ವಿಜಯಪುರದಲ್ಲಿ ವೈಜ್ಞಾನಿಕ ಬೆಳೆ ಹಾನಿ ವರದಿ ಸಲ್ಲಿಕೆಗೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ -೧೪ ಎಂಎಂ ಮಳೆ ಕೊರತೆಯಿಂದಾಗಿ ಬಿತ್ತನೆಯಾದ ಬೆಳೆಗಳಿಗೆ ತೇವಾಂಶ ಕೊರತೆಯಾಗಿದ್ದು ರೈತರ ಜಮೀನಿನಲ್ಲಿ ಹಾನಿಗೀಡಾದ ಬೆಳೆಗಳ ಭಾವಚಿತ್ರದೊಂದಿಗೆ ವೈಜ್ಞಾನಿಕವಾದ ನಿಖರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಆಧಾರಿತ ಕೃಷಿ ಬಹಳ ಕಷ್ಟ ಎಂಬುದನ್ನು ಬರ ಪರಿಸ್ಥಿತಿ ಅವಲೋಕನ ವೇಳೆ ಕಂಡುಕೊಂಡಿದ್ದೇನೆ. ಬಹುತೇಕ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಬರುವುದು ನಮ್ಮ ಕರ್ತವ್ಯವಾಗಿದೆ. ಈ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೊಗರಿ, ಸೂರ್ಯಕಾಂತಿ, ಕಬ್ಬು ಬೆಳೆ ಹಾನಿ ಸೇರಿದಂತೆ ಪ್ರತಿಯೊಂದೂ ಬೆಳೆಯನ್ನು ಅವಲೋಕಿಸಿರುವೆ. ಮುಖ್ಯಮಂತ್ರಿ ಅವರಿಗೆ ಈ ಕುರಿತು ಮನದಟ್ಟು ಮಾಡಿಕೊಡುವ ಮೂಲಕ ರೈತರಿಗೆ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಗಮನಸೆಳೆಯಲಾಗುವುದು ಎಂದರು.
ವಾಸ್ತವ ಪರಿಸ್ಥಿತಿಯ ವರದಿ ಸಲ್ಲಿಸಲಾಗುವುದು. ಅದರಲ್ಲಿ ತಪ್ಪಾಗದಂತೆ ವಾಸ್ತವಾಂಶಗಳಿಂದ ಕೂಡಿದ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದರು.
ಜಿಲ್ಲೆಯಲ್ಲಿ ೭.೭೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಆದರೆ ಇಲ್ಲಿಯವರೆಗೆ ೬.೭೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ. ೮೭.೭ ರಷ್ಟು ಪ್ರದೇಶದಲ್ಲಿ ಮಾತ್ರ ವಿವಿಧ ಬೆಳೆಗಳ ಬಿತ್ತನೆಯಾಗಿದೆ ಎಂದರು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಟಾಸ್ಕ್ ಫೋರ್ಸ್ ಸಮಿತಿಗೆ ಈಗಾಗಲೇ ೪ ಕೋಟಿ ರೂ. ಮತ್ತು ಪ್ರತಿ ಮತಕ್ಷೇತ್ರಕ್ಕೆ ೧ ಕೋಟಿಯಂತೆ ಜಿಲ್ಲೆಗೆ ಒಟ್ಟು ೧೨ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಅಂದಾಜು ೨೬೮೬೧೬ ದೊಡ್ಡ ಜಾನುವಾರುಗಳು ಮತ್ತು ೮೦೫೯೬೩ ಸಣ್ಣ ಜಾನುವಾರುಗಳಿವೆ. ಜಿಲ್ಲೆಯಲ್ಲಿ ಅಂದಾಜು ೩೮೩೦೮೯ ಮೆಟ್ರಿಕ್ ಟನ್ ಒಣ ಮೇವು ರೈತರ ಬಳಿ ದಾಸ್ತಾನಿದೆ. ಈ ಮೇವು ಮುಂದಿನ ೨೮ ವಾರಗಳಿಗೆ ಸಾಕಾಗುತ್ತದೆ ಎಂದು ಸಚಿವರು ತಿಳಿಸಿದರು.
ಪರಿಹಾರ ಜಮೆಯಲ್ಲಿ ದಾಖಲೆ: ೨೦೨೫-೨೬ನೇ ಸಾಲಿನಲ್ಲಿ ಪ್ರವಾಹ, ಅತಿವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ೩೦೦೩೮೪ ರೈತರಿಗೆ ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ ೩೨೮.೭೨ ಕೋಟಿ ರೂ. ಹಾಗೂ ರಾಜ್ಯ ಸರಕಾರ ಘೋಷಿಸಿದಂತೆ ಹೆಚ್ಚುವರಿಯಾಗಿ ೨೪೩.೦೨ ಕೋಟಿ ಸೇರಿ ಒಟ್ಟು ೫೭೧.೪೪ ಕೋಟಿ ರೂ. ಪರಿಹಾರವನ್ನು ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ವಿತರಿಸಲಾಗಿದೆ ಎಂದ ಅವರು, ಇಷ್ಟೊಂದು ಹೆಚ್ಚಿನ ಮೊತ್ತದ ಪರಿಹಾರ ನೀಡಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ವಿಜಯಪುರ ಜಿಲ್ಲೆ ಪಾತ್ರವಾಗಿದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮ ಬರಗಿಮಠ, ಕೃಷಿ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
೧೪ ಎಂಎಂ ಮಳೆ ಕೊರತೆ
೨೦೨೬ನೇ ಸಾಲಿನಲ್ಲಿ ಜೂನ್ ತಿಂಗಳಲ್ಲಿ ೯೦.೪ ಎಂಎಂ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಕೇವಲ ೭೨.೬ ಎಂಎಂ ಮಾತ್ರ ಮಳೆಯಾಗಿದೆ. ಅಂದರೆ -೨೦ ಎಂಎಂ ಮಳೆಯಾಗಿದೆ. ಜುಲೈನಲ್ಲಿ ವಾಡಿಕೆಯಂತೆ ೭೨.೫ರಷ್ಟು ಮಳೆಯಾಗಬೇಕಿತ್ತು. ಅಷ್ಟು ಮಳೆಯಾಗಿದೆ. ಆಗಸ್ಟ್ ೭ರವರೆಗೆ ವಾಡಿಕೆಯಂತೆ ೧೯.೪ ಎಂಎಂ ಮಳೆಯಾಗಬೇಕಿತ್ತು. ಆದರೆ ಕೇವಲ ೧೨.೫ ಎಂಎಂ ಮಳೆಯಾಗಿದ್ದರಿಂದ -೩೬ ಎಂಎಂ ಮಳೆ ಅಭಾವವಾಗಿದೆ. ಜೂ. ೧ ರಿಂದ ಆ. ೮ರವರೆಗೆ ವಾಡಿಕೆಯಂತೆ ೧೮೨.೩ ಎಂಎಂ ಮಳೆಯಾಗಬೇಕಿತ್ತು. ಆದರೆ ೧೫೭.೬ ಎಂಎಂ ಮಳೆಯಾಗಿದೆ. ಇದರಿಂದಾಗಿ -೧೪ ಎಂಎಂ ಮಳೆ ಕೊರತೆಯಾಗಿದೆ ಎಂದು ಸಚಿವರು ವಿವರಿಸಿದರು.
ಬೆಳೆಗಳಿಗೆ ತೇವಾಂಶ ಕೊರತೆ
ತೊಗರಿ, ಹತ್ತಿ, ಮೆಕ್ಕೆಜೋಳ, ಕಬ್ಬು ಹಾಗೂ ಸೂರ್ಯಕಾಂತಿ ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾಗಿ ಬಿತ್ತನೆಯಾಗಿವೆ. ವಿಜಯಪುರ ತಾಲೂಕಿನ ಹಿಟ್ನಳ್ಳಿ, ಮದಭಾವಿ ಹಾಗೂ ಶಿವಣಗಿ ಗ್ರಾಮಗಳಲ್ಲಿ, ದೇವರಹಿಪ್ಪರಗಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ, ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ ತೇವಾಂಶ ಕೊರತೆ ಎದುರಿಸುತ್ತಿರುವೆ ಎಂದು ಸಚಿವರು ತಿಳಿಸಿದರು.
ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಸೂರ್ಯಕಾಂತಿ ಹಾಗೂ ಕಬ್ಬು ಬೆಳೆಗಳನ್ನು ಮತಕ್ಷೇತ್ರದ ಶಾಸಕರು, ಇಲಾಖೆ ಅಧಿಕಾರಿಗಳು ಹಾಗೂ ರೈತರ ಜೊತೆ ಖುದ್ದಾಗಿ ವೀಕ್ಷಣೆ ಮಾಡಿ ರೈತರಿಂದ ಹಾಗೂ ಇಲಾಖಾ ಅಧಿಕಾರಿಗಳಿಂದ ಬೆಳೆ ಪರಿಸ್ಥಿತಿ ಮಾಹಿತಿ ಪಡೆದಿರುವುದಾಗಿ ತಿಳಿಸಿದರು.
ಬರದ ಛಾಯೆ ಆವರಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರ ಪರಿಶೀಲನಾ ಸಭೆ ನಡೆಸಿದ್ದೇನೆ. ಕಾಲ-ಕಾಲಕ್ಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದರು.
೨೩೫.೬೩ ಕೋಟಿ ರೂ. ಬೆಳೆ ವಿಮೆ ಜಮೆ
೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ೮೩.೩೪೯ ರೈತರು ತೊಗರಿ ಬೆಳೆಗೆ ಹಾಗೂ ೬೫೭೮ ರೈತರು ಹತ್ತಿ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದರು. ಈ ವಿಮೆ ಮಾಡಿಸಿದ ಎಲ್ಲ ರೈತರಿಗೆ ಮಧ್ಯಂತರ ಪರಿಹಾರವಾಗಿ ೧೦೩.೨೩ ಕೋಟಿ ರೂ. ಜಮೆಯಾಗಿದೆ ಎಂದರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ೬೬.೨೭೬ ರೈತರಿಗೆ ಬೆಳೆ ಅಂದಾಜು ಸಮೀಕ್ಷೆ ಆಧಾರದ ಮೇಲೆ ೧೩೨.೪೦ ಕೋಟಿ ರೂ. ಬೆಳೆ ವಿಮೆ ಜಮೆಯಾಗಿದೆ. ಒಟ್ಟು ವಿಜಯಪುರ ಜಿಲ್ಲೆಗೆ ೨೩೫.೬೩ ಕೋಟಿ ರೂ. ಬೆಳೆ ವಿಮೆ ಜಮೆಯಾಗಿದೆ ಎಂದು ಸಚಿವರು ತಿಳಿಸಿದರು.

