ವಿಕಲಚೇತನರು, ವೃದ್ಧರು, ವಿಧವೆಯರ ಮಾಸಾಶನ ನಿಲುಗಡೆಗೆ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿಕಲಚೇತನರು, ವೃದ್ಧರು, ವಿಧವೆಯರು ಸೇರಿದಂತೆ ವಿವಿಧ ವರ್ಗದ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಮಾಶಾಸನವನ್ನು ತಡೆಹಿಡಿದಿರುವದನ್ನು ತೀವ್ರ ವಿರೋಧಿಸಿ ಮತ್ತು ವಿಜಯಪುರ ಜಿಲ್ಲೆಯನ್ನು ೩೭೧ಜೆ ಅಡಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ, ನಗರ ಪುನರ್ವಸತಿ ಕಾರ್ಯಕರ್ತರ ರಾಜ್ಯ ಒಕ್ಕೂಟದ ತಾಲೂಕು ಪದಾಧಿಕಾರಿಗಳು ಮತ್ತು ತಾಲೂಕು ವಿಕಲ ಚೇತನರ ಒಕ್ಕೂಟದ ಪದಾಧಿಕಾರಿಗಳು, ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಶುರುವಾದ ಪ್ರತಿಭಟನಾ ರ್ಯಾಲಿ ತಹಸೀಲ್ದಾರ ಕಚೇರಿವರೆಗೂ ಸಾಗಿತು.
ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ, ತಾಲೂಕಾ ಕಾರ್ಯದರ್ಶಿ ರುದ್ರಗೌಡ ಗೌಡರ, ಸದಸ್ಯರಾದ ಶಿವಪುತ್ರ ಮೋಟಗಿ, ನಾಗೇಶ ಅಮರಾವತಿ, ನ್ಯಾಯವಾದಿ ಚಂದ್ರಶೇಖರ ಹೊಸಮನಿ ಮಾತನಾಡಿ, ಮಾಶಾಸನ ನೀಡಲು ವಾರ್ಷಿಕ ಆದಾಯ ಮಿತಿಯನ್ನು ₹೩೨ ಸಾವಿರಕ್ಕೆ ನಿಗದಿಪಡಿಸಿರುವುದರಿಂದ ಫಲಾನುಭವಿಗಳಿಗೆ ಅನಾನುಕೂಲವಾಗುತ್ತಿದೆ. ಈ ಆದಾಯದ ಮಿತಿಯನ್ನು ಪರಿಷ್ಕರಿಸಬೇಕು. ಬಿಪಿಎಲ್ ಪಡಿತರ ಚೀಟಿಗೆ ಅನ್ವಯಿಸುವ ₹೧.೨೦ ಲಕ್ಷ ವಾರ್ಷಿಕ ಆದಾಯ ಮಿತಿಯನ್ನು ಸಾಮಾಜಿಕ ಭದ್ರತಾ ಯೋಜನೆಗಳಿಗೂ ಪರಿಗಣಿಸಬೇಕು. ಇಲ್ಲವಾದಲ್ಲಿ ಮಾಶಾಸನದಿಂದಲೇ ಜೀವನ ನಿರ್ವಹಣೆಗೆ ಅವಲಂಬಿತರಾದವರಿಗೆ ತಮ್ಮ ಜೀವನ ನಿರ್ವಹಿಸಲು ಪರದಾಡುವ ಪರಿಸ್ಥಿತಿ ಬಂದೊದಗುತ್ತದೆ ಎಂದರು.
ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಯಾಗಿರುವ ವಿಜಯಪುರ ಜಿಲ್ಲೆಯ ನಿವಾಸಿಗಳಾದ ನಾವು ೩೭೧ಜೆ ಮೀಸಲಾತಿಯಿಂದ ವಂಚಿತರಾಗಿದ್ದೇವೆ. ಕೂಡಲೇ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕಕ್ಕೆ ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಉಗ್ರವಾಗಿಸುವದಾಗಿ ಎಚ್ಚರಿಸಿದರು.
ಮನವಿ ಪತ್ರಕ್ಕೆ ಉಮೆಶ ಜತ್ತಿ, ಅಡಿವೆಪ್ಪ ಕೊಡಗಾನೂರ, ಯಲ್ಲಪ್ಪ ಮಾದರ, ಸಂಗೀತಾ ಕೊಳೂರ, ಸಂಗನಗೌಡ ಬಗಲಿ, ಬಾಲಪ್ಪ ಬಿಸಲದಿನ್ನಿ, ಎಸ್.ಸಿ.ಮೇಟಿ ಸೇರಿದಂತೆ ಮತ್ತೀತರರು ಸಹಿ ಹಾಕಿದ್ದಾರೆ.

