ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯಜ್ಞೋಪವೀತ ಧಾರಣೆ ವಿಪ್ರ ಧಾರ್ಮಿಕ ಪರಂಪರೆಯಲ್ಲಿ ಮಹತ್ವದ್ದಾಗಿದೆ ಎಂದು ಶ್ರೀಚಿದಂಬರ ಸೇವಾ ಸಮಿತಿ ಅಧ್ಯಕ್ಷ ನರೇಂದ್ರ ನಾಡಗೌಡ ಹೇಳಿದರು.
ಪಟ್ಟಣದ ವಿಠ್ಠಲಮಂದಿರದಲ್ಲಿ ಗುರುವಾರ ವಿಪ್ರ ಸಮುದಾಯದಿಂದ ಜರುಗಿದ ಯಜ್ಞೋಪವೀತ ಧಾರಣೆಯ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಪ್ರರು ಯಜ್ಞೋಪವೀತವನ್ನು ಸಾಮಾನ್ಯವಾಗಿ ಜನಿವಾರ ಅಥವಾ ಪವಿತ್ರದಾರ ಎಂದು ಕರೆಯುತ್ತಾರೆ. ಜನಿವಾರ ದೇವಋಣ, ಋಷಿಋಣ ಮತ್ತು ಪಿತೃಋಣಗಳನ್ನು ನೆನಪಿಸುವ ಸಂಕೇತವಾಗಿದೆ ಎಂದರು.
ನೇತೃತ್ವ ವಹಿಸಿದ ಅಶೋಕ ಭಟ್ ಮಾತನಾಡಿ, ಜನಿವಾರ ವ್ಯಕ್ತಿಗೆ ಸತ್ಯ, ಶಿಸ್ತು, ಸದಾಚಾರ ಮತ್ತು ಕರ್ತವ್ಯನಿಷ್ಠೆಯನ್ನು ಪಾಲಿಸುವ ಜವಾಬ್ದಾರಿಯನ್ನು ನೆನಪಿಸುತ್ತದೆ. ಯಜ್ಞೋಪವೀತವು ಕೇವಲ ಒಂದು ದಾರವಲ್ಲ; ಆಧ್ಯಾತ್ಮಿಕ ಜ್ಞಾನ, ಕರ್ತವ್ಯ ಮತ್ತು ಶಿಸ್ತಿನ ಸಂಕೇತವಾಗಿದೆ ಎಂದರು.
ಶ್ರೀಪಾದಭಟ್ ಜೋಶಿ ನೇತೃತ್ವದಲ್ಲಿ ವಿಪ್ರರು ಯಜ್ಞೋಪವೀತ ಧಾರಣೆ ಮಾಡಿದರು. ನಂತರ ವೇದಾಧ್ಯಯನ, ಗಾಯತ್ರಿಮಂತ್ರ ಜಪ ಮುಂತಾದ ಧಾರ್ಮಿಕ ಆಚರಣೆಗಳು ನಡೆದವು.
ವೆಂಕಟೇಶ ಕುಲಕರ್ಣಿ, ಚಿದಂಬರ ಕುಲಕರ್ಣಿ, ಪ್ರಮೋದ ನಾಡಗೌಡ, ಕೃಷ್ಣಾಜೀ ಕುಲಕರ್ಣಿ, ಶರತ ಕುಲಕರ್ಣಿ, ಶ್ರೀಧರ ನಾಡಗೌಡ, ಆನಂದ ಕುಲಕರ್ಣಿ, ಅಶೋಕ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ ಸಮರ್ಥ ಜೋಶಿ ಇದ್ದರು.

