ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ೨೦೧೫ರ ಅನ್ವಯ, ವಿವಿಧ ಕಾರಣಗಳಿಂದ ಪೋಷಕರ ಆಸರೆಯಿಲ್ಲದ ಮಕ್ಕಳಿಗೆ ತಾತ್ಕಾಲಿಕ ಆರೈಕೆ ನೀಡುವ ಪೋಷಕತ್ವ ಯೋಜನೆಗೆ ವಿಜಯಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಅರ್ಹ ಸಾಕು ಪೋಷಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯದಿಂದ ಸಾವು ಅಥವಾ ಇನ್ನಿತರ ಕಾರಣಗಳಿಂದಾಗಿ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳನ್ನು ಅವರ ವಿಸ್ತೃತ ಕುಟುಂಬ ಸದಸ್ಯರು ಅಥವಾ ಅಸಂಬಂಧಿತ ವ್ಯಕ್ತಿ ಅಥವಾ ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕಾರಣಾಂತರಗಳಿಂದ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ೦೭ ರಿಂದ ೧೮ ವರ್ಷದೊಳಗಿನ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ಒದಗಿಸುವುದು ಈ ಯೋಜನೆಯಡಿ ಸೇರಿದೆ. ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ೨೦೨೬-೨೭ನೇ ಸಾಲಿನಲ್ಲಿ ಪೋಷಕತ್ವ ಕಾರ್ಯಕ್ರಮದಡಿ ಮಾರ್ಗಸೂಚಿಯಂತೆ ಅರ್ಹತಾ ಸಂಭವನೀಯ ಸಾಕು ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬಿ೪/೩, ವಿವೇಕ ನಗರ ಪಶ್ಚಿಮ, ವಿಜಯಪುರ ಕಚೇರಿಯನ್ನು ಖುದ್ದಾಗಿ ಅಥವಾ ಕಚೇರಿ ದೂರವಾಣಿ ಸಂಖ್ಯೆ ೦೮೩೫೨-೨೯೫೨೬೧ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ವಿಜಯಪುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
