ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕಲಾವಿದರ ಅಮೃತ ಹಸ್ತದಿಂದ ತಯಾರಿಸಲ್ಪಡುವ ಗಣಪತಿ ಮೂರ್ತಿಗಳು ಬಸವ ಹಸಿರು ಬಳಗದ ಭಕ್ತಿ, ಕಲೆಯ ಸಂಕೇತವಾಗಿವೆ ಎಂದು ಹೂವಿನಹಿಪ್ಪರಗಿ ಚಿತ್ರಕಲಾ ಶಾಲೆಯ ಪ್ರಾಚಾರ್ಯ ರಮೇಶ ಸಾಸನೂರ ಹೇಳಿದರು.
ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಬುಧವಾರ ಜರುಗಿದ ದೃಶ್ಯಬಿಂಬ ಕಲಾ ಪ್ರತಿಷ್ಠಾನ ವಿಜಯಪುರ ಹಾಗೂ ಬಸವ ಹಸಿರು ಬಳಗ ಸಹಯೋಗದ ‘ಅಮೃತ ಹಸ್ತದ ಮಣ್ಣಿನ ಗಣೇಶ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಣ್ಣಿನ ಗಣಪ ನೀರಲ್ಲಿ ಸುಲಭವಾಗಿ ಕರಗಿ ಹೋಗುತ್ತವೆ ಇದಕ್ಕಾಗಿ ವಿವಿಧ ಜಿಲ್ಲೆಗಳಿಂದ ಕಲಾಕಾರರು ಬಂದಿದ್ದಾರೆ. ನೆಲ, ಜಲ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಜೊತೆಗೆ ಮಣ್ಣಿನ ಗಣೇಶನ ಮೂರ್ತಿಗಳು ಪರಿಸರ ರಕ್ಷಣೆಗೂ ಮಹತ್ವದ ಕೊಡುಗೆಗಳಾಗಿವೆ ಎಂದರು
ಬಸವ ಹಸಿರು ಬಳಗದ ಗೌರವಾಧ್ಯಕ್ಷ ಎಸ್.ಎಸ್.ಗಡೇದ, ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಓಪಿ ಗಣಪನ ಮೂರ್ತಿ ನೀರಲ್ಲಿ ಕರಗದು, ಅದಕ್ಕೆ ಹಾಕಲಾದ ವಿವಿಧ ರಾಸಾಯನಿಕ ಬಣ್ಣಗಳಿಂದ ಸೀಸ, ಪಾದರಸದಂತಹ ಅಪಾಯಕಾರಿ ವಸ್ತುಗಳು ನೀರಿನಲ್ಲಿ ಸೇರಿ, ನೀರು ಸೇವನೆ ಮಾಡುವ ಮನುಷ್ಯನಿಗೂ ಅದರಲ್ಲಿ ವಾಸ ಮಾಡುವ ಜಲಚರಗಳಿಗೂ ಅಪಾಯ ತರುತ್ತದೆ. ಆದ್ದರಿಂದ ಮಣ್ಣಿನ ಗಣಪತಿ ಮೂರ್ತಿಗಳನ್ನು ನಿರ್ಮಿಸಿ ಮತಕ್ಷೇತ್ರ ವ್ಯಾಪ್ತಿಯ ೧೨೦ ಗ್ರಾಮಗಳಿಗೆ ಉಚಿತವಾಗಿ ನೀಡುವ ಮೂಲಕ ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಂಡಕನಾಳ, ಸತೀಶ ಕೇಮಶೆಟ್ಟಿ ಅವರ ತಂಡ ಪರಿಸರ ರಕ್ಷಣೆಯಲ್ಲಿ ಬಹುಮೂಲ್ಯ ಕೆಲಸ ಮಾಡುತ್ತಿದೆ. ಇವರ ಕಾರ್ಯ ಶ್ಲಾಘನೀಯ ಎಂದರು.
ಉತ್ನಾಳ ಹಿರೇಮಠದ ಸಂಗಮೇಶ್ವರ ಸ್ವಾಮೀಜಿ, ಸ್ಥಳೀಯ ಪಂಚವಟಿ ಆಶ್ರಮದ ಕಾಶೀನಾಥ ಸ್ವಾಮೀಜಿ, ಪುರಾಣಿಕ ಬಸಯ್ಯ ಶಾಸ್ತ್ರಿ ಹಿರೇಮಠ ಸಾನಿಧ್ಯ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಪಿಡಿಓ ಎಮ್.ಎಸ್.ಕತ್ತಿ, ಎಸ್.ಎಮ್.ದೊಡಮನಿ, ಎಸ್.ಎಸ್.ಭಂಟನೂರ ಹಾಗೂ ಕಲಾವಿದರು ಇದ್ದರು.

