ಕೊಲ್ಹಾರ – ಬೀಳಗಿ ನಡುವಿನ ಸೇತುವೆ ಮೇಲೆ ನಡೆದ ಅಪಘಾತ | ಚಾಲಕ ನಾಪತ್ತೆ, ಸಾವಿನ ಶಂಕೆ! | ಚಾಲಕ ಸಹಾಯಕನ ರಕ್ಷಣೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಿಜಯಪುರ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟಿಪ್ಪರ್ ಒಂದು ಕೊಲ್ಹಾರ ಸೇತುವೆಯಿಂದ ಕೃಷ್ಣಾ ನದಿಗೆ ಉರುಳಿ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ನಿಂದ ಕೊಲ್ಹಾರದತ್ತ ಬರುತ್ತಿದ್ದ ಟಿಪ್ಪರ್, ಕಾರನ್ನು ಓವರ್ಟೇಕ್ ಮಾಡುವ ವೇಳೆ ಕಾರಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯ ಮೇಲಿಂದ ನದಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಟಿಪ್ಪರ್ ಚಾಲಕ ಬಾಗಲಕೋಟೆ ಜಿಲ್ಲೆ ಬೆಣ್ಣೂರ ಗ್ರಾಮದ ಸಂತೋಷ ಕೋಟಿ ವಾಹನದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಚಾಲಕ ಸಾವನ್ನಪ್ಪಿದ ಶಂಕೆ ಬಲವಾಗಿದೆ.
ರಾತ್ರಿಯಾದ ಹಿನ್ನೆಲೆಯಲ್ಲಿ ಚಾಲಕನ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಗುರುವಾರ ಕ್ರೇನ್ ಯಂತ್ರದ ಸಹಾಯದಿಂದ ಟಿಪ್ಪರ್ ಅನ್ನು ಹೊರತೆಗೆದು ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಟಿಪ್ಪರ್ನಲ್ಲಿದ್ದ ಬೀದರ್ ಜಿಲ್ಲೆಯ ಯರಣಗಿ ಗ್ರಾಮದ ನಿವಾಸಿ ಸಂಜು ಮೂಲಗೆ (28) ಅಪಘಾತದ ನಂತರ ನದಿಯಲ್ಲಿ ಮುಳುಗಿದ ಟಿಪ್ಪರ್ ಮೇಲೆಯೇ ಕುಳಿತುಕೊಂಡು ರಕ್ಷಣೆಗಾಗಿ ಮೊರೆ ಇಟ್ಟಿದ್ದು, ಸ್ಥಳೀಯ ಮೀನುಗಾರರು ತೆಪ್ಪದ ಮೂಲಕ ತೆರಳಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಅಪಘಾತದ ಪರಿಣಾಮವಾಗಿ ಕೆಲಕಾಲ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಳಿಕ ಬೀಳಗಿ ಮತ್ತು ಕೊಲ್ಹಾರ ಪೊಲೀಸರು ಅಪಘಾತಕ್ಕೀಡಾದ ಕಾರನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.
ಈ ಘಟನೆಯು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

