ಮಳೆ ಇಲ್ಲದೇ ಪರದಾಡುತ್ತಿರುವ ರೈತರು | ಐದು ವರ್ಷಗಳಿಂದ ಕಾಲುವೆ ಸ್ವಚ್ಛಗೊಳಿಸದ ಆರೋಪ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಚವನಭಾವಿ ಗ್ರಾಮದ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ನೀರು ಪೂರೈಸುವ ಎಎಲ್ಬಿಸಿ ಕಾಲುವೆ (ಡಿಸ್ಟ್ರಿಬ್ಯೂಟರ್-೩೯) ನಿರ್ವಹಣೆ ಕೊರತೆಯಿಂದ ಕಾಲುವೆಯಲ್ಲಿ ಹೂಳು, ಕಸ, ಕಲ್ಲುಗಳು ಹಾಗೂ ಮುಳ್ಳಿನ ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ತಾಲ್ಲೂಕಿನ ನಾಲತವಾಡ, ಅರೇಶಂಕರ, ಕಮಲಾಪುರ ಹಾಗೂ ಎಣ್ಣಿವಡಗೇರಿ ಮಾರ್ಗವಾಗಿ ಚವನಭಾವಿ ಗ್ರಾಮದ ರೈತರ ಜಮೀನುಗಳಿಗೆ ನೀರು ಪೂರೈಸುವ ಈ ಕಾಲುವೆಯ ಹಲವು ಭಾಗಗಳಲ್ಲಿ ಮಣ್ಣು, ಕಲ್ಲುಗಳು, ಆಪು ಹುಲ್ಲು ಹಾಗೂ ಗಿಡಗಂಟಿಗಳು ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗಿವೆ. ಸುಮಾರು ಐದು ವರ್ಷಗಳಿಂದ ಕಾಲುವೆಯ ಹೂಳೆತ್ತುವ ಕಾರ್ಯ ನಡೆದಿಲ್ಲ ಎಂದು ರೈತರು ದೂರಿದ್ದಾರೆ.
ಸಧ್ಯ ಮಳೆ ಇಲ್ಲದೇ ಪರದಾಡುತ್ತಿರುವ ರೈತರು ನೀರಿಗಾಗಿ ಹವಣಿಸುತ್ತಿದ್ದು, ಈ ಕಾಲುವೆ ಅನುಕೂಲವಾಗುತ್ತಿದ್ದರೂ, ಸಮರ್ಪಕ ನೀರು ತಲುಪುಪದಿರುವ ಕಾರಣ ತಮ್ಮ ಬೆಳೆಗಳು ಹಾಳಾಗುವ ಆತಂಕ ಎದುರಾಗಿದೆ. ಅಲ್ಲದೇ ಇದೇ ಕಾಲುವೆ ನೀರನ್ನು ಅವಲಂಬಿಸಿರುವ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಾವರಿ ಕಾಲುವೆಯನ್ನು ಸಮರ್ಪಕವಾಗಿ ನಿರ್ವಹಿಸದ ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ರೈತರು ಹರಿಹಾಯ್ದರು.
ಕೂಡಲೇ ಕಾಲುವೆಯಲ್ಲಿರುವ ಹೂಳು, ಕಸ, ಕಲ್ಲುಗಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ, ಚವನಭಾವಿ ಗ್ರಾಮದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಕೆಬಿಜೆಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಲ್ಲಪ್ಪ ಮಾಲಿನ, ಅಂಬ್ರೇಶ ನಾಲತವಾಡ, ಸಿದ್ದಪ್ಪ ಗುರಿಕಾರ, ಸಿದ್ದಪ್ಪ ಚಲವಾದಿ, ಹಣಮಂತ ಗೋಗಿ, ಲಕ್ಷ್ಮಣ ಈಳಗೇರ, ಶಿವಪ್ಪ ಕಾರಕೂರ, ಹಣಮಂತ ನಾಲತವಾಡ, ಯಮನಪ್ಪ ಬಿರಾದಾರ, ಸಂಗಪ್ಪ ಕುಂಬಾರ, ಗದ್ದೆಪ್ಪ ನಾಲತವಾಡ, ಲಕ್ಕಪ್ಪ ನಾಲತವಾಡ, ಮೌನೇಶ ಬಿರಾದಾರ, ಜಕ್ಕಪ್ಪ ನಾಲತವಾಡ, ಯಮನಪ್ಪ ಚಲವಾದಿ, ಭೀರಪ್ಪ ಮದರಿ, ಶಂಕ್ರಯ್ಯ ಹಿರೇಮಠ, ಶಿವಪ್ಪ ಮದರಿ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

