ವಾಹನ ಗ್ಯಾರೇಜ್ನಲ್ಲಿ ಧೂಳು ಹಿಡಿಯುತ್ತಿದ್ದರೂ ನಿರ್ಲಕ್ಷ್ಯ | ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಗ್ರಾಮದಲ್ಲಿ ನೈರ್ಮಲ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ನೀಡಲಾದ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ನಿರ್ವಹಣೆ (ಕಸದ) ವಾಹನವು ಕಳೆದ ಮೂರು ತಿಂಗಳಿನಿಂದ ಗ್ಯಾರೇಜ್ನಲ್ಲಿ ಮೂಲೆ ಸೇರಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗ್ರಹಣ ಹಿಡಿದಂತಾಗಿರುವ
ವಾಹನದ ಬಾಡಿಯು ಸಂಪೂರ್ಣವಾಗಿ ಹಾನಿಗೊಂಡಿದ್ದು, ದುರಸ್ತಿಗಾಗಿ ಖಾಸಗಿ ಗ್ಯಾರೇಜ್ಗೆ ನೀಡಲಾಗಿತ್ತು. ಆದರೆ, ಹಣ ಪಾವತಿಸದ ಕಾರಣ ಗ್ಯಾರೇಜ್ ಮಾಲೀಕರು ರಿಪೇರಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಕಳೆದ ಹಲವು ತಿಂಗಳುಗಳಿಂದ ವಾಹನವು ಅನಾಥವಾಗಿ ನಿಂತಿದೆ. ಇದರಿಂದಾಗಿ ಸರ್ಕಾರಿ ಆಸ್ತಿ ಹಾಳಾಗುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಾಹನವು ಜಂಗ್ ಹಿಡಿಯುವ ಸ್ಥಿತಿಗೆ ತಲುಪಿದೆ.
ಈ ಕುರಿತು ಪತ್ರಿಕೆಯು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನ ನಡೆಸಿದ್ದಾರೆ:
ಗ್ರಾಮದಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೆ, ಇತ್ತ ಲಕ್ಷಾಂತರ ರೂಪಾಯಿ ವೆಚ್ಚದ ಸರ್ಕಾರಿ ವಾಹನ ಗ್ಯಾರೇಜ್ನಲ್ಲಿ ಧೂಳು ಹಿಡಿಯುತ್ತಿದೆ. ಮೇಲಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ವಾಹನವನ್ನು ದುರಸ್ತಿ ಮಾಡಿಸಿ ಗ್ರಾಮದ ನೈರ್ಮಲ್ಯ ಕಾರ್ಯಕ್ಕೆ ಬಳಸಿಕೊಳ್ಳಬೇಕೆಂದು ಮೋರಟಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಾಜಿ ಕಾರ್ಯದರ್ಶಿ ನೀಡಿದ ಸ್ಪಷ್ಟನೆ
ಈ ಬಗ್ಗೆ ಪಂಚಾಯಿತಿಯ ಮಾಜಿ ಮಹಿಳಾ ಕಾರ್ಯದರ್ಶಿಯವರನ್ನು ವಿಚಾರಿಸಿದಾಗ, “ವಾಹನದ ಬಾಡಿ ಹಾಳಾಗಿದ್ದರಿಂದ ಅದನ್ನು ದುರಸ್ತಿಗೆ ನೀಡಲಾಗಿತ್ತು. ಅಡ್ವಾನ್ಸ್ ಹಣ ಕೊಟ್ಟು ರಿಪೇರಿಗೆ ನೀಡಿದ್ದೆವು. ಆದರೆ ವಾಟರ್ಮ್ಯಾನ್ ತಂದು ಗ್ಯಾರೇಜ್ ಮುಂದೆ ನಿಲ್ಲಿಸಿದ್ದಾನೆ. ಪ್ರಸ್ತುತ ನಾನು ಬೇರೆ ಪಂಚಾಯಿತಿಗೆ ವರ್ಗಾವಣೆಯಾಗಿದ್ದು, ಪ್ರಭಾರವನ್ನು ನೂತನ ಪಿಡಿಒ ಅವರಿಗೆ ಹಸ್ತಾಂತರಿಸಿದ್ದೇನೆ” ಎಂದು ತಿಳಿಸಿದರು.
ಪೂರ್ಣ ಮಾಹಿತಿ ಇಲ್ಲ :ಪಿಡಿಒ
ಇನ್ನು ಪ್ರಸ್ತುತ ಕರ್ತವ್ಯದಲ್ಲಿರುವ ನೂತನ ಪಿಡಿಒ ಅವರನ್ನು ಸಂಪರ್ಕಿಸಿದಾಗ, “ನಾನು ಈ ಪಂಚಾಯಿತಿಗೆ ಬಂದು ಕೇವಲ ಒಂದು ವಾರವಾಗಿದೆ. ವಾಹನದ ರಿಪೇರಿ ಹಾಗೂ ಅದರ ಸಮಸ್ಯೆಗಳ ಕುರಿತು ಪೂರ್ಣ ಮಾಹಿತಿ ಇಲ್ಲ. ಈ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ” ಎಂದು ಹಾರಿಕೆ ಉತ್ತರ ನೀಡಿದ್ದಾರೆ.

