ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಚನಗಳಿಗಾಗಿ ಇದ್ದ ಶ್ರೀಮಂತಿಕೆಯನ್ನು ತ್ಯಜಿಸಿದವರು, ವಕೀಲಿ ವೃತ್ತಿಯನ್ನು ಬಿಟ್ಟವರು, ಮನೆಯನ್ನೇ ಮಾರಿ ಮುದ್ರಣಾಲಯ ತೆರೆದವರು, ಹರಕು ಅಂಗಿ ತೊಟ್ಟು ಹೊಸ ಪುಸ್ತಕ ನೀಡಿದವರು, ಕರುನಾಡಿನಲ್ಲಿ ವಚನಗಳ ಗುಡಿ ಕಟ್ಟಿ ಎಲ್ಲರ ಮನೆಮನಗಳಿಗೆ ವಚನಗಳ ಮುಟ್ಟಿಸಿದವರು ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಪ್ರಾತ: ಸ್ಮರಣೀಯರು ಎಂದು ಮುಖ್ಯೋಪಾಧ್ಯಾಯ ಆಶು ಕವಿ ನಾರಾಯಣ ಶಾಸ್ತ್ರಿ ಹೇಳಿದರು.
ಅವರು ಪಿ.ಎಂ.ಶ್ರೀ.ಕರ್ನಾಟಕ ಪಬ್ಲಿಕ್ ಶಾಲೆ ಕುಂಬಾರಹಳ್ಳದಲ್ಲಿ ನಡೆದ ಹಳಕಟ್ಟಿಯವರ ಜನ್ಮ ದಿನೋತ್ಸವದಲ್ಲಿ ಮಾತನಾಡುತ್ತಾ, ಮೊಟ್ಟ ಮೊದಲ ಬಾರಿಗೆ ವಚನಗಳನ್ನು ಮುದ್ರಿಸಿದ್ದು, ಇಂಗ್ಲಿಷ್ ಬಾಷೆಗೆ ಭಾಷಾಂತರಿಸಿದ್ದು, ವಚನ ಗಾಯನ ಮಾಡಿಸಿದ್ದು ತ್ಯಾಗಜೀವಿ ಹಳಕಟ್ಟಿಯವರು. ವಚನಗಳ ಉಳುವಿಗಾಗಿ ಉಳವಿಯತ್ತ ಸಾಗಿದ ಎಲ್ಲಾ ಶರಣಶರಣೆಯರ ವಚನಗಳನ್ನು ರಕ್ಷಿಸಿ ಜಗತ್ತಿಗೆ ವಚನಗಳ ಬೆಳಕನ್ನು ಹರಡಿದವರು. ನಾವೆಲ್ಲರೂ ಪ್ರತಿದಿನವೂ ವಚನಗಳನ್ನು ಓದುತ್ತಾ, ಆ ತತ್ತ್ವಗಳನ್ನು ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸಬೇಕಾದ ಶ್ರದ್ಧಾಂಜಲಿ ಎಂದು ಹೇಳಿದರು.
ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ ಹಳಕಟ್ಟಿಯವರು ವಚನಗಳ ಬಟ್ಟೆಯನ್ನು ನೇಯ್ದರು. ಇಡೀ ಜೀವನವನ್ನು ವಚನಕ್ಕೆ ಅರ್ಪಿಸಿದರು. ಬಂದ ಅಧಿಕಾರವನ್ನು ಜನಸೇವೆಗಾಗಿ ಬಳಸಿದರು. ವಿಜಯಪುರದಲ್ಲಿ ಬಿ ಎಲ್ ಡಿ ಇ ಸಂಸ್ಥೆ, ಸಿದ್ಧೇಶ್ವರ ಬ್ಯಾಂಕನ್ನು ಸ್ಥಾಪಿಸಿ ಇತಿಹಾಸ ನಿರ್ಮಿಸಿದರು. ಅವರ ಜೀವನ ನಮಗೆ ಆದರ್ಶವಾಗಬೇಕು, ವಚನದಲ್ಲಿರುವ ಆದರ್ಶವನ್ನು ನಾವು ಅಳವಡಿಸಿಕೊಳ್ಳಬೇಕು. ನಡೆದಾಡುವ ದೇವರಾಗಿದ್ದ ಸಿದ್ದೇಶ್ವರರು ನಮ್ಮ ಆದರ್ಶವಾಗಬೇಕು ಎಂದು ಹೇಳಿದರು.
ಶಿಕ್ಷಕ ಅಶೋಕ ಬಿರಾದಾರ ಪಾಟೀಲ ಮಾತನಾಡಿ ಮಹಾಪುರುಷರ ಸಾಧನೆಗಳ ಅವಲೋಕನದಿಂದ ನಮ್ಮಲ್ಲಿಯೂ ಸಾಧಿಸುವ ಛಲ ಮೂಡುತ್ತದೆ. ತ್ಯಾಗ ಮನೋಭಾವನೆ ಬೆಳೆಯುತ್ತದೆ. ನಾವೆಲ್ಲರೂ ಹಳಕಟ್ಟಿಯವರು ಹಾಕಿಕೊಟ್ಟ ವಚನದ ಮಾರ್ಗದಲ್ಲಿ ಸಾಗೋಣ ,ಧರ್ಮ ಮಾರ್ಗದಲ್ಲಿ ಸಾಗೋಣ ಎಂದು ಹೇಳಿದರು.
ಶಿಕ್ಷಕಿಯರಾದ ಶಾರದಾ ಮಠ, ಮಂಜುಳಾ ಕಡಕೋಳ,ಆಸೀಫಾ ಭಾನು ಮೋಮಿನ್,ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು.
ಶಿಕ್ಷಕಿ ಸವಿತಾ ಬೆನಕಟ್ಟಿ ಸ್ವಾಗತಿಸಿ ನಿರೂಪಿಸಿದರು. ಚಿತ್ರಕಲಾ ಶಿಕ್ಷಕರ ಚಂದ್ರಕಾಂತ ಪೋಲಿಸ್ ವಂದಿಸಿದರು.
ಮಕ್ಕಳು ವಚನಕ್ಕೆ ಧ್ವನಿಯಾಗಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

