ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತನ್ನ ಮೇಲೆ ಫೈರಿಂಗ್ ಮಾಡಲಾಗಿದೆ ಎಂದು ಕಟ್ಟುಕಥೆ ಸೃಷ್ಟಿಸಿ ಕೆಲವರ ಮೇಲೆ ಕಳೆದ ಜೂ.೦೩ ರಂದು ನಗರದ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದ ವ್ಯಕ್ತಿ ಸೇರಿದಂತೆ ಮೂವರನ್ನು ಗುರುವಾರ ಬಂಧಿಸಿದ ಪೋಲೀಸರು ಅವರಿಂದ ಕೃತ್ಯಕ್ಕೆ ಬಳಸಿದ ಕಂಟ್ರೀ ಪಿಸ್ತೂಲ್ವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಪಿರ್ಯಾಧಿದಾರ ದಯವಂತ ತಂ. ಸಾಯಪ್ಪ ಡೇರೆ (30) ಸಾ: ಇಟ್ಟಂಗಿಹಾಳ ದೊಡ್ಡಿ ಸೇರಿದಂತೆ ಆನಂದ @ ಅನೀಲ ತಂ. ಮಾಯಪ್ಪ ಡೇರಿ (26) ಸಾ: ಇಟ್ಟಂಗಿಹಾಳ ದೊಡ್ಡಿ ಮತ್ತು ಕೊಂಡಿಬಾ ತಂ. ಭೀರಪ್ಪ ಮಾನವರ (23) ಸಾ: ಇಟ್ಟಂಗಿಹಾಳ ದೊಡ್ಡಿ ಬಂಧಿತರು.
ಕಳೆದ ಜೂ.೩ ರಂದು ದಯವಂತ ತಂ. ಸಾಯಪ್ಪ ಡೇರೆ ಈತನು ದೂರನ್ನು ನೀಡಿದ್ದು, ಅದರಲ್ಲಿ ದಿನಾಂಕ: 03-06-2026 ರಂದು ತೊರವಿ ಗ್ರಾಮದ ಹದ್ದಿಯಲ್ಲಿ ಬರುವ ತನ್ನ ಜಮೀನದಲ್ಲಿ ಇದ್ದಾಗ ಮದ್ಯಾಹ್ನ 3.00 ಗಂಟೆ ಸುಮಾರಿಗೆ ಯಾರೋ ಇಬ್ಬರೂ ಅಪರಿಚಿತ ವ್ಯಕ್ತಿಗಳು ತಮ್ಮ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಬಂದು ತನ್ನ ಹಿಂದಿನಿಂದ ಫೈರಿಂಗ್ ಮಾಡಿ ತನ್ನ ಬಲರಟ್ಟೆಗೆ ಗಾಯಗೊಳಿಸಿದ ಬಗ್ಗೆ ಹೇಳಿ, ಈ ಘಟನೆಗೆ ಒಟ್ಟು 06 ಜನರ ಮೇಲೆ ದೂರನ್ನು ಸಲ್ಲಿಸಿದ್ದನು.
ಈ ಪ್ರಕರಣದ ತನಿಖೆಯನ್ನು ಟಿ. ಎಸ್. ಸುಲ್ಪಿ, ಡಿಎಸ್ಪಿ ವಿಜಯಪುರ ಗ್ರಾಮೀಣ, ಆರ್. ಎಸ್. ಜಾನರ, ಪಿಐ ವಿಜಯಪುರ ಗ್ರಾಮೀಣ ಠಾಣೆ, ವಿನೋದ ದೊಡಮನಿ, ಪಿಎಸ್ಐ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿ ಜನರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಿ ತನಿಖೆಗೆ ವಹಿಸಲಾಗಿತ್ತು.
ತನಿಖೆ ವೇಳೆ ದೂರುದಾರನು ಮೂಲ ಎಫ್ಐಆರ್ದಲ್ಲಿ ನಮೂದಿಸಿದ ಆರೋಪಿತರೊಂದಿಗೆ ಊರಲ್ಲಿ ವೈಮನಸ್ಸುಗಳು ಇದ್ದು, ಇದೇ ಕಾರಣದಿಂದ ಏನಾದರೂ ಘಟನೆ ಸೃಷ್ಠಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಅನ್ನುವ ದುರುದ್ದೇಶವನ್ನು ಹೊಂದಿ 03 ಜನರು ಜಾಲಗೇರಿ ಗ್ರಾಮದ ಆರೋಪಿ ಆನಂದ @ ಅನೀಲ ಡೇರಿ ಈತನ ಹೊಲದಲ್ಲಿ ಸೇರಿ ಅಲ್ಲಿ ಆರೋಪಿ ಆನಂದ ಈತನು ತನ್ನ ಹತ್ತಿರ ಇದ್ದ ಕಂಟ್ರೀ ಪಿಸ್ತೂಲ್ದಿಂದ ಪಿರ್ಯಾಧಿ ದಯವಂತ ಡೇರೆ ಈತನ ಬಲಗೈ ರಟ್ಟೆಯ ಹತ್ತಿರ ಗುಂಡು ಹಾರಿಸಿ ಗಾಯಗೊಳಿಸಿದ್ದು, ನಂತರ ಗಾಯಾಳು ದಯವಂತನು ತೊರವಿ ಗ್ರಾಮದಲ್ಲಿ ತನಗೆ ಎಫ್ಐಆರ್ದಲ್ಲಿ ನಮೂದಿಸಿದ ಆರೋಪಿತರು ಫೈರಿಂಗ್ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸುಳ್ಳು ಘಟನಾ ಸ್ಥಳವನ್ನು ಸೃಷ್ಟಿಸಿ, ಪಿರ್ಯಾಧಿ ನೀಡಿದ್ದನು.
ಪ್ರಕರಣ ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದಾಖಲಾಗಿದ್ದು ತನಿಖಾ ತಂಡದ ಅಧಿಕಾರಿಗಳನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅಭಿನಂದಿಸಿದ್ದಾರೆ.

