ಯಡ್ರಾಮಿ ವಿರಕ್ತಮಠದಲ್ಲಿ ಲಿಂ.ಸಿದ್ಧರಾಮ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ | ಗ್ರಂಥ ಲೋಕಾರ್ಪಣೆ | ಭಕ್ತಿಯಲ್ಲಿ ಮಿಂದ ಭಕ್ತಗಣ
ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತ ಮಠದ ಲಿಂ.ಪೂಜ್ಯ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ 5ನೇ ಪುಣ್ಯಾರಾಧನೆ ಯ ೧೦ನೇ ದಿನ ಶುಕ್ರವಾರ ಶ್ರೀ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಶರಣ ಗೊಲ್ಲಾಳೇಶ್ವರ ಮಹಾಪುರಾಣ ಮಂಗಲ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸತ್ಕಾರ ಸಮಾರಂಭ ನೆರವೇರಿತು.
ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತರಾದ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅವರಿಗೆ ಹಾಗೂ ವಿಜಯಪುರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ದಂಪತಿಗೆ ಸತ್ಕಾರ, ಶ್ರೀರಕ್ಷೆ ಕಾರ್ಯಕ್ರಮವು ನಡೆಯಿತು.
ಇದೇ ಸಂದರ್ಭದಲ್ಲಿ ಶಿಕ್ಷಕ, ಸಾಹಿತಿ ಬಸಯ್ಯಸ್ವಾಮಿ ಕಕ್ಕೇರಾ ರಚಿತ ’ನಿರಂಜನ ಪ್ರಭೆ’ ಗ್ರಂಥವನ್ನು ಸೊನ್ನ ವಿರಕ್ತಮಠದ ಡಾ.ಶಿವಾನಂದ
ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

ಶ್ರೀ ಮುರಘೇಂದ್ರ ಭಜನಾ ಮಂಡಳಿಯ ಕಲಾವಿದರಿಗೆ ಹಾಗೂ ಲಿಂ. ಸಿದ್ಧರಾಮ ಮಹಾಸ್ವಾಮಿಗಳ ಪಂಚಲೋಹದ ಮೂರ್ತಿ ದಾನಿಗಳಾದ ಶರಣೆ ರಾಚಮ್ಮ ಮುಗುಳಿ ಅವರಿಗೂ ಸತ್ಕಾರ ಕಾರ್ಯ ನೆರವೇರಿಸಲಾಯಿತು.
ರವಿವಾರ ಬೆಳಗ್ಗೆ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಕಾರ್ಯಕ್ರಮ, ಬಿಲ್ವಾರ್ಚನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ನಂತರ ಮಹಾಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ಸುರಪುರ ಕಡ್ಲೆಪ್ಪನವರ ಮಠದ ಶ್ರೀಗಳು, ಸೊನ್ನದ ಶ್ರೀಗಳು ಸುತ್ತ ಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಇದ್ದರು.

” ಶ್ರೀ ಮಠದ ಸಿದ್ದಲಿಂಗ ಶ್ರೀಗಳು ಆಗಾಗ ರಚನಾತ್ಮಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಭಾಗದಲ್ಲಿ ಭಕ್ತಿಯ ಸುಧೆ ಹರಿಸುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ದಾಸೋಹದಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಅವರ ಪಾತ್ರ ಅನನ್ಯ. ಇದು ಸಾಲದೆಂಬಂತೆ ಈಗ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವ ಅವರು ಈ ಭಾಗದ ಬಡ ಮಕ್ಕಳಿಗೆ ಶಿಕ್ಷಣ ದಾಸೋಹಗೈಯಲು ಮುಂದಾಗಿರುವುದು ಶ್ಲಾಘನೀಯ. “
– ಇಂದುಶೇಖರ ಮಣೂರ
ಸಂಪಾದಕರು, ’ಉದಯರಶ್ಮಿ’ ದಿನಪತ್ರಿಕೆ

