ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸ್ವಿಚ್ ಆನ್ ಕಾರ್ಯಕ್ರಮ ಯಶಸ್ವಿ ನಡೆಯಿತು.
ಶುಕ್ರವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಿವಿ, ಮೂಗು ಮತ್ತು ಗಂಟಲು(ENT) ವಿಭಾಗದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿನ ಸ್ವಿಚ್ ಆನ್ ಮಾಡಲಾಯಿತು. ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ. ಅರುಣ ಚಂ. ಇನಾಮದಾರ, ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಆಸ್ಪತ್ರೆಯ ಅಧೀಕ್ಷಕ ಡಾ. ಸಂಜೀವ ಬೆಂಟೂರ, ಹಿರಿಯ ಉಪಪ್ರಾಂಶುಪಾಲ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಕಾಕ್ಲಿಯರ್ ಇಂಪ್ಲಾಂಟ್ ಸಮನ್ವಯ ಅಧಿಕಾರಿ ಡಾ. ಎಚ್. ಟಿ. ಲತಾದೇವಿ ಹಾಗೂ ಇನ್.ಎನ್.ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಕರಡಿ ಉಪಸ್ಥಿತರಿದ್ದರು.
ಹುಟ್ಟು ಕಿವುಡುತನದಿಂದ ಬಳಲುತ್ತಿದ್ದ ಈ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಸ್ವಿಚ್ ಆನ್ ಪ್ರಕ್ರಿಯೆಯ ಮೂಲಕ ಮೊದಲ ಬಾರಿಗೆ ಧ್ವನಿಯನ್ನು ಆಲಿಸುವ ಅನುಭವವನ್ನು ಮಗು ಪಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ. ಅರುಣ ಚಂ. ಇನಾಮದಾರ, ವೈದ್ಯರ ಪರಿಣತಿ, ಪಾಲಕರ ಸಹಕಾರ ಹಾಗೂ ಆಸ್ಪತ್ರೆಯ ಸೌಲಭ್ಯಗಳ ಸಮನ್ವಯದಿಂದ ಇಂಥ ಜೀವಿತ ಪರಿವರ್ತನೆಯ ಚಿಕಿತ್ಸೆಗಳು ಸಾಧ್ಯವಾಗುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ವೈದ್ಯರು ಮತ್ತು ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.
ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಿದ ಡಾ. ಎಚ್. ಟಿ. ಲತಾದೇವಿ, ಶಸ್ತ್ರಚಿಕಿತ್ಸೆಯ ನಂತರ ಎರಡು ವರ್ಷಗಳ ಕಾಲ ವಾಕ್-ಶ್ರವಣ ತರಬೇತಿ ನೀಡಲಾಗುತ್ತದೆ. ಇದರ ಮೂಲಕ ಮಗು ಸಾಮಾನ್ಯ ಮಕ್ಕಳಂತೆ ಶಿಕ್ಷಣ ಪಡೆದು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳ ಪಾಲಕರಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು. ಅಲ್ಲದೇ, ಕಾಕ್ಲಿಯರ್ ಇಂಪ್ಲಾಂಟ್ ಕಿಟ್ ಅನ್ನು ಹಸ್ತಾಂತರಿಸಿ ಮಗುವಿನ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ ಮಾತನಾಡಿ, ಕಾಕ್ಲಿಯರ್ ಇಂಪ್ಲಾಂಟ್ ಸೌಲಭ್ಯದ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದ್ದು, ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಇಂಥ ಅತ್ಯಾಧುನಿಕ ಚಿಕಿತ್ಸೆ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ ರೂ. 7.50 ಲಕ್ಷದಿಂದ ರೂ.15 ಲಕ್ಷದವರೆಗೆ ವೆಚ್ಚವಾಗುತ್ತದೆ. ಆದರೆ ಸರಕಾರದ ನಾನಾ ಯೋಜನೆಗಳಡಿ ಅರ್ಹ ಫಲಾನುಭವಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಇಂಥ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಲಭ್ಯವಿವೆ.
ಆಸ್ಪತ್ರೆಯ ವಾಕ್-ಶ್ರವಣ ವಿಭಾಗದಲ್ಲಿ ನಡೆದ ಸ್ವಿಚ್ ಆನ್ ಕಾರ್ಯಕ್ರಮದಲ್ಲಿ ಒಂದೂವರೆ ವರ್ಷದ ಮಗುವಿಗೆ ಮೊದಲ ಬಾರಿಗೆ ಧ್ವನಿ ಕೇಳಿಸಿದಾಗ ಮಗು ಸಂತಸದಿಂದ ಪ್ರತಿಕ್ರಿಯಿಸಿತು. ವಾಕ್-ಶ್ರವಣ ತಜ್ಞರಾದ ಶ್ರೀ ಸಂತೋಷ್ ಹಾಗೂ ಕುಮಾರಿ ರಕ್ಷಿತಾ ಅವರು ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಶಸ್ತ್ರಚಿಕಿತ್ಸೆ ಪಡೆದ ಮಗುವಿನ ಪಾಲಕರು ಮಾತನಾಡಿ, ನಮ್ಮ ಮಗುವಿನ ಜೀವನದಲ್ಲಿ ಹೊಸ ಆಶಾಕಿರಣ ಮೂಡಿದೆ. ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಸೇವೆಯಿಂದ ನಮ್ಮ ಮಗುವಿನ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿದೆ ಎಂದು ಕೃತಜ್ಞತೆ ಸಲ್ಲಿಸಿದರು.

