ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಪ್ರತಿಷ್ಠಿತ ಮಹಾಲಕ್ಷ್ಮಿ
ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಅಭಿಯಂತರರ ವಿಶೇಷ ಸಭೆ ನಡೆಸಲಾಯಿತು. ಕಟ್ಟಡ ನಿರ್ಮಾಣ ಸೇರಿದಂತೆ ಬ್ಯಾಂಕಿನ ವತಿಯಿಂದ ಕಲ್ಪಿಸಲಾಗುವ ವಿವಿಧ ಆರ್ಥಿಕ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಯಿತು.
ಸಹಕಾರದಿಂದ ಸಮರ್ಥನ ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ಈ ವಿಶೇಷ ಸಮಾಲೋಚನಾ ಸಭೆಯಲ್ಲಿ ಬ್ಯಾಂಕಿನ ವಿವಿಧ ಸೌಕರ್ಯ ಹಾಗೂ ಸೌಲಭ್ಯಗಳ ಬಗ್ಗೆ ಸಭೆಯಲ್ಲಿ ವಿಸ್ತಾರವಾಗಿ ತಿಳಿಸಲಾಯಿತು.
ಈ ವೇಳೆ ಬ್ಯಾಂಕಿನ ಅಧ್ಯಕ್ಷ ಮುಕುಂದ ಕುಲಕರ್ಣಿ ಮಾತನಾಡಿ, ಸಹಕಾರ ಬ್ಯಾಂಕುಗಳು ಜನರ ಆರ್ಥಿಕ ಸಬಲೀಕರಣಲ್ಲಿ ಅನುಪಮ ಪಾತ್ರ ವಹಿಸುತ್ತಿವೆ, ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಉದ್ದೇಶಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೂ ಕೊಡಗೆ ನೀಡಿದೆ, ಸಮಾಜದಲ್ಲಿ ಅಭಿಯಂತರರ ಪಾತ್ರ ಪ್ರಮುಖವಾಗಿದೆ, ಎಲ್ಲ ಕಟ್ಟಡಗಳ ಹಿಂದೆ ಅಭಿಯಂತರರ ಶ್ರಮ ಅಡಗಿದೆ ಎಂದರು.
ಅಭಿಯಂತರರ ಸಂಘದ ಅಧ್ಯಕ್ಷ ಅರುಣ ಮಠ ಮಾತನಾಡಿ, ಸಹಕಾರ ಬ್ಯಾಂಕುಗಳು ಆರ್ಥಿಕ ಪ್ರಗತಿಗೆ ನೀಡುತ್ತಿರುವ ಕೊಡುಗೆ ಅನನ್ಯ, ಸಹಕಾರ ಚಳವಳಿ ಒಂದು ಬಹುಮುಖ್ಯ ಅಂಗ, ಉತ್ತಮ ಮನೆ ನಿರ್ಮಾಣ ಪ್ರತಿಯೊಬ್ಬರ ಕನಸು, ಈ ಕನಸು ಈಡೇರಿಸುವ ನಿಟ್ಟಿನಲ್ಲಿ ಅಭಿಯಂತರರು ಶ್ರಮಿಸುತ್ತಾರೆ, ಪ್ರತಿಯೊಬ್ಬರ ಕನಸಿನ ಮನೆಗೆ ಸಾಕಾರ ರೂಪ ನೀಡುವವರು ಅಭಿಯಂತರರು, ಈ ನಿಟ್ಟಿನಲ್ಲಿ ಸಹಕಾರ ಬ್ಯಾಂಕು ಮುಂದೆ ಬಂದು ವಿವಿಧ ಸೌಲಭ್ಯ ಒದಗಿಸಲು ಮುಂದಾಗಿರುವುದು ಸಂತೋಷ ತಂದಿದೆ ಎಂದರು.
ಗಂಗಾಧರ, ಅಶ್ರಫ್ ಕುಡಚಿ, ಮಹೇಶ ರಾಂಪೂರ, ಮಹಾಲಕ್ಷ್ಮೀ ಬ್ಯಾಂಕ್ ಉಪಾಧ್ಯಕ್ಷ ವಿಕಾಸ್ ಪದಕಿ, ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ಶಂಕರ್ರಾವ್ ಕುಲಕರ್ಣಿ, ಪವನ್ ಕುಲಕರ್ಣಿ, ಬಸವರಾಜ್ ಪತ್ತಾರ, ರಾಧಾ ತಾವರಗೇರಿ, ಬ್ಯಾಂಕಿನ ಪ್ರಬಂಧಕಿ ಪದ್ಮಾವತಿ ಕುಲಕರ್ಣಿ ಬ್ಯಾಂಕಿನ ಆರ್ಥಿಕ ಸೌಲಭ್ಯ ಹಾಗೂ ಸೇವೆಗಳ ಕುರಿತು ವಿವರಣೆ ನೀಡಿದರು. ಬ್ಯಾಂಕಿನ ನಿರ್ದೇಶಕಿ ಹಾಗೂ ಅಭಿಯಂತರರ ಸಂಘದ ನಿರ್ದೇಶಕಿಯೂ ಆಗಿರುವ ವೀಣಾ ಟಂಕಸಾಲಿ ವಂದಿಸಿದರು.
ಈ ಸಂದರ್ಭದಲ್ಲಿ ಅಭಿಯಂತರರ ಸಂಘದ ಪದಾಧಿಕಾರಿಗಳು ಬ್ಯಾಂಕಿನ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

