ಲೇಖನ
– ವೀಣಾ ಹೇಮಂತಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಮನುಷ್ಯ ಸಮಾಜ ಜೀವಿ ಯಾವುದೇ ವ್ಯಕ್ತಿಯಾದರೂ ತನ್ನ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸುತ್ತಿರಬೇಕು. ರಾಜಕೀಯ, ಕೌಟುಂಬಿಕ, ಧಾರ್ಮಿಕ, ಸಾಮುದಾಯಿಕ ಹೀಗೆ ಹತ್ತು ಹಲವು ವಿಷಯಗಳಲ್ಲಿ ಆತನ ಗಮನ ಸೆಳೆಯುವ ವಿಷಯಗಳನ್ನು ಮಾತ್ರವಲ್ಲದೆ ಬದುಕಿಗೆ ಹತ್ತಿರವಾದ ವಿಷಯಗಳನ್ನು ಆತ ಅರಿಯುವ ಅವಶ್ಯಕತೆ ಇದ್ದೇ ಇದೆ. ಇದು ಆತ ಬದುಕನ್ನು ಇನ್ನಷ್ಟು ಹೆಚ್ಚು ಅರ್ಥಪೂರ್ಣವಾಗಿ ಬದುಕಲು ಸಹಾಯಮಾಡುತ್ತದೆ.
ಕೊರೋನಾ ಪ್ಯಾಂಡಮಿಕ್ ನಂತರ ಮಕ್ಕಳ ನಡವಳಿಕೆಯಲ್ಲಿನ ವಿಪರೀತ ಬದಲಾವಣೆಗಳನ್ನು ನಾವು ಗಮನಿಸಿ ನೋಡಿದಾಗ ಮಕ್ಕಳು ಬಹುತೇಕ ಅಂತರ್ಮುಖಿಗಳಾಗಿದ್ದು ತಾವಾಯಿತು, ತಮ್ಮ ಕೈಯಲ್ಲಿನ ಎಲೆಕ್ಟ್ರಾನಿಕ್ ಗ್ಯಾಜೆಟ್ ಆಯಿತು ಎಂಬಂತೆ ಬದುಕುತ್ತಿದ್ದಾರೆ. ಒಂದೇ ಕೋಣೆಯಲ್ಲಿ ಹಲವು ಮಕ್ಕಳು ಕುಳಿತಿದ್ದರೂ ಅವರ ಕೈಯಲ್ಲಿ ಮೊಬೈಲ್ ಇದ್ದಾಗ ಪರಸ್ಪರ ಸಂವಹನಕ್ಕೆ ದಾರಿ ಇಲ್ಲದಂತೆ ಬಾಳುತ್ತಿದ್ದಾರೆ. ಇನ್ನು ಕೆಲವು ಮನೆಗಳಲ್ಲಿ ಮಕ್ಕಳು ತಮ್ಮ ಕೋಣೆಯನ್ನು ಸೇರಿ ತಮ್ಮ ಮೊಬೈಲಿನೊಂದಿಗೆ ಭ್ರಮಾ ಲೋಕದಲ್ಲಿ ವಿಹರಿಸುತ್ತಿದ್ದಾರೆ ಇದು ಕೇವಲ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತಿಲ್ಲ, ಪಾಲಕರು ಕೂಡ ಇತ್ತೀಚೆಗೆ ಮೊಬೈಲ್ ನ ದಾಸರಾಗಿದ್ದಾರೆ.
ಈ ಹಿಂದೆ ಮನೆಯಲ್ಲಿ ಸಾಯಂಕಾಲದ ಸಮಯದಲ್ಲಿ ಹೊರಗಿನ ಗಾಳಿಯನ್ನು ಸೇವಿಸುತ್ತಾ ಒಂದಷ್ಟು ಹೊತ್ತು
ಮನೆಯ ಕಟ್ಟೆಯ ಮೇಲೆ ಕುಳಿತು ನಿಶ್ಚಿಂತೆಯ ವಿರಾಮವನ್ನು ನಮ್ಮ ಪಾಲಕರು ಅನುಭವಿಸುತ್ತಿದ್ದರು. ನಂತರ ಎದ್ದು ತಮ್ಮ ಸಾಯಂಕಾಲದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.

ಆಗಿನ ಮಕ್ಕಳಾದರೂ ಅಷ್ಟೇ, ಕೇವಲ ಶಾಲೆಯ ಪಠ್ಯ ವಿಷಯಗಳನ್ನು ಮಾತ್ರ ಕಲಿಯದೇ ಶಾಲೆಗೆ ಹೋಗುವ ಮುನ್ನ ತಮ್ಮ ನಿತ್ಯ ವಿಧಿಗಳನ್ನು ಪೂರೈಸಿ ಮನೆಯ ಕೆಲಸಗಳಲ್ಲಿ ತಮಗೆ ವಹಿಸಲಾಗಿರುವ ಕೆಲಸಗಳನ್ನು ಪೂರೈಸಿ ಶಾಲೆಗೆ ತೆರಳುತ್ತಿದ್ದರು. ಮತ್ತೆ ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳಿದ ನಂತರ ಕೈಕಾಲು ಮುಖ ತೊಳೆದು ಮನೆಯಲ್ಲಿ ತಾಯಿ ಹೇಳಿದ ಇಲ್ಲವೇ ತಮಗೆ ನಿಗದಿಯಾದ ಕೆಲಸಗಳನ್ನು ಪೂರೈಸಿ ಆಟವಾಡುತ್ತಿದ್ದರು. ನಂತರ ಮನೆಗೆ ಬಂದು ಮತ್ತೊಮ್ಮೆ ಕೈ ಕಾಲು ಮುಖ ತೊಳೆದು ಸಾಮೂಹಿಕವಾಗಿ ದೇವರ ಮುಂದೆ ಪ್ರಾರ್ಥನೆ ಹೇಳಿ ಓದಲು, ಬರೆಯಲು ಕುಳಿತುಕೊಳ್ಳುತ್ತಿದ್ದರು. ಒಂದೆರಡು ಗಂಟೆಗಳ ಅಭ್ಯಾಸದ ನಂತರ ಊಟ ಮಾಡಿ ತಾವೇ ಹಾಸಿಗೆ ಹಾಸಿಕೊಂಡು ಮಲಗಿದರೆ ಎಚ್ಚರವಾಗುತ್ತಿದ್ದು ಮರುದಿನ ಮುಂಜಾನೆಗೆ.
ಇನ್ನು ಕೆಲವೊಮ್ಮೆ ರಜಾ ದಿನಗಳಲ್ಲಿ ಹೊಲಗಳಲ್ಲಿ ರೈತಾಪಿ ಕೆಲಸ ಕಾರ್ಯಗಳಾದ ಕಳೆ ತೆಗೆಯುವ ಶೇಂಗಾದ ಬುಡ್ಡಿ ಬಿಡಿಸುವ ರಾಶಿ ಮಾಡುವ ಹರಗುವ ಬಿತ್ತುವ, ದನಗಳಿಗೆ ನೀರು ಕೊಡಿಸುವ ಅವುಗಳ ಮೈ ತೊಳೆಯುವ ಅವುಗಳಿಗಾಗಿ ಹಸಿ ಹುಲ್ಲನ್ನು ಕಿತ್ತು ತರುವ, ಮೇವನ್ನು ಹಾಕುವ ಅವುಗಳನ್ನು ತಂದು ಕಟ್ಟುವ ಕೆಲಸಗಳಲ್ಲಿ ಭಾಗವಹಿಸುವುದು, ಮಾರುಕಟ್ಟೆಗೆ ಹೋಗಿ ತರಕಾರಿ, ದಿನಸಿಗಳನ್ನು ತರುವುದು ಹೆಣ್ಣು ಮಕ್ಕಳಾದರೆ ಮನೆಯಲ್ಲಿ ತಾಯಿಯ ಕೈಯಲ್ಲಿ ಅಡುಗೆಗೆ ಹೆಚ್ಚುವ, ಹೆರೆಯುವ,ತುರಿಯುವ, ಸೋಸುವ, ಜರಡಿ ಹಿಡಿಯುವ, ಹಿಟ್ಟು ನಾದುವ, ಹುಟ್ಟುವ ಬೀಸುವ ಕೆಲಸಗಳಲ್ಲಿ ಪಾಲಕರಿಗೆ ಸಹಾಯಕರಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದರು ಪಾತ್ರೆ ಬಟ್ಟೆ ಕಸ ಗುಡಿಸುವುದು ಹೀಗೆ ಹತ್ತು ಹಲವು ಮನೆಯ ಕೆಲಸಗಳಲ್ಲಿ ಮಕ್ಕಳು ಭಾಗಿಯಾಗುತ್ತಿದ್ದರು. ಮಕ್ಕಳಿಗೆ ವ್ಯವಹಾರದ ಚಾಕಚಕ್ಯತೆ, ಚೌಕಾಶಿ ಮಾಡುವ, ತಾನು ತರುವ ವಸ್ತುವಿನ ತಾಜಾತನ ಗುಣಮಟ್ಟದ ಅರಿವು ಮೂಡುತ್ತಿತ್ತು.
ಇಂದು ಪಾಲಕರು ತಮ್ಮ ಮಕ್ಕಳನ್ನು ಸುಮ್ಮನೆ ಕುಳಿತುಕೊಳ್ಳಲು ಹೇಳಿ ಮಕ್ಕಳ ಕೈಯಲ್ಲಿ ಮೊಬೈಲ್ ಇಡುತ್ತಾರೆ, ಹೀಗೆ ಮೊಬೈಲ್ ಹಿಡಿದು ಒಂದೆಡೆ ಕುಳಿತುಕೊಂಡು ವಿಡಿಯೋಗಳನ್ನು ನೋಡುವ ಮಗು ಮುಂದೆ ಅತಿಯಾದ ಮೊಬೈಲ್ನ ಅಭ್ಯಾಸದಿಂದ ಉಂಟಾಗುವ ಖಿನ್ನತೆ, ಗೀಳು ರೋಗಗಳಿಗೆ ಬಲಿಯಾಗುತ್ತದೆ. ಇದನ್ನು ಹೋಗಲಾಡಿಸಲು ಪಾಲಕರು ಸಾಧ್ಯವಾದಷ್ಟು ಮಕ್ಕಳನ್ನು ಹೊರಗಿನ ಪ್ರಪಂಚದ ಜನರೊಂದಿಗೆ ಬೆರೆಯಲು, ಸಂವಹನ ಮಾಡಲು ಬಿಡಬೇಕು

ಕಡ್ಡಾಯವಾಗಿ ಮೊಬೈಲ್ ಡಯಟ್ ಅಂದರೆ ಊಟದ ಸಮಯದಲ್ಲಿ ಮೊಬೈಲ್ ಊಟದ ಟೇಬಲ್ ಗೆ ತರಬಾರದು, ಪೂಜೆ ಪುನಸ್ಕಾರಗಳ, ಭಜನೆ ಚಿಂತನೆಗಳನ್ನು ಮಾಡುವ ಸಮಯದಲ್ಲಿ ಮೊಬೈಲ್ ಬಳಸಲೇಬಾರದು ಎಂದು ಮನೆಯಲ್ಲಿ ರೂಢಿಸಬೇಕು. ಮಕ್ಕಳಿಗೆ ಬೆಳೆಯಲು ಅವಕಾಶ ಸಿಗುವ ಕಡೆ ಕಡ್ಡಾಯವಾಗಿ ಅವರನ್ನು ತೊಡಗಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಮನೆಗೆ ಬರುವ ಕರೆಂಟ್ ಬಿಲ್ ಪೇಪರ್ ಬಿಲ್ ಮತ್ತಿತರ ಹಣಕಾಸಿನ ವ್ಯವಹಾರಕ್ಕೆ ಬರುವ ವ್ಯಕ್ತಿಗಳೊಂದಿಗೂ ಮಾತನಾಡಲು ತೊಡಗಿಸಬೇಕು. ಇನ್ನು ಮುಖ್ಯವಾಗಿ ತರಕಾರಿ, ಹಣ್ಣು ಹಂಪಲು ಮಾರುವವರ ಬಳಿ ಮಕ್ಕಳನ್ನು ಅವರೆೇಕೆ ಆ ವೃತ್ತಿಯನ್ನು ಆಯ್ದುಕೊಂಡರು ಎಂದು ಕೇಳಿ ಉತ್ತರ ಪಡೆಯಲು ಹೇಳಬೇಕು. ಹಾಗೆ ಅವರು ಕೊಡುವ ಉತ್ತರ ನಾನು ಶಾಲೆಯಲ್ಲಿ ವಿದ್ಯೆಯನ್ನು ಕಲಿಯಲು ಸಾಧ್ಯವಾಗಲಿಲ್ಲ ಆದಕಾರಣ ಇಂದು ಈ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದಾಗ ಆ ಮಾತುಗಳು ಮಕ್ಕಳ ಮೇಲೆ ಬೀರುವ ಪರಿಣಾಮ ಮುಂದೆಂದೂ ಮಕ್ಕಳು ಓದನ್ನು ನಿರ್ಲಕ್ಷಿಸದಂತೆ ಮಾಡುತ್ತದೆ.
ಚಿಕ್ಕ ವಯಸ್ಸಿನಲ್ಲಿ ಅಯ್ಯೋ! ಪಾಪ ಮಕ್ಕಳಿಗೆ ಏನು ತಿಳಿಯುತ್ತದೆ ಎಂದು ಅವರು ಹರಡುವ ಎಲ್ಲ ಸಾಮಾನುಗಳನ್ನು ಎತ್ತಿಡುವ ತಾಯಿ ಮುಂದಿನ ಇಪ್ಪತ್ತು ವರ್ಷಗಳ ಕಾಲ ಅದೇ ಕೆಲಸವನ್ನು ಮಕ್ಕಳ ಮೇಲೆ ಗೊಣಗುತ್ತ ಮಾಡಬೇಕಾಗುತ್ತದೆ ಬದಲಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತೆ ಮಕ್ಕಳಿಗೆ ರೂಢಿಸಬೇಕು. ಇದರ ಜೊತೆಗೆ ಮನೆಯ ಕೆಲಸಗಳಲ್ಲಿ ಕೂಡ ಮಕ್ಕಳ ಪಾತ್ರದ ಅವಶ್ಯಕತೆ ಇದ್ದು ಮನೆಗೆ ಬರುವ ಹೋಗುವವರ ಜೊತೆ ಮಾತನಾಡುವ, ವಿಚಾರಿಸುವ, ನೀರು ತಂದುಕೊಡುವ ಹಿರಿಯರು ಹೇಳಿದ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕು. ಇದು ಮಕ್ಕಳಲ್ಲಿನ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುತ್ತದೆ.
ನೀವು ಸಾಕಷ್ಟು ಆಸ್ತಿಯನ್ನು ಮಾಡಿಟ್ಟು ಭವ್ಯವಾದ ಮನೆ, ಬ್ಯಾಂಕಿನಲ್ಲಿ ಸಾಕಷ್ಟು ಹಣವನ್ನು ಇಟ್ಟರೂ ಕೂಡ ಅದೆಲ್ಲವನ್ನು ನೋಡಿಕೊಳ್ಳಲು ಮಕ್ಕಳಲ್ಲಿ ವ್ಯವಹಾರಿಕ ಜಾಣ್ಮೆ ಬೇಕಲ್ಲವೇ? ಅಂತಹ ವ್ಯಾವಹಾರಿಕ ಜಾಣ್ಮೆ ಮಕ್ಕಳಲ್ಲಿ ಬೆಳೆಯಬೇಕಾದರೆ ಮಕ್ಕಳು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯಬೇಕು, ಬೆರತು ಬಾಳಿನ ಪಾಠಗಳನ್ನು ಅಗೋಚರವಾಗಿ ಕಲಿಯಬೇಕು. ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಬೇಕು.


