ಲೇಖನ
– ಶೀತಲ್ ಹೆಗಡೆ
’ಕಥಾ ಅರಮನೆ’
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಅಲ್ಲಲ್ಲಿ ತೇಪೆ ಹಾಕಿದ ಹರಿದ ಅಂಗಿ ಹಾಕಿದ್ದರೂ, ಕಳ್ಳಕಿಂಡಿಯ ಹಾಗೇ ಕಾಣ್ತಿರೋ ಮುರುಕಲು ಗುಡಿಸಲೊಳಗಿದ್ದರೂ, ತಲೆಗೆ ಎಣ್ಣೆ ಕಾಣದೇ ಸುಕ್ಕುಸುಕ್ಕಾದ ಕೂದಲು ಹೊಂದಿದ್ದರೂ, ಗುಡಿಸಲಿನ ಹೊರಗೆ ಎರಡು ಇಟ್ಟಂಗಿಗಳನ್ನಿಟ್ಟು ಅದರ ಮೇಲೆ ಅನ್ನ ಬೇಯಿಸಿಕೊಳ್ಳುತ್ತಿದ್ದರೂ, ಗಮ್ಮತ್ತಿಗೇನೂ ಕಡಿಮೆಯಿಲ್ಲ, ಅವರ ಮೊಗದಲ್ಲಿನ ನಗುವಿಗೆ ಬರವಿಲ್ಲ, ಆಡೋ ಕೀಟಲೆಗಳಿಗೆ ಕೊನೆಯಿಲ್ಲ ಎಂಬುದನ್ನು ನೋಡಿದಾಗ ಅನಿಸುತ್ತೆ ಹೊಟ್ಟೆತುಂಬ ಊಟಕ್ಕಿಲ್ಲದಿದ್ದರೂ ಅದೆಷ್ಟು ಖುಷಿಯಾಗಿ, ನೆಮ್ಮದಿಯಾಗಿ ಇದ್ದಾರಲ್ಲ ಎಂದು..!
ಸಂತೋಷಕ್ಕೆ ದೊಡ್ಡ ದೊಡ್ಡ ಮಹಲುಗಳು ಬೇಕಿಲ್ಲ, ಪ್ರೀತಿಸುವ ಜೀವ, ಕಾಳಜಿ ಪಡುವ ಸಂಗಾತಿ, ಮನವನ್ನರಿತು ಮುದನೀಡುವ ಬೆಸುಗೆ ಬಾಂಧವ್ಯ ಇವಿದ್ದರೆ ಸಾಕು. “ಸ್ವರ್ಗಕ್ಕೆ ಮೂರೇ ಗೇಣು”.

ಅರಮನೆ ಅಂದ ತಕ್ಷಣ ನೆನಪಾಗುವುದು, ದೊಡ್ಡ ದೊಡ್ಡ ಸುಂದರ ವಿನ್ಯಾಸದ ಗೋಡೆ, ಝಗಮಗಿಸುವ ಬೆಳಕಿನ ಮಿಂಚು, ಐಶಾರಾಮಿ ಜೀವನ. ಆದರೆ ಈ ಭವ್ಯತೆ ತಾಯಿ ತನ್ನ ಮಗುವಲ್ಲಿ ಕಾಣುವ ಮುಗ್ಧ ನಗುವಿಗೆ ಸಮಾನವಾ, ಮಗುವು ಅಮ್ಮನಲ್ಲಿ ಬಯಸುವ ಮಮತೆ, ಕಾಳಜಿ ಅವಳ ಲಾಲಿಹಾಡಿನ ಮೋಡಿಯಲ್ಲಿ ಕಳೆದು ಸುಖನಿದ್ರೆಯಲ್ಲಿ ಜಾರಿ ಸವಿ ಕನಸುಗಳಿಗೆ ಹೋಲಿಸಬಹುದಾ, ಸಹೋದರ ಸಹೋದರಿಯ ಪ್ರೀತಿ ವಿಶ್ವಾಸ, ಆಟ ತುಂಟಾಟ, ಚೇಷ್ಟೇ ಕೀಟಲೆಗಳಿಗೆ ಸಮವಾ, ಅಪ್ಪನ ಹುಸಿಮುನಿಸು, ಮಕ್ಕಳಿಗೆ ಕಲಿಸುವ ಜೀವನಪಾಠಕ್ಕೆ ಹೋಲಿಸಬಹುದಾ, ಸಂಗಾತಿಯ ಸಾಂಗತ್ಯ ವಿಶ್ವಾಸ, ಮಿತ್ರನ ಕೈಹಿಡಿತ ಹೀಗೆ ಪ್ರೀತಿಯಿಂದ, ತ್ಯಾಗದಿಂದ, ಕರುಣೆ, ಅನುಕಂಪದಿಂದ ರೂಪುಗೊಂಡು ಬೆಸೆದ ಗಟ್ಟಿಬಂಧವೇ ಅರಮನೆ. ಅದು ನಮ್ಮ ಅಂಗೈಲೇ ಕಾಣಬಹುದು.
ಇತ್ತೀಚೆಗೆ ಮನುಷ್ಯ ಮನುಷ್ಯನನ್ನು ಅಳೆಯುವ ತಿಳಿಯುವ ಮಾಪನ ಗುಣ, ನಡತೆ, ಸಂಸ್ಕಾರ, ಶಿಸ್ತು, ಕ್ರಮಬದ್ಧ ಜೀವನದಿಂದಲ್ಲ. ಬದಲಾಗಿ ಅವನ ಶ್ರೀಮಂತಿಕೆ, ಹಣ ಆಭರಣ, ಅವನೆಷ್ಟು ಆಸ್ತಿ ಮಾಡಿದ್ದಾನೆ ಎನ್ನುವ ಲೆಕ್ಕಾಚಾರದ ಕುರಿತಾಗಿದೆ. ಅವನು ನಿರ್ಮಿಸಿದ ಭವ್ಯ ಬಂಗಲೆ, ಅರಮನೆಯಲ್ಲಿ ಅದೆಷ್ಟು ನೋವು ಸಂಕಟಗಳು ರಹಸ್ಯಗಳು ಅಡಗಿವೆಯೋ.! ಸಮಾಧಿಯಾಗಿವೆಯೋ.!
ಅದೇ ರಸ್ತೆಬದಿಯಲ್ಲಿ ಫುಟ್-ಪಾತ್ ಮೇಲೆ ಮಲಗುವವನ ಮನಸ್ಸು ಅದೆಷ್ಟು ನೆಮ್ಮದಿಯಲ್ಲಿ ದುಗುಡ ಇರದೇ ಗಲಾಟೆ ಆರ್ಭಟವಿರುವ ಸಂತೆಯಲ್ಲಿ ಬೇಕಿದ್ರೂ ಸುಖ ನಿದ್ದೆ ಅವನದಾಗುವುದು.

ಅರಮನೆ ಅಂದರೆ ಬರೀ ವಿಶಾಲವಾದ ಕಟ್ಟಡ ಕಟ್ಟಿ ಬದುಕುವುದಲ್ಲ, ಬದಲಿಗೆ ನಮ್ಮ ಕೈಲಾದ ಸೇವೆ, ಮನಸ್ಸಿಗೆ ನೆಮ್ಮದಿ ತರುವಂತಹ ಕೆಲಸ ಮಾಡಿದಾಗ ಕಷ್ಟದಲ್ಲಿದ್ದವನ ಮುಖದಲ್ಲಿ ಕಾಣುವ ಮಂದಹಾಸವೇ ಮನಸ್ಸಿನ ಅರೆಮನೆ.
ಪ್ರೀತಿ ಬಾಂಧವ್ಯಗಳ ಬಾನಾಡಿಯಲ್ಲಿ ತೇಲುವ ಜೀವಗಳ ವಾಸವೇ ನಿಜವಾದ ಅರಮನೆ.
ಬಾಳಪಯಣದ ಸಿಹಿ ಕ್ಷಣಗಳೇ ನಿಜವಾದ ಸಂಪತ್ತಿನ ಅರಮನೆ. ಪ್ರೀತಿಯಿಂದ ಹಂಚಿದ ಬದುಕೇ, ನಿಜವಾದ ಸಾರ್ಥಕತೆಯ ಜೀವನವೇ ನೆಮ್ಮದಿಯ ಅರಮನೆ. ಪ್ರೀತಿ, ಕರುಣೆ, ನಗು ಹಂಚಿದ ಕ್ಷಣಗಳೇ ಬಾಳಿನ ಸಾರ್ಥಕತೆಯ ಪುಟಗಳು. ಇವೇ ಶಾಶ್ವತ ನೆಲೆಗಟ್ಟಿನ ಪ್ರೀತಿಯ ಅರಮನೆ. ಇವೆಲ್ಲ ಐಶ್ವರ್ಯದಿಂದಾಗಲಿ, ಸಂಪತ್ತಿನಿಂದಾಗಲಿ, ವೈಭೋಗದ ಜೀವನದಿಂದಾಗಲಿ ಬರುವಂತಹುದಲ್ಲ, ಬದಲಾಗಿ ನಮ್ಮ ವ್ಯಕ್ತಿತ್ವದಲ್ಲಿ, ನಮ್ಮ ಸಂಸ್ಕ್ರತಿಯಲ್ಲಿ, ನಮ್ಮ ದಿನನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಮಾಣಿಕ್ಯಗಳಂತಹ ಸಂಸ್ಕಾರದಿಂದ ಬರುವಂತಹದ್ದು. ನಮ್ಮ ಅಂಗೈಲಿ ಅರಮನೆ ಸೃಷ್ಟಿಸಿಕೊಳ್ಳಬಹುದಾದ ನಿರ್ಮಾತೃರು ನಾವೇ. ಇದಕ್ಕೆ ಕೂಲಿಕಾರರ, ಸಿಮೆಂಟಿನ, ಯಾವುದೇ ಕಾನೂನಿನ ಪರವಾನಿಗೆ ಬೇಕಿಲ್ಲ, ನಮ್ಮ ಸುಖಕ್ಕೆ ನಾವೇ ಮಾಲೀಕರು ನಾವೇ ಜವಾಬ್ದಾರರು.
ಅಂಗೈಲಿ ಅರಮನೆ ನಮ್ಮದಾಗಿಸಿಕೊಳ್ಳುವ ಆಸೆ ಪ್ರಯತ್ನ ಪ್ರತಿಯೊಬ್ಬ ನಾಗರಿಕನದ್ದಾಗಿರಲಿ. ಪ್ರತಿಯೊಬ್ಬನ ಅಭಿಲಾಸೆ ಇಡೇರಿಸಿಕೊಳ್ಳುವತ್ತ ಮನ ವಾಲಲಿ. ಬಾಹ್ಯ ವೈಭೋಗಕ್ಕಿಂತ ಮನಸ್ಸಿನ ನೆಮ್ಮದಿಯತ್ತ ಬದುಕು ಕಟ್ಟಿಕೊಂಡರೆ ಖಂಡಿತ ಎಲ್ಲರಲ್ಲೂ ಅವರವರ ಅಂಗೈಲೇ ಅರಮನೆ ಕಾಣಬಹುದು.


