ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಾನವ ಜನಾಂಗದ ಇತಿಹಾಸ ಪ್ರಾರಂಭವಾಗುವುದೇ ಬುಡಕಟ್ಟು ಜನರಿಂದ. ಮಾನವನ ನಾಗರಿಕ ಬದುಕಿಗೆ ಬುಡಕಟ್ಟು ಸಂಸ್ಕೃತಿಯೇ ಮೂಲವಾಗಿದೆ ಎಂದು ಬಸವ ತತ್ವ ಚಿಂತಕ ಶರಣ ಜಗದೀಶ ಕಲಬುರ್ಗಿ ಹೇಳಿದರು.
ದೇವರಹಿಪ್ಪರಗಿ ಪಟ್ಟಣದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಜಾನಪದ ಪರಿಷತ್ ವಿಜಯಪೂರ ಜಿಲ್ಲಾ ಘಟಕ ಹಾಗೂ ದೇವರಹಿಪ್ಪರಗಿ ತಾಲೂಕು ಘಟಕ ಮತ್ತು ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಬುಡಕಟ್ಟು ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬುಡಕಟ್ಟು ಜನರು ಕಾಲ ಬದಲಾದರೂ ನಾಗರಿಕತೆ ಯತ್ತ ಮುಖ ಮಾಡದೆ ಬದುಕುತ್ತಿರುವುದು ಕಳವಳದ ಸಂಗತಿಯಾಗಿದೆ. ಇನ್ನಾದರೂ ವೈಚಾರಿಕತೆಯ ಬದುಕಿನತ್ತ ಮುಖ ಮಾಡಲಿ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಪ್ರತಿಯೊಂದು ದೇಶದ ಜಾನಪದ ಸಂಸ್ಕೃತಿಯು ಬುಡಕಟ್ಟು ನೆಲೆಯಿಂದ ಅನಾವರಣಗೊಂಡಿದೆ. ಬುಡಕಟ್ಟು ತಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದ್ದಾರೆ. ಹೀಗಾಗಿ ಬುಡಕಟ್ಟು ಕಲಾವಿದರು ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆಯ ವಾರಸುದಾರರಾಗಿದ್ದಾರೆ. ಎಂದು ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಪರಿಷತ್ ದೇವರಹಿಪ್ಪರಗಿ ತಾಲೂಕಾಧ್ಯಕ್ಷ ನಾನಾಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ಕಾರ್ಯ ಚಟುವಟಿಕೆ ವಿವರಿಸಿದರು.
ಕಾರ್ಯಕ್ರಮದಲ್ಲಿ ದುರಗಿ ಮುರುಗಿ ಕಲಾವಿದ ನಾಗಪ್ಪ ಪೋತುರಾಜ ಕಲಾವಿದ ಕಾಟೆಪ್ಪ ಮತ್ತು ಗೊಂದಲಿಗರ ಕಲಾವಿದ ಅಣ್ಣಾರಾಯ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ಡಿ ಹೆಚ್ ರಾಠೋಡ, ಶಿಕ್ಷಕ ಶಿವಾನಂದ ಕೋಟಿನ, ಜಯಪ್ರಕಾಶಗೌಡ ಪಾಟೀಲ, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮಹಾಂತೇಶ ವಡಗೇರಿ ಮತ್ತು ಶಿವಕುಮಾರೇಶ್ವರ ಸಂಸ್ಥೆಯ ರಾಯಗೊಂಡ ಬಿರಾದಾರ ಉಪಸ್ಥಿತರಿದ್ದರು.
ಮುಖ್ಯ ಗುರುಮಾತೆ ಗಾಯತ್ರಿ ಉಕ್ಕಲಿ ಸ್ವಾಗತಿಸಿದರು. ಶಿಕ್ಷಕಿ ಅಶ್ವಿನಿ ಹೆಬ್ಬಾಳ ನಿರೂಪಿಸಿದರು. ಲೋಕೇಶ ವಂದಗನೂರು ವಂದಿಸಿದರು.

