು ಬರುತ್ತದೆ. ಇವರನ್ನು ಕೆಲವೊಮ್ಮೆ ಗುಪ್ತ ಮಂಚಣ್ಣ ಎಂತಲೂ ಕರೆದಿದ್ದಾರೆ ಇವರನ್ನು ಕೊಂಡೆ ಮಂಚಣ್ಣ ಅಥವಾ ಧೂಪದ ಮಂಚಣ್ಣಇವರಿಬ್ಬರೂ ಬೇರೆ ಎಂದು ಚರ್ಚಿಸಲಾಗುತ್ತದೆಯಾದರೂ, ವಚನ ಸಾಹಿತ್ಯದ ಐತಿಹಾಸಿಕ ಹಿನ್ನೆಲೆಯಲ್ಲಿ ಇವರ ಹೆಸರು ಚಿರಪರಿಚಿತ.
ಶರಣ ಮಂಚಣ್ಣ ಖಳನಾಯಕನೇಕೆ ಎನಿಸಿಕೊಂಡನು?
ಮಂತ್ರಿ ಮಂಚಣ್ಣ ಬಸವಣ್ಣ ಮತ್ತು ಬಿಜ್ಜಳರ ಜೊತೆಗೆ ಮಧುರ ಭಾಂಧವ್ಯವನ್ನು ಹೊಂದಿದವನು. ಕನ್ನಡ ಭಾಷೆಯಲ್ಲಿ ಕೊಂಡೆ ಎನ್ನುವುದಕ್ಕೆ ಹಲವು ಅರ್ಥಗಳಿವೆ.
ಕನ್ನಡದಲ್ಲಿ ‘ಕೊಂಡೆ’ ಎಂದರೆ ಹಲವು ಅರ್ಥಗಳಿವೆ. ಒಂದು ಅರ್ಥದಲ್ಲಿ ಕೊಂಡೆ ಎಂದರೆ ಸೇತುವೆ ಸಂಬಂಧಗಳನ್ನು ಬೆಸೆಯುವ ಸಾಧನ ಎಂತಲೂ ಎಂದುಕೊಳ್ಳಬಹುದು. ಅರಸ ಬಿಜ್ಜಳ ಮತ್ತು ಬಸವಣ್ಣನವರ ನಡುವೆ ಮಧುರ ಬಾಂಧವ್ಯ ಮತ್ತು ಸಂಬಂಧವನ್ನು ಬೆಸೆಯುವ ಮತ್ತುಪರಸ್ಪರ ರಾಜತಾಂತ್ರಿಕ ಮಹತ್ತರವಾದ ವಿಷಯಗಳನ್ನು ಹೇಳುತ್ತಿರುವ ಕಾರ್ಯವನ್ನು ಮಾಡುತ್ತಿದ್ದನು.
ಕೊಂಡೆ ಮಂಚಣ್ಣನು ಗುಪ್ತಚರ ಮಂಚಣ್ಣನಾಗಿದ್ದು ಹೇಗೆ?
ಮಂಚಣ್ಣನು ಒಬ್ಬ ವೈಷ್ಣವ ಬ್ರಾಹ್ಮಣ, ಆವತ್ತಿನ ಬಸವಣ್ಣನವರ ಸಾಮಾಜಿಕ ಸುಧಾರಣೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಆಕರ್ಷಿತನಾಗಿ ತಾನೂ ಕೂಡ ಲಿಂಗಾಯತ ಧರ್ಮದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯನ್ನು ಹೊಂದಿದ್ದನು. ತನ್ನ ಸುತ್ತಲಿನ ಪರಿಸರ ವೈಷ್ಣವ ಮತ್ತು ಶೈವ ಪಂಥೀಯರ ನಿರಂತರ ತಿಕ್ಕಾಟದಲ್ಲಿ ತಾನು ಇಷ್ಟ ಲಿಂಗ ಪೂಜೆಯನ್ನು ಬಹಿರಂಗವಾಗಿ ಮಾಡಿಕೊಳ್ಳಲು ಮತ್ತು ವಚನ ಚಳುವಳಿಯಲ್ಲಿ ಬಹಿರಂಗವಾಗಿ ಗುರುತಿಸಲು ಹಿಂದೇಟು ಹಾಕುತ್ತಿದ್ದನು, ಹೀಗಾಗಿ ಗೌಪ್ಯವಾಗಿ ತಾನು ತನ್ನ ಮನೆಯಲ್ಲಿಯೇ ಗುಪ್ತವಾಗಿ ಲಿಂಗ ಯೋಗವನ್ನು ಮಾಡುತ್ತಿದ್ದನು. ಬಸವಣ್ಣನವರ ಮತ್ತು ಕೊಂಡೆ ಮಂಚಣ್ಣನವರ ಆತ್ಮೀಯತೆಯನ್ನು ಕಂಡು ಕಸಿವಿಸಿಗೊಂಡ ಶೈವರು ಇವರ ಮೇಲಿನ ಗುಮಾನಿಯಿಂದ ಕೊಂಡೆ ಮಂಚಣ್ಣನವರ ಮನೆಯ ಕಿಟಕಿಯಿಂದ ಇಣುಕಿ ನೋಡುತ್ತಿರುವಾಗ, ಕೊಂಡೆ ಮಂಚಣ್ಣ ಬಾಹ್ಯವಾಗಿ ವೈಷ್ಣವನಾಗಿ ನಟಿಸುತ್ತಾ ಒಳಗೊಳಗೇ ಲಿಂಗ ಪೂಜೆ ಮಾಡುತ್ತಿರುವ ಸಂಗತಿ ಗೊತ್ತಾದ ಮೇಲೆ ಇವನಿಗೆ ಗುಪ್ತಚರ ಮಂಚಣ್ಣ ಎಂದು ಕರೆಯಲಾಯಿತು. ಲಿಂಗಾಯತ ಶರಣನಾಗಿದ್ದ ಮಂಚಣ್ಣನವರ ಹೆಂಡತಿ ಲಕ್ಷ್ಮಮ್ಮ ಮಹಾಮನೆಯಲ್ಲಿ ತನ್ನ ವರ್ಗ ವರ್ಣ ಜೇಷ್ಠ ಶ್ರೇಷ್ಠತೆಯನ್ನು ಬಿಟ್ಟು ಅತ್ಯಂತ ಧನ್ಯತಾ ಭಾವದಿಂದ ಮಹಾಮನೆಯಲ್ಲಿ ಅಡುಗೆಯ ಕಾರ್ಯಕ್ಕೆ ಅಣಿಯಾಗುತ್ತಿದ್ದಳು. ಅವಳು ಒಬ್ಬ ವಚನಕರ್ತೆಯಾಗಿದ್ದಳು. ಇದರಿಂದ ಒಳಗೊಳಗೇ ಅಸಮಾಧಾನದಿಂದ ಕುದಿಯುತ್ತಿದ್ದ ಶೈವ ಬ್ರಾಹ್ಮಣರು, ಕಲ್ಯಾಣದ ಕ್ಷಿಪ್ರ ಕ್ರಾಂತಿಯ ಸೂತ್ರಧಾರ ಕೊಂಡೆ ಮಂಚಣ್ಣ ಎಂಬ ಅಪಪ್ರಚಾರ ಮಾಡ ಹತ್ತಿದರು. ಹೀಗಾಗಿ ಯಾರೋ ಹೂಡಿದ ಕುತಂತ್ರಕ್ಕೆ ಶರಣ ಭಕ್ತ ಕೊಂಡೆ ಮಂಚಣ್ಣನವರು ಶರಣ ಸಂಸ್ಕೃತಿ ಮತ್ತು ಚರಿತ್ರೆಯಲ್ಲಿ ಖಳನಾಯಕವಾದ ದುರಂತ ಸಂಗತಿ ಇನ್ನು ಮುಂದಾದರೂ ಸರಿ ಪಡಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಲ್ಲವೇ ?
ಬಾಕ್ಸ್
ಕೊಂಡೆ ಮಂಚಣ್ಣನವರ ಪತ್ನಿ ಲಕ್ಷ್ಮಮ್ಮ
ಕೊಂಡೆ ಮಂಚಣ್ಣನವರ ಪತ್ನಿ ಲಕ್ಷ್ಮಮ್ಮ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಕಾಲದ ಒಬ್ಬ ಪ್ರಮುಖ ಶಿವಶರಣೆ ಮತ್ತು ವಚನಗಾರ್ತಿ ಆಗಿದ್ದಾರೆ. ಇವರನ್ನು ವಚನ ಸಾಹಿತ್ಯದಲ್ಲಿ ‘ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ’ ಎಂದೇ ಗುರುತಿಸಲಾಗುತ್ತದೆ.
ಅಂಕಿತನಾಮ: ಇವರ ವಚನಗಳ ಅಂಕಿತನಾಮ “ಅಗಜೇಶ್ವರಲಿಂಗ” ಅಥವಾ “ಅಗಜೇಶ್ವರ”
ಪತಿ ಕೊಂಡೆ ಮಂಚಣ್ಣ ಹಾಗೂ ಇವರು ಆರಂಭದಲ್ಲಿ ಬಸವಣ್ಣನವರ ತತ್ವಗಳಿಗೆ ವಿರೋಧಿಯಾಗಿದ್ದರೆಂಬ ನಂಬಿಕೆ ಇದ್ದರೂ, ಲಕ್ಷ್ಮಮ್ಮನವರು ಸ್ವತಃ ಒಬ್ಬ ಶ್ರೇಷ್ಠ ಶರಣೆಯಾಗಿ ವೈಚಾರಿಕ ಮನೋಭಾವದ ವಚನಗಳನ್ನು ರಚಿಸಿದ್ದಾರೆ.
ವಚನಗಳ ವೈಶಿಷ್ಟ್ಯ: ಇವರ ವಚನಗಳಲ್ಲಿ ಸಾಮಾಜಿಕ ಜಾಗೃತಿ, ಭಕ್ತಿ, ನಿರ್ಭೀತಿ ಮತ್ತು ಅಂದಿನ ಸಮಾಜದಲ್ಲಿದ್ದ ಡಾಂಬಿಕತೆಯನ್ನು ಖಂಡಿಸುವ ವಿಚಾರಗಳು ಎದ್ದು ಕಾಣುತ್ತವೆ.


