ಶ್ರಾವಣ ಮಾಸ ಮುಗಿಯುವವರೆಗೆ ಪ್ರತಿದಿನ ಬೆಳಿಗ್ಗೆ ಪ್ರವಚನ | ಭಕ್ತರಿಗೆ ನಿತ್ಯ ಪ್ರಸಾದ ವ್ಯವಸ್ಥೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕರ್ನಾಟಕ–ಮಹಾರಾಷ್ಟ್ರ ಗಡಿ ಭಾಗದ ಬಾಲಗಾವ್, ಕಾತ್ರಾಳ, ಅಕ್ಕಲವಾಡಿ ಹಾಗೂ ಬೋರಗಿ ಗ್ರಾಮಗಳ ಮಧ್ಯಭಾಗದಲ್ಲಿರುವ ಗುರುದೇವ ಆಶ್ರಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪರಮಪೂಜ್ಯ ಡಾ. ಅಮೃತಾನಂದ ಸ್ವಾಮೀಜಿಯವರಿಂದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರುದೇವ ಆಶ್ರಮ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪರಮಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ನಿರ್ಮಾಣಗೊಂಡಿರುವ ಗುರುದೇವ ಆಶ್ರಮವು ಈ ಭಾಗದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಿದ್ದೇಶ್ವರ ಮಹಾಸ್ವಾಮಿಗಳು ಆಶ್ರಮದಲ್ಲಿ ಹಲವು ದಿನಗಳ ಕಾಲ ವಾಸ್ತವ್ಯವಿದ್ದು, ಭಕ್ತರಿಗೆ ಆಧ್ಯಾತ್ಮಿಕ ಜ್ಞಾನ, ಧ್ಯಾನ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಕುರಿತು ತಮ್ಮ ಪ್ರವಚನಗಳ ಮೂಲಕ ಅಮೂಲ್ಯ ಸಂದೇಶಗಳನ್ನು ನೀಡಿದ್ದರು.
ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ 17ರಿಂದ ಶ್ರಾವಣ ಮಾಸ ಮುಗಿಯುವವರೆಗೆ ಪ್ರತಿದಿನ ಬೆಳಿಗ್ಗೆ 6.30ರಿಂದ 7.30ರವರೆಗೆ ಗುರುದೇವ ಆಶ್ರಮದಲ್ಲಿ ಡಾ. ಅಮೃತಾನಂದ ಸ್ವಾಮೀಜಿಯವರ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
ಬಾಲಗಾವ್, ಕಾತ್ರಾಳ, ಅಕ್ಕಲವಾಡಿ, ಬೋರಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಯುವಕರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮೀಜಿಯವರ ಜ್ಞಾನಾಮೃತವಾಣಿಯನ್ನು ಆಲಿಸಿ, ಪ್ರವಚನದ ಸದುಪಯೋಗ ಪಡೆದುಕೊಳ್ಳಬೇಕೆಂದು ಗುರುದೇವ ಆಶ್ರಮ ಸೇವಾ ಸಮಿತಿ ಮನವಿ ಮಾಡಿದೆ.
ಪ್ರತಿದಿನ ಪ್ರವಚನದ ನಂತರ ಆಗಮಿಸುವ ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಆಸನ, ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಆಶ್ರಮ ಸೇವಾ ಸಮಿತಿ ಹಾಗೂ ಸೇವಾಭಾವಿ ಸದ್ಭಕ್ತರ ಸಹಕಾರದಿಂದ ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ.

