ಮುಸುಕಿನ ಜೋಳ ಬೆಳೆ ಪರಿಶೀಲನೆ, ದ್ವಿದಳ ಧಾನ್ಯ ಬೆಳೆ ಪರಿವರ್ತನೆಗೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ತಾಲೂಕಿನಾದ್ಯಂತ ಮುಸುಕಿನ ಜೋಳಕ್ಕೆ ಬೂಜುರೋಗ ಅಥವಾ ಬಿಳಿ ಸುಳಿರೋಗ ಕಾಣಿಸಿಕೊಂಡಿದ್ದು ರೈತರು ಆತಂಕಕ್ಕಿಡಾಗಿದ್ದರೆ. ಈ ಹಿನ್ನೆಲೆ ಶುಕ್ರವಾರ ಜಂಟಿ ಕೃಷಿ ನಿರ್ದೇಶಕ ಡಾ. ಕೆ.ಹೆಚ್ ರವಿ, ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್ ಅವರು ಹಂಪಾಪುರ ಹೋಬಳಿಯ ನಾಯಕನಹುಂಡಿ, ಕರಿಗಾಳ, ಕೋಳಗಾಲ, ಮಾದಾಪುರ, ಹ್ಯಾಂಡ್ ಪೋಸ್ಟ್ ಯರಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ರೋಗದ ತಾಕುಗಳನ್ನು ಪರಿಶೀಲನೆ ನಡೆಸಿದರು. ರೋಗ ಬರಲು ಕಾರಣವೇನು? ರೋಗ ನಿಯಂತ್ರಣಕ್ಕೆ ರೈತರು ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು? ಮುಸುಕಿನ ಜೋಳ ಬಿತ್ತನೆಗೂ ಮುನ್ನ ಏನು ಮಾಡಬೇಕು, ತದನಂತರ ಯಾವ ಔಷಧಿ ಸಿಂಪಡಿಸಬೇಕು, ಮಣ್ಣಿನ ಫಲವತ್ತತೆಗೆ ಬೇರೆ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದರ ಕುರಿತು ರೈತರಿಗೆ ಮಾಹಿತಿ ಮತ್ತು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕರಾದ ಡಾ.ಕೆ ಹೆಚ್ ರವಿ ಮಾತನಾಡಿ, ವರ್ಷಕ್ಕೆ ಎರಡು-ಮೂರು ಬಾರಿ ಮುಸುಕಿನ ಜೋಳವನ್ನು ನಿರಂತರವಾಗಿ ಬೆಳೆಯುವುದರಿಂದ ರೋಗ ಉಲ್ಬಣಗೊಳ್ಳುತ್ತಿದೆ. ಮುಸುಕಿನ ಜೋಳದ ಬದಲಾಗಿ ರಾಗಿ, ಸೋಯಾ ಅವರೆ, ಅಲಸಂದೆ ಮತ್ತು ತೊಗರಿ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡಬೇಕು. ಮೇವಿನ ಉದ್ದೇಶಕ್ಕಾಗಿ (ಸೈಲೇಜ್) ಒಂದೇ ತಾಕಿನಲ್ಲಿ ವರ್ಷಕ್ಕೆ ಎರಡು-ಮೂರು ಬಾರಿ ಯಾವುದೇ ಬೀಜೋಪಚಾರ ಮಾಡದೆ ಹಾಗೂ ಪೊಟಾಶ್ ಮತ್ತು ಜಿಂಕ್ ಸಲ್ಪೇಟ್ ಗೊಬ್ಬರ ಬಳಸದೇ ಸಾರಜನಕ ಹೆಚ್ಚಿರುವ ಗೊಬ್ಬರಗಳನ್ನು ಬಳಕೆ ಮಾಡಿರುವುದರಿಂದ ಈ ರೋಗವು ಉಲ್ಬಣವಾಗಿದೆ. ಹಾಗಾಗಿ ಕೃಷಿ ವಿಜ್ಞಾನಿಗಳು ಶಿಫಾರಸ್ಸು ಮಾಡಿರುವ ಔಷಧವನ್ನು ಸಿಂಪಡಿಸುವುದರ ಜೊತೆಗೆ ಬೆಳೆ ಪರಿವರ್ತನೆ ಮಾಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಸಾದ್, ಅಧಿಕಾರಿಗಳಾದ ಸಿದ್ದಪ್ಪಸ್ವಾಮಿ, ಪ್ರವೀಣ್, ಆತ್ಮ ಯೋಜನೆ ಸಿಬ್ಬಂದಿಗಳಾದ ರಕ್ಷಿತಾ, ವಿನಯ್ ಸೇರಿದಂತೆ ರೈತರು ಉಪಸ್ಥಿತರಿದ್ದರು.
ರೈತರು ಅನುಸರಿಸಬೇಕಾದ ಕ್ರಮಗಳು
- ಆಳವಾಗಿ ಎರಡು ಬಾರಿ ಬೇಸಿಗೆ ಉಳುಮೆ ಮಾಡಬೇಕು
- ಮುಸುಕಿನ ಜೋಳ ಬೆಳೆ ಬದಲು ರಾಗಿ, ಅಲಸಂದೆ, ತೊಗರಿ ಸೇರಿದಂತೆ ದ್ವಿದಳ ಧಾನ್ಯ ಬೆಳೆಯಬೇಕು
- ಮಳೆ ನೀರನ್ನು ಹೊಲದಲ್ಲಿಯೇ ಇಂಗಿಸಲು ಬದುಗಳನ್ನು ತೆಗೆದು ಸ್ವಚ್ಚವಾಗಿಡಬೇಕು
- ಪೊಟಾಶ್ ಇರುವ ರಸಗೊಬ್ಬರಗಳನ್ನು ಅತೀ ಹೆಚ್ಚಾಗಿ ಬಳಸಬೇಕು
- ಎಕರೆಗೆ 6 -8 ಕೆಜಿ ಜಿಂಕ್ ಸಲ್ಪೇಟ್ ಗೊಬ್ಬರವನ್ನು ಕಡ್ಡಾಯವಾಗಿ ಬಳಸಬೇಕು
- 10 ರಿಂದ 20 ದಿವಸದೊಳಗೆ ದಿವಸದೊಳಗೆ ಎರಡು ಔಷಧಿ ಸಿಂಪಡಿಸಬೇಕು
- ಭೂಮಿಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಬೆಳೆ ಗೊಬ್ಬರಗಳ ಬಳಕೆ ಮಾಡಬೇಕು
- ರಸಗೊಬ್ಬರಗಳ ಬಳಕೆ ಜೊತೆಗೆ ಬದುಗಳ ಮೇಲೆ ಕಳೆ ನಿರ್ವಹಣೆ ಮಾಡಬೇಕು.

