ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮತದಾರರ ಪಟ್ಟಿಯನ್ನು ಹೆಚ್ಚು ನಿಖರವಾಗಿ ಹಾಗೂ ಪಾರದರ್ಶಕವಾಗಿಡುವ ಉದ್ದೇಶದಿಂದ ನಮ್ಮ ರಾಜ್ಯದಲ್ಲಿ ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ್ ಹೇಳಿದರು.
ನಗರದ ಮಿನಿ ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನವನ್ನು ಜೂನ್ 30 ರಿಂದ ಜುಲೈ 29 ವರೆಗೆ ಒಂದು ತಿಂಗಳವರೆಗೆ ನಡೆಸಲಾಗುವುದು, ಪ್ರಸ್ತುತ ನಡೆಯುತ್ತಿರುವ 14 ನೆಯ ವಿಶೇಷ ಸಮಗ್ರ ಪರಿಷ್ಕರಣೆ ಎಂದು ಪರಿಗಣಿಸಲಾಗಿದೆ.
2002 ರಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರ ಮಕ್ಕಳು, ಸಂಬಂಧಿಕರು ಅರ್ಹರಾಗಿರುತ್ತಾರೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗೆ ಹೋಗಬಾರದು, ಅನರ್ಹ ಮತದಾರ ಹೆಸರನ್ನು ತೆಗೆದು ಹಾಕಿ ಪಾರದರ್ಶಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಎಸ್ಐಆರ್ ನ ಪ್ರಮುಖ ಉದ್ದೇಶವಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭದಿಂದ ಪ್ರತಿ ಮನೆಗಳಿಗೆ ಭೂತ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪೂರ್ವ ಮುದ್ರಿತ ಎಣಿಕೆ ನಮೂನೆಯನ್ನು ವಿತರಿಸಲಿದ್ದು ಅವುಗಳನ್ನು ಒಂದು ಫೋಟೋ ಜೊತೆ ಭರ್ತಿ ಮಾಡಿ ಬಿ ಎಲ್ ಒ ಗಳಿಗೆ ಹಿಂತಿರುಗಿಸಬೇಕು. ಮನೆಯಲ್ಲಿ ಯಾರು ಇಲ್ಲದಿದ್ದರೆ ಅಂತ ಮನೆಗಳಿಗೆ ಬಿ ಎಲ್ ಓಗಳು 3 ಬಾರಿ ಕಡ್ಡಾಯವಾಗಿ ಭೇಟಿ ನೀಡಬೇಕು. ನಂತರವು ಅವರು ಸಂಪರ್ಕಕ್ಕೆ ಸಿಗದಿದ್ದರೆ ಅವರನ್ನು ವಿಚಾರಣೆ ಕರೆಯುತ್ತೇವೆ, ಹಾಗೂ ಅರ್ಜಿ ನಮೂನೆಯನ್ನು ಯಾರು ಭರ್ತಿ ಮಾಡಿ ಕೊಡುವುದಿಲ್ಲವೋ ಅವರನ್ನು ಕಡ್ಡಾಯವಾಗಿ ವಿಚಾರಣೆಗೆ ಕರೆದು ಅವರಿಂದ ಮಾಹಿತಿ ಪಡೆಯುತ್ತೇವೆ ಎಂದರು.
ಮೊದಲು ಪ್ರತಿ ವಾರ್ಡ್ ಗೆ 1500 ಮತದಾರ ಪಟ್ಟಿ ಇರುತ್ತಿತ್ತು. ಈಗ ಅದನ್ನು 1200 ಸೀಮಿತಗೊಳಿಸಲಾಗಿದೆ ಎಂದರು.
ನಮ್ಮ ಭಾಗದಲ್ಲಿ 232 ಪೋಲಿಂಗ್ ಇದ್ದು 232 ಬಿ ಎಲ್ ಓ ಗಳನ್ನು ನೇಮಕ ಮಾಡಲಾಗಿದೆ. 10 ಬಿ ಎಲ್ ಓ ಗಳಿಗೆ ಒಬ್ಬ ಸೂಪರ್ವೈಸರ್ ನೇಮಕ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಮತದಾರರ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ.2002 ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಂತವರು ಜನನ ಪ್ರಮಾಣ ಪತ್ರ , ಶೈಕ್ಷಣಿಕ ದಾಖಲಾತಿ ಹೀಗೆ ಒಟ್ಟು 12 ದಾಖಲೆಗಳಲ್ಲಿ ಒಂದು ದಾಖಲೆಯಾದರು ಇರಬೇಕು ಎಂದು ಹೇಳಿದರು.
ಮತದಾರರು ತಮ್ಮ ಸ್ವಯಂ ದೃಢೀಕರಣದೊಂದಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಅನಿಲ್ ಬಡಿಗೇರ ಇದ್ದರು.

