ಅರ್ಜುಣಗಿಯಲ್ಲಿ ಸರಕಾರಿ ಪ.ಪೂ ಕಾಲೇಜ್ & ಸರಕಾರಿ ಪಬ್ಲಿಕ್ ಸ್ಕೂಲ್ ಶಾಲಾ ಕಟ್ಟಡ ಉದ್ಘಾಟನೆ | ೨.೧೪ ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಶಾಲಾ ಕಟ್ಟಡ ನಿರ್ಮಾಣ | ಸಚಿವ ಡಾ. ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಗತ್ತಿನಲ್ಲಿ ಅಟೋಮೊಬೈಲ್ ಸೆಕ್ಟರ್ ನಲ್ಲಿ ಟೋಯೋಟಾ ಕಿರ್ಲೊಸ್ಕರ್ ಕಂಪನಿ ಸುಪ್ರಸಿದ್ದ. ಈ ಕಂಪನಿಯು ತನ್ನ ಸಿಎಸ್ಸಾರ್ ಅನುದಾನದಡಿ ೨.೧೪ ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಹಾಗೂ ಭವ್ಯ ಶಾಲಾ ಕಟ್ಟಡವನ್ನು ನಿರ್ಮಿಸಿದೆ. ಈ ಭಾಗದ ವಿದ್ಯಾರ್ಥಿಗಳು ಇಲ್ಲಿ ಚೆನ್ನಾಗಿ ಓದುವ ಮೂಲಕ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ ಅವರು ಹೇಳಿದರು.
ಟೋಯೋಟಾ ಕಿರ್ಲೋಸ್ಕರ್ ಕಂಪನಿ ಅವರ ಸಿ ಎಸ್ ಆರ್ ಅನುದಾನದಲ್ಲಿ ಅರ್ಜುಣಗಿಯಲ್ಲಿ ನಿರ್ಮಿಸಿದ ಸರಕಾರಿ ಪದವಿ ಪೂರ್ವ ಕಾಲೇಜ್ ಹಾಗೂ ಸರಕಾರಿ ಪಬ್ಲಿಕ್ ಸ್ಕೂಲ್ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಬಹುಮುಖ್ಯವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಪ್ರತಿಭೆಗೆ ಪೂರಕವಾಗಿ ವಾತಾವರಣ ಕಲ್ಪಿಸಿಕೊಟ್ಟರೆ ಮಾತ್ರ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದರು.
ಸುಂದರ ವಾತಾವರಣದಲ್ಲಿ ತಲೆಎತ್ತಿದ ಈ ಶಾಲೆಯಲ್ಲಿ ಮಕ್ಕಳು ಕ್ರೀಡೆ, ಸಾಂಸ್ಕೃತಿಕವಾಗಿ ತೊಡಗಿಕೊಳ್ಳಲು ಪ್ರೇರೇಪಣೆ ನೀಡಲಿದೆ ಎಂದರು.
ಕಿರ್ಲೋಸ್ಕರ್ ಕಂಪನಿ ನಮ್ಮ ಬೇಡಿಕೆಗೆ ಸ್ಪಂದಿಸಿದೆ. ಜಿಲ್ಲಾದ್ಯಂತ ಮತಕ್ಷೇತ್ರವಾರು ಒಂದು ಕೋಟಿ ರೂ. ವೆಚ್ಚದಲ್ಲಿ ಸಿ ಎಸ್ ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಒದಗಿಸುತ್ತಿದೆ ಎಂದ ಅವರು, ಎಲ್ಲ ಮತಕ್ಷೇತ್ರಗಳಲ್ಲೂ ಸರ್ಕಾರಿ ಶಾಲೆ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.
ಕಿರ್ಲೊಸ್ಕರ್ ಕಂಪನಿಯ ರಮೇಶ ರಾವ್ ಮಾತನಾಡಿದರು.
ಕಿರ್ಲೊಸ್ಕರ್ ಕಂಪನಿಯ ಉಪಾಧ್ಯಕ್ಷರಾದ ರಮೇಶರಾವ್ ಆರ್.ಎ., ಜನರಲ್ ಮ್ಯಾನೆಜರ್ ಕಿರಣ್ ಜೆ. ಎಚ್. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಿಇಒ ಬಸವರಾಜ ತಳವಾರ, ಬೋಧಕರು, ವಿದ್ಯಾರ್ಥಿಗಳು ಗ್ರಾಮಸ್ಥರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

"ನೀರಾವರಿ ಸಚಿವರಾಗಿ ಎಂ.ಬಿ. ಪಾಟೀಲರು, ಜಿಲ್ಲೆಯ ರೈತರಿಗೆ ನೀರನ್ನು ತಂದು ಕೊಟ್ಟು, ಜಿಲ್ಲೆಯ ಬರ ನೀಗಿಸಿದ್ದಾರೆ. ಕೈಗಾರಿಕೆಗಳನ್ನು ಈ ಭಾಗಕ್ಕೆ ತರುತ್ತಿದ್ದಾರೆ. ಒಂದು ಸಾವಿರ ಮೇನ್ ಕ್ಯಾನೆಲ್ ಮೂಲಕ ನೀರು ಹರಿಸಿದ್ದಾರೆ. ಕೆರೆ ತುಂಬುವ ಯೋಜನೆಗಳಿಂದಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಇದೆಲ್ಲವೂ ಎಂ.ಬಿ. ಪಾಟೀಲರ ಕೈಗೊಂಡ ನೀರಾವರಿ ಯೋಜನೆಗಳಿಂದ ಸಾಧ್ಯವಾಗಿದೆ."– ವಿಠ್ಠಲ ಕಟಕಧೋಂಡ
ನಾಗಠಾಣ ಶಾಸಕರು

“ಆಧುನಿಕ ಸೌಲಭ್ಯಯುಳ್ಳ ಶಾಲೆ ತಮಗೆ ದೊರೆಯುತ್ತಿದ್ದು, ಜೀವನದಲ್ಲಿ ಶಿಕ್ಷಣ ಮಹತ್ವದ್ದು. ಜ್ಞಾನ, ಬುದ್ಧಿ, ವಿವೇಕವನ್ನು ನಿಮಗೆ ಈ ಶಾಲೆ ನೀಡಲಿದ್ದು, ಇಲ್ಲಿ ಸಿಗುವ ಶಿಕ್ಷಣವನ್ನು ತಾವು ಪಡೆದು ಜೀವನದಲ್ಲಿ ಯಶಸ್ವಿಯಾಗಬೇಕು.”
– ರಿಷಿ ಆನಂದ
ಜಿಲ್ಲಾ ಪಂಚಾಯತಿ ಸಿಇಒ, ವಿಜಯಪುರ

ರೂ.೨೭೦ ಕೋಟಿ ವೆಚ್ಚದ ನೀರು ಹಿಂಗಿಸುವ ಕಾರ್ಯ
ಕೆರೆ ತುಂಬುವ ಜೊತೆಗೆ ೧೭೯ ಹಳ್ಳ ಬಾಂದಾರಗಳನ್ನು ೨೭ ಪ್ಯಾಕೇಜ್ ಗಳೊಂದಿಗೆ ೨೭೦ ಕೋಟಿ ರೂ.ನೀರು ಹಿಂಗಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಜಿಲ್ಲೆಯ ೧೭೯ ಹಳ್ಳಗಳು ೧೪೦೦ ಕಿಮೀ ವ್ಯಾಪ್ತಿ ಹೊಂದಿದ್ದು, ಇಲ್ಲಿ ಬಾಂದಾರ ಮೂಲಕ ನೀರು ಹಿಂಗಿಸುವುದರಿಂದ ಎಲ್ಲ ಬಾವಿ ಬೋರವೆಲ್ ನೀರು ಬಂದು ರೈತರ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಹೆಬ್ಬಾಳಟ್ಟಿಯಲ್ಲಿ ಸುಸಜ್ಜಿತ ಸರ್ಕಾರಿ ಶಾಲೆ ಲೋಕಾರ್ಪಣೆ
ವಿಜಯಪುರ: ಕೈಗಾರಿಕೋದ್ಯಮಗಳ ಲಾಭಾಂಶದ ಶೇ. ೨ರಷ್ಟು ಸಿಎಸ್ಆರ್ ಅನುದಾನವನ್ನು ನಮ್ಮ ಭಾಗದ ಸರಕಾರಿ ಶಾಲೆಗಳ ಸಮಗ್ರ ಸುಧಾರಣೆಗೆ ಬಳಸಿಕೊಳ್ಳಲಾಗುತ್ತಿದ್ದು, ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿಕೊಡುತ್ತಿರುವ ಟೊಯೋಟಾ ಕಂಪನಿಯ ಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದು ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಹೆಜ್ಜೆಯಾಗಿ ಬಬಲೇಶ್ವರ ಮತಕ್ಷೇತ್ರದ ಹೆಬ್ಬಾಳಟ್ಟಿ ಗ್ರಾಮದಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಸಿಎಸ್ಆರ್ ಅನುದಾನದಡಿ ನಿರ್ಮಿಸಲಾದ ಸರಕಾರಿ ಪ್ರೌಢ ಶಾಲೆಯ ೪ ನೂತನ ಕೊಠಡಿಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಸಿಗಬೇಕು. ಮಾತ್ರವಲ್ಲ, ಅವರು ಜಾಗತಿಕ ಸ್ಪರ್ಧಾತ್ಮಕ ಪ್ರಪಂಚಕ್ಕೆ ತೆರೆದುಕೊಳ್ಳಬೇಕು ಎಂಬುದು ನಮ್ಮ ಆಶಯ. ಇದಕ್ಕಾಗಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೂ ‘ಎಐ ತಂತ್ರಜ್ಞಾನ’ದ ಅಭ್ಯಾಸ ದೊರೆಯುವಂತೆ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

